ಮುಂಬೈ: 'ಹೊಸ ಆರಂಭವನ್ನು ಹಿಂತಿರುಗಿ ಸೃಷ್ಟಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಈಗಿನಿಂದಲೇ ಪ್ರಯತ್ನಿಸುವ ಮೂಲಕ ಹೊಸ ಅಂತ್ಯವನ್ನು ಸೃಷ್ಟಿಸಬಹುದು' ಎಂಬ ಕಾರ್ಲ್ ಬಾರ್ಡ್ ಅವರ ಸಾಲುಗಳನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಹಂಚಿಕೊಂಡಿರುವ ಅಧ್ಯಾಯಕ್ಕೆ 'ಹೊಸ ಅಂತ್ಯ' ಎಂದು ಹೆಸರಿಸಲಾಗಿದೆ. 'ನಾವು ತೆಗೆದುಕೊಂಡ ಕೆಟ್ಟ ನಿರ್ಧಾರಗಳು, ಮಾಡಿದ ತಪ್ಪುಗಳು, ನೋಯಿಸಿದ ಸ್ನೇಹಿತರನ್ನು ವಿಶ್ಲೇಷಿಸಲು ಸಾಕಷ್ಟು ಸಮಯವನ್ನು ವ್ಯಯಿಸಬಹುದು. ಒಂದು ವೇಳೆ, ನಾವು ಬುದ್ಧಿವಂತರಾಗಿದ್ದರೆ, ಹೆಚ್ಚು ತಾಳ್ಮೆಯಿಂದ ಇರಬೇಕಿದೆ. ನಾವು ಎಷ್ಟು ವಿಶ್ಲೇಷಿಸಿದರೂ ಸಹ ಹಿಂದಿನದನ್ನು ಬದಲಿಸಲು ಸಾಧ್ಯವಿಲ್ಲ' ಎಂದು ಅಧ್ಯಾಯದ ಆಯ್ದ ಭಾಗವು ಹೇಳುತ್ತದೆ.
'ಆದರೆ, ನಾವು ಹೊಸ ರೀತಿಯಲ್ಲಿ ಮುಂದುವರಿಯಬಹುದು. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಳೆಯ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬಹುದು ಮತ್ತು ನಮ್ಮ ಸುತ್ತಮುತ್ತಲಿನವರಿಗೆ ಒಳ್ಳೆಯವರಾಗಿ ಜೀವಿಸಬಹುದು. ನಮ್ಮನ್ನು ನಾವು ಮರು ಶೋಧಿಸಿಕೊಳ್ಳಲು ನಮಗೆ ಸಾಕಷ್ಟು ಅವಕಾಶಗಳಿವೆ. ಹಿಂದೆ ಘಟಿಸಿದ್ದರ ಮೇಲೆ ನಮ್ಮ ಮುಂದಿನ ಬದುಕನ್ನು ವ್ಯಾಖ್ಯಾನಿಸಬೇಕಿಲ್ಲ. ನಾವು ಬಯಸಿದಂತೆ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು' ಎಂಬ ಅರ್ಥವುಳ್ಳ ಬರಹವನ್ನು ಶಿಲ್ಪಾ ಹಂಚಿಕೊಂಡಿದ್ದಾರೆ.
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಜುಲೈ 19ರ ರಾತ್ರಿ ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಕುಂದ್ರಾ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಹೇಳಿದ್ದಾರೆ. ಕುಂದ್ರಾ ವಿರುದ್ಧ ಮುಂಬೈ ಪೊಲೀಸರು 1,500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯವರ ಪಾತ್ರ ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ವೈಷ್ಣೋದೇವಿಯ ದರ್ಶನ ಪಡೆದ ನಟಿಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ ಅವರನ್ನು ವಿವಾಹವಾಗುವುದಕ್ಕೂ ಮುಂಚೆ ರಾಜ್ ಕುಂದ್ರಾ ಕವಿತಾರನ್ನು ಮದುವೆಯಾಗಿ ಲಂಡನ್ನಲ್ಲಿ ನೆಲೆಸಿದ್ದರು. ಕವಿತಾಗೆ 2006ರಲ್ಲಿ ವಿಚ್ಛೇದನ ನೀಡಿ 2009ರಲ್ಲಿ ಶಿಲ್ಪಾ ಶೆಟ್ಟಿಯನ್ನು ಮದುವೆಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.