2004ರಲ್ಲಿ ಮಾಲಾಶ್ರೀ ಅಭಿನಯದ ‘ದುರ್ಗಿ’ ಚಿತ್ರವನ್ನು ನಿರ್ದೇಶಿಸಿದ್ದ ಜನಪ್ರಿಯ ಖಳನಟ ರವಿಶಂಕರ್, 20 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ.
‘ತಮ್ಮ ಮಗ ಅದ್ವೇಶ್ಗಾಗಿ ಸಿನಿಮಾ ಮಾಡಲು ರವಿಶಂಕರ್ ಸಿದ್ಧತೆ ನಡೆಸಿದ್ದಾರೆ. ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟು ಟೀಸರ್ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ವಿಜಯದಶಮಿ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ’ ಎಂದು ಅವರ ಆಪ್ತಮೂಲಗಳು ತಿಳಿಸಿವೆ.
ತೆಲುಗು ಚಿತ್ರರಂಗದಲ್ಲಿ ವೃತ್ತಿ ಪ್ರಾರಂಭಿಸಿದ ನಟ ರವಿಶಂಕರ್ ಜನಪ್ರಿಯವಾಗಿದ್ದು ಕನ್ನಡದಲ್ಲಿ. ‘ಕೆಂಪೇಗೌಡ’ ಚಿತ್ರದಿಂದ ಪ್ರಾರಂಭಿಸಿ ಸುದೀಪ್ ಜೊತೆಗಿನ ಸಿನಿಮಾಗಳಲ್ಲಿ ಖಳನಾಯಕನಾಗಿ ಮನೆಮಾತಾದರು. ಬಳಿಕ ನಟ ಶರಣ್ ಜೊತೆ ‘ವಿಕ್ಟರಿ’, ‘ಅಧ್ಯಕ್ಷ’ ಸಿನಿಮಾಗಳಲ್ಲಿಯೂ ಪ್ರೇಕ್ಷಕರನ್ನು ರಂಜಿಸಿದರು.
ತೆಲುಗು, ತಮಿಳು ಚಿತ್ರರಂಗದಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡವರು ರವಿಶಂಕರ್. ಕನ್ನಡದಲ್ಲಿ ‘ಆರ್ಮುಗಂ ಕೋಟೆ’ ಕಟ್ಟಿರುವ ಇವರು, ತಮ್ಮ ಮಗನನ್ನು ಇಲ್ಲಿಂದಲೇ ಲಾಂಚ್ ಮಾಡಲು ಸಿದ್ಧರಾಗುತ್ತಿದ್ದಾರೆ.
‘ಸಂಖ್ಯಾಶಾಸ್ತ್ರದ ಪ್ರಕಾರ ಮಗನ ಹೆಸರು ಬದಲಿಸಿ ಸಿನಿಮಾ ಘೋಷಿಸುವ ತಯಾರಿಯಲ್ಲಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ಅವರು ಯಾವುದೇ ಮಾಹಿತಿ ನೀಡುತ್ತಿಲ್ಲ. ಆದರೆ ಈ ಅಕ್ಟೋಬರ್ಗೆ ಸಿನಿಮಾ ಸೆಟ್ಟೇರುವುದು ಖಚಿತ’ ಎಂದು ಅವರ ಆಪ್ತವಲಯ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.