ಹೊಂಬಾಳೆ ಫಿಲ್ಮ್ಸ್ ಅವರ ಹೊಸ ಚಿತ್ರ ‘ಸಾಲಾರ್’ನ ಪ್ರಕಟಣೆ ನೀಡಿದ್ದೇ ತಡ. ಫೇಸ್ಬುಕ್ನಲ್ಲಿ ನಾಯಕ ಪ್ರಭಾಸ್ ಆಯ್ಕೆ ಬಗ್ಗೆ ಕನ್ನಡ ಸಿನಿಪ್ರಿಯರು ತಕರಾರು ಎತ್ತಿದ್ದಾರೆ.
ಪ್ರಶಾಂತ್ ನೀಲ್ ಅವರನ್ನು ಫೇಸ್ಬುಕ್ ಪುಟದಲ್ಲಿ ಚಿತ್ರಪ್ರೇಮಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ವಾಮಿ ಡಾಲಿ ಎಂಬುವವರು ಪ್ರತಿಕ್ರಿಯಿಸಿ, ‘ಕನ್ನಡ ನೀವು ಬೆಳೆಯಲು ಮಾತ್ರವೇ? ಆಮೇಲೆ ಕನ್ನಡದವರು ಬೆಳೆಯುವುದು ಬೇಡ ಅಲ್ವಾ? ನಿವೆಲ್ಲ ಕನ್ನಡ ಸಿನಿಮಾವನ್ನು ಇನ್ನೂ ಎಲ್ಲೋತೆಗೆದುಕೊಂಡು ಹೋಗಿತ್ತೀರಿ ಎಂದು ಕನಸುಕಂಡಿದ್ದು ನಮ್ಮ ತಪ್ಪು. ಕ್ಷಮಿಸಿ’ ಎಂದು ಬರೆದಿದ್ದಾರೆ.
ಯಶಸ್ಗೌಡ ಎಂಬುವವರು ಪ್ರತಿಕ್ರಿಯಿಸಿ, ‘ಹೊಂಬಾಳೆ ಫಿಲ್ಸ್ಮ್ ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ವ್ಯಂಗ್ಯವಾಡಿದ್ದಾರೆ.
‘ಚಿತ್ರತಂಡದಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಮೊದಲು ನಿಮ್ಮ ತಾಯಿಯನ್ನು(ಕನ್ನಡ) ಗೌರವಿಸಿ ಮಲತಾಯಿ(ತೆಲುಗು)ಯನ್ನಲ್ಲ. ಮತ್ತೆ ಕನ್ನಡ ಚಿತ್ರರಂಗಕ್ಕೆ ಬರಬೇಡಿ. ಇಲ್ಲವಾದರೆ ನಾವು ಕನ್ನಡಿಗರ ಶಕ್ತಿಯನ್ನು ತೋರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.
ಆದರೆೆ ಚಿತ್ರತಂಡದ ಹೊಸ ಪ್ರಯತ್ನಕ್ಕೆ ಕನ್ನಡ, ತೆಲುಗು ಹಾಗೂ ಮಲೆಯಾಳಂ ಚಿತ್ರಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.
‘ಭಾಷೆ ಅನ್ನುವುದು ತಡೆ ಬೇಲಿ ಅಲ್ಲ. ಅವೆಲ್ಲಾ ಕೇವಲ ಭಾವನೆಗಳು. ದಯಮಾಡಿ ಭಾಷೆಯನ್ನು ತಡೆಬೇಲಿಯಂತೆ ಹೋಲಿಸಬೇಡಿ’ ಎಂದು ರವಿ ಪ್ರಕಾಶ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬ ಮಲೆಯಾಳಂ ಚಿತ್ರಾಭಿಮಾನಿಯಂತೂ ಪ್ರಭಾಸ್ ಅವರನ್ನು ಈ ಚಿತ್ರದಲ್ಲಿ ನೋಡಲು ಉತ್ಸುಕರಾಗಿದ್ದಾರಂತೆ.
ಕನ್ನಡ ಚಿತ್ರಕ್ಕೆ ಪ್ರಭಾಸ್ ಅವರದ್ದೇ ಧ್ವನಿಯನ್ನೂ ಡಬ್ ಮಾಡಿಸಿ ಎಂದು ಸಲಹೆ ಮಾಡಿದ್ದಾರೆ
ನಂದಕುಮಾರ್ ಎಂಬುವವರು ಪ್ರತಿಕ್ರಿಯಿಸಿ, ‘ಭಾರತೀಯನಾಗಿ ನೋಡುವುದಾದರೆ ಚಿತ್ರರಂಗದಲ್ಲಿ ಇದೊಂದು ದೊಡ್ಡ ಕಾಂಬಿನೇಷನ್. ಆದರೆ, ಕನ್ನಡದವರು ಅಲ್ಲಿಗೆ (ತೆಲುಗು) ಹೋಗಿರುವುದು ಸ್ವಲ್ಪ ಬೇಸರವನ್ನುಂಟು ಮಾಡಿದೆ. ನಮ್ಮಲ್ಲಿರುವ ಪ್ರತಿಭೆಗಳಿಗೇನೂ ಕಮ್ಮಿ ಇಲ್ಲ’ ಎಂದಿದ್ದಾರೆ.
ಸುಮಾರು 600ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಚರ್ಚೆಗಳು ಮುಂದುವರಿದಿವೆ. ಚಿತ್ರ ತಂಡ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಪ್ರಭಾಸ್ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ.