ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಮತ್ತೆ ನಿರ್ದೇಶನಕ್ಕೆ ಇಳಿಯಲಿದ್ದಾರೆ ಉಪ್ಪಿ

Last Updated 10 ಜುಲೈ 2021, 13:44 IST
ಅಕ್ಷರ ಗಾತ್ರ

ಚಂದನವನಕ್ಕೆ ನಟರಾಗಿ ಪ್ರವೇಶಿಸುವುದಕ್ಕೂ ಮುನ್ನ ನಿರ್ದೇಶಕರಾಗಿ ಗುರುತಿಸಿಕೊಂಡವರು ನಟ ಉಪೇಂದ್ರ. ‘ಓಂ’, ‘ಶ್‌’ ನಂತಹ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದ ಉಪೇಂದ್ರ ಅವರು ಇದೀಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.

ಪ್ರಸ್ತುತ ಕೆ.ಮಾದೇಶ್‌ ನಿರ್ದೇಶನದ ‘ಲಗಾಮ್‌’ ಚಿತ್ರದ ಚಿತ್ರೀಕರಣದಲ್ಲಿ ತಲ್ಲೀನರಾಗಿರುವ ಉಪೇಂದ್ರ, ತಮ್ಮ ನಿರ್ದೇಶನದ ಹೊಸ ಸಿನಿಮಾದ ಬಗ್ಗೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ್ದಾರೆ. ‘ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ ಬಳಿಕ ಚಿತ್ರರಂಗದ ಚಟುವಟಿಕೆ ಮತ್ತೆ ಪ್ರಾರಂಭವಾಗಿದ್ದು, ಸದ್ಯ ನಾನು ‘ಲಗಾಮ್‌’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೇನೆ. ಜುಲೈ 20ರ ನಂತರ ಆರ್‌.ಚಂದ್ರು ಅವರ ನಿರ್ದೇಶನದ ‘ಕಬ್ಜ’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಇದಕ್ಕಾಗಿ ಸೆಟ್‌ಗಳು ಸಿದ್ಧವಾಗುತ್ತಿದೆ. ಶೀಘ್ರದಲ್ಲೇ ಇದರ ವಿಶೇಷ ವಿಡಿಯೊವನ್ನು ಹಂಚಿಕೊಳ್ಳುತ್ತೇನೆ. ಲಾಕ್‌ಡೌನ್‌ ಸಂದರ್ಭದಲ್ಲಿ ಹಲವು ಕಥೆಗಳನ್ನು ಸಿದ್ಧಪಡಿಸಿದ್ದೇನೆ. ನನಗೇ ಥ್ರಿಲ್‌ ಆದ ಒಂದು ವಿಷಯ ದೊರಕಿದೆ. ಶೀಘ್ರದಲ್ಲೇ ನನ್ನ ನಿರ್ದೇಶನದ ಹೊಸ ಚಿತ್ರ ಘೋಷಿಸುತ್ತೇನೆ’ ಎಂದಿದ್ದಾರೆ.

ಸಿನಿಮಾ ಚಟುವಟಿಕೆಯ ಜೊತೆಗೆ ತಮ್ಮ ‘ಪ್ರಜಾಕೀಯ’ ಪಕ್ಷದ ಮುಂದಿನ ನಡೆಯ ಬಗ್ಗೆಯೂ ಮಾಹಿತಿ ಹಂಚಿಕೊಂಡಿರುವ ಅವರು, ‘ಪ್ರಜಾಕೀಯ ಪಕ್ಷದಲ್ಲಿ ಜನರೇ ಹೈಕಮಾಂಡ್‌. ನಾನು ಒಬ್ಬ ಸಂಸ್ಥಾಪಕ ಅಧ್ಯಕ್ಷನಾಗಿ, ಕಾರ್ಮಿಕನಾಗಿ ಕೆಲಸ ಮಾಡುತ್ತೇನೆ. ಪ್ರಜಾಕೀಯ ಮತದಾರರ ಪಕ್ಷ. ಇಲ್ಲಿ ಯಾರನ್ನೂ ನಂಬುವುದು ಬೇಡ. ನಿಮ್ಮನ್ನು ನೀವು ನಂಬಿ. ನಾನು ಬದಲಾವಣೆ ತರಬಲ್ಲೆ ಎಂದು ನಂಬಿದರೆ ಅದುವೇ ನಿಜವಾದ ಬದಲಾವಣೆ. ಪ್ರಜಾಕೀಯ ಪಕ್ಷದಿಂದ ಚುನಾವಣೆಗೆ ನಿಂತು ಅವರು ಸರಿಯಾಗಿ ಕೆಲಸ ಮಾಡದೇ ಇದ್ದರೆ ಅವರನ್ನು ಕೆಳಗಿಳಿಸಲು ಜನರ ಜೊತೆಗೆ ನಾನೂ ಇರುತ್ತೇನೆ. ಇಂತಹ ಬದಲಾವಣೆ ಆದರೆ ಅದುವೇ ನಿಜವಾದ ಪ್ರಜಾಪ್ರಭುತ್ವ. ಜನರು ಆಯ್ಕೆ ಮಾಡಿದ ಅಭ್ಯರ್ಥಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ಆತನನ್ನು ಅನರ್ಹಗೊಳಿಸುವ ಅಧಿಕಾರವನ್ನು ಜನರ ಕೈಗೇ ನೀಡುವ ಕಾನೂನು ಬರಬೇಕು’ ಎಂದರು.

‘ಪ್ರಜಾಕೀಯದ ಉದ್ದೇಶ, ಸಿದ್ಧಾಂತ ಮನೆಮನೆಗೂ ತಲುಪಬೇಕು ಎನ್ನುವುದು ನನ್ನ ಆಸೆ. ಇದಕ್ಕಾಗಿ ಕರ್ನಾಟಕದಾದ್ಯಂತ ಯಾತ್ರೆ ಆಯೋಜಿಸಲು ಯೋಜನೆ ಸಿದ್ಧಪಡಿಸುತ್ತಿದ್ದೇನೆ’ ಎಂದರು.

ಪೆಟ್ರೋಲ್‌ ಬೆಲೆ ಏರಿಕೆ ಕುರಿತು ಪ್ರತಿಕ್ರಿಯೆ ನೀಡುವಂತೆ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ‘ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಪೆಟ್ರೋಲ್‌ ಬೆಲೆ ಏರಿದಾಗ ಇನ್ನೊಂದು ಪಕ್ಷ ಗಲಾಟೆ ಮಾಡುತ್ತವೆ. ಇದೇ ಪಕ್ಷ ಅಧಿಕಾರಕ್ಕೆ ಬಂದಾಗ ಪೆಟ್ರೋಲ್‌ ಬೆಲೆ ಏರಿದಾಗ ಮತ್ತೊಂದು ಪಕ್ಷ ಗಲಾಟೆ ಮಾಡುತ್ತದೆ. ಈ ಸಮಸ್ಯೆಗೆ ನಾವೇ ಕಾರಣಕರ್ತರು. ನಮ್ಮ ಹಕ್ಕನ್ನು ಜಾತಿ, ಧರ್ಮ, ಹಣ, ಅದ್ಧೂರಿ ಪ್ರಚಾರಕ್ಕೆ ಮಾರಾಟ ಮಾಡಿದ್ದೇವೆ. ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಚುನಾವಣೆ ಸಂದರ್ಭದಲ್ಲಿ ಜನರ ಆಲೋಚನೆಯೇ ಬೇರೆ ಇರುತ್ತದೆ. ಯಾರು ಗೆಲ್ಲುತ್ತಾರೆ ಎಂದೇ ಜನ ಚಿಂತಿಸುತ್ತಾರೆ. ಬೇರೆ ಪಕ್ಷದವರು ಮತ ಕೇಳಲು ಬಂದಾಗ ನಿಮ್ಮ ಬೇಡಿಕೆಗಳನ್ನು ಅವರ ಮುಂದೆ ಇಡಿ. ಇದನ್ನು ವಿಡಿಯೊ ಮಾಡಿ. ಪ್ರಜೆಗಳು ಕೆಲವರನ್ನು ಗೆಲ್ಲಿಸಿ ಪ್ರಭುಗಳನ್ನಾಗಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವವಲ್ಲ. ಜನರೇ ಗೆಲ್ಲುವುದು ಪ್ರಜಾಪ್ರಭುತ್ವ’ ಎಂದರು.

ಲಿಂಕ್‌: https://www.facebook.com/nimmaupendra/videos/4551064631579952

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT