ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಸಿರೇ ಉಸಿರೇ’ ಮೋಷನ್‌ ಪೋಸ್ಟರ್‌ ಬಿಡುಗಡೆ

Last Updated 22 ಆಗಸ್ಟ್ 2021, 16:52 IST
ಅಕ್ಷರ ಗಾತ್ರ

ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸಿ ಗುರುತಿಸಿಕೊಂಡಿದ್ದ ರಾಜೀವ್ ‘ಉಸಿರೇ ಉಸಿರೇ’ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.

ಕಿಚ್ಚ ಸುದೀಪ್‌ ಅವರು ‌ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು.

‘ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ರಾಜೀವ. ಅವನಲ್ಲಿ ಈಗಲೂ ಏನೋ ಒಂಥರಾ ಮುಗ್ಧತೆ ಇದೆ. ಯಾವುದನ್ನು ಬೇಗ ನಂಬಿ ಬಿಡುತ್ತಾನೆ. ಪುಣ್ಯ, ಅವನ ಪಕ್ಕದಲ್ಲಿರುವ ಹೆಂಡತಿ ಜಾಣೆ. ಆ ಹುಡುಗಿ ಇವನಿಗೆ ಎಲ್ಲವನ್ನೂ ಹೇಳಿ ಕೊಡುತ್ತಿದ್ದಾರೆ. ಸಿ.ಸಿ.ಎಲ್ ದಿನಗಳಿಂದಲೂ ನನಗೆ ಈತ ಪರಿಚಯ. ಅವನು ಕ್ರಿಕೆಟ್ ಸರಿಯಾಗಿ ಅಭ್ಯಾಸ ಮಾಡಿದ್ದರೆ, ಇಷ್ಟೊತ್ತಿಗೆ ರಾಜ್ಯಮಟ್ಟದಲ್ಲಿ ಆಡುತ್ತಿದ್ದ. ಈ ಸಿನಿಮಾದಿಂದ ರಾಜೀವ್‌ಗೆ ಒಳ್ಳೆಯದಾಗಲಿ ಎಂದರು ಕಿಚ್ಚ ಸುದೀಪ್‌.

ನಾನು ಈ ತನಕ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ, ಇಂತಹ ವೇದಿಕೆ ಸಿಗಲು 10 ವರ್ಷ ಬೇಕಾಯಿತು. ಈ ಅವಕಾಶ ಮಾಡಿಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದ ಎಂದು ಮಾತು ಆರಂಭಿಸಿದ ರಾಜೀವ್, ಮೋಷನ್ ಪೋಸ್ಟರ್ ಬಿಡುಗಡೆಗೆ ಆಗಮಿಸಿರುವ ಸುದೀಪ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು.

‘ನಾನು ಸುದೀಪ್ ಸರ್ ಜೊತೆ ಕಾರಿನಲ್ಲಿ ಬರುತ್ತಿದ್ದಾಗ, ಅವರ ನಟನೆಯ ಚಿತ್ರದ ‘ಉಸಿರೇ ಉಸಿರೇ’ ಹಾಡು ಕೇಳಿದ್ದೆ. ನನಗೆ ಈ ಚಿತ್ರದ ಬಗ್ಗೆ ಗೊತ್ತಿದ್ದರಿಂದ ನಿರ್ದೇಶಕರಿಗೆ ಫೋನ್ ಮಾಡಿ ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಇಡೋಣ. ಈಗಲೇ ನೋಂದಾಯಿಸಿ ಎಂದು ಹೇಳಿದೆ. ಚಿತ್ರಕ್ಕಾಗಿ ನಾನು ಹೆಚ್ಚು ವರ್ಕ್ ಔಟ್ ಏನೂ ಮಾಡಿಲ್ಲ. ಸಹಜವಾಗಿರುವ ಪಾತ್ರ. ನಮ್ಮ ನಾಲ್ಕು ವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ.‌ ಎಲ್ಲರ ಹಾರೈಕೆಯು ನಮಗಿರಲಿ’ ಎಂದರು ರಾಜೀವ್.

‘ಇದು ನನ್ನ‌ ಅಕ್ಷರಗಳು ಅನ್ನವಾಗುತ್ತಿರುವ ಸಮಯ. ಇದೊಂದು ಪಕ್ಕಾ ಪ್ರೇಮಕಥೆ.‌ ಇಲ್ಲಿಯವರೆಗೂ ಅನೇಕ ಪ್ರೇಮಕಥೆಯುಳ್ಳ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ. ಅಮರಪ್ರೇಮಿಗಳು ಎಂದರೆ ಎಲ್ಲರೂ ರೋಮಿಯೋ - ಜೂಲಿಯೆಟ್, ಸಲೀಂ - ಅನಾರ್ಕಲಿ ಅನ್ನುತ್ತಾರೆ. ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ನಮ್ಮ ಕಥಾನಾಯಕ - ನಾಯಕಿಯನ್ನು ಈ ಸಾಲಿಗೆ‌ ಸೇರಿಸಬಹುದು ಎಂದ ನಿರ್ದೇಶಕ ಸಿ.ಎಂ.ವಿಜಯ್ ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ್ದಾರೆ.

ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರ‌ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಪ್ರದೀಪ್ ಯಾದವ್ ಮಾತನಾಡಿ, ‘ನಾನು ಅನೇಕ‌ ಕಥೆಗಳನ್ನು ಕೇಳಿದ್ದೀನಿ. ರಾಜೀವ್ ಹಾಗೂ ವಿಜಯ್ ಬಂದು ಹೇಳಿದ ಈ ಕಥೆ ನನ್ನ ಹೃದಯಕ್ಕೆ ಹತ್ತಿರವಾಯಿತು. ಹಾಗಾಗಿ ಚಿತ್ರ‌ ನಿರ್ಮಾಣಕ್ಕೆ ಮುಂದಾದೆ’ ಎಂದರು.

ರಾಜೀವ್ ಗೆ ನಾಯಕಿಯಾಗಿ ಶ್ರೀಜಿತ ಘೋಷ್ ನಟಿಸುತ್ತಿದ್ದಾರೆ. ಅವರಿಗೆ ಕನ್ನಡದಲ್ಲಿ ಇದು ಚೊಚ್ಚಲ ಚಿತ್ರ. ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT