ಖ್ಯಾತ ಹಿನ್ನೆಲೆ ಗಾಯಕಿ ಅನನ್ಯಾ ಭಟ್ ನಟಿಯಾಗಿಯೂ ಗುರುತಿಸಿಕೊಂಡವರು. ಸದ್ಯ ಈಕೆ ಚಂದನವನದಲ್ಲಿ 3ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನವ ನಿರ್ದೇಶಕ ಗುರು ಸವನ್ ನಿರ್ದೇಶನದ ‘ಕಾಲ್ಡ್ ಸೇನಾಪುರ’ ಚಿತ್ರದಲ್ಲಿ ಅನನ್ಯಾ ಬಣ್ಣ ಹಚ್ಚಲಿದ್ದಾರೆ. ಇದು ಸತ್ಯ ಘಟನೆ ಆಧಾರಿತ ಸಿನಿಮಾವಾಗಿದೆ.
ಸಿನಿಮಾ ಅವಕಾಶ ಕುರಿತು ಮಾತನಾಡಿರುವ ಅನನ್ಯಾ ‘ನನಗೆ ಅವಕಾಶಗಳು ಬರುತ್ತಲೇ ಇತ್ತು, ಆದರೆ ನನಗೆ ಯಾವ ಕಥೆಯು ಇಷ್ಟವಾಗಿರಲಿಲ್ಲ. ಆದರೆ ಈ ಕಥೆ ನಿಜಕ್ಕೂ ನನ್ನಲ್ಲಿ ಕುತೂಹಲ ಮೂಡಿಸಿತ್ತು, ಅಲ್ಲದೇ ಇದು ನೈಜಘಟನೆ ಆಧಾರಿತವಾಗಿದೆ. ಚಿತ್ರದಲ್ಲಿ ನಾನು ಎನ್ಜಿಒವೊಂದಕ್ಕೆ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತೆ ರಾಧ ಎಂಬ ಮಹಿಳೆಯ ಪಾತ್ರ ಮಾಡುತ್ತಿದ್ದೇನೆ. ಖಂಡಿತ ಈ ಪಾತ್ರ ಜನರಿಗೆ ಇಷ್ಟವಾಗಲಿದೆ’ ಎಂದಿದ್ದಾರೆ.
2 ದಶಕಗಳ ಹಿಂದೆ ಕುಂದಾಪುರ, ಬೈಂದೂರು ಹಾಗೂ ಭಟ್ಕಳ ಭಾಗದಲ್ಲಿ ನಡೆದ ಘಟನೆಯನ್ನು ಈ ಚಿತ್ರ ಆಧರಿಸಿದೆ. ಚಿತ್ರದಲ್ಲಿ ಪವನ್ ಕುಮಾರ್, ಗಿರಿರಾಜ್ ಬಿ.ಎಂ., ಪರಮೇಶ್ವರ್ ಗುರುಸ್ವಾಮಿ, ಶೇಖರ್, ದಿನೇಶ್ ಮಂಗಳೂರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.