ಅದು ‘ಯಾರ್ ಮಗ’ ಚಿತ್ರದ ಪ್ರಚಾರ ಕಾರ್ಯಕ್ರಮ. ಚಿತ್ರತಂಡ ನಾಯಕನ ಜನ್ಮದಿನದ ಆಚರಣೆಯ ಜೊತೆಗೆ ಇಪ್ಪತ್ತು ಕಲಾವಿದರ ಆಡಿಷನ್ಗೆ ತಯಾರಿ ಮಾಡಿಕೊಂಡೇ ಬಂದಿತ್ತು.
ಚಿತ್ರದ ನಿರ್ದೇಶಕ ಸುರೇಶ್ ರಾಜ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮೈಕ್ ಕೈಗೆತ್ತಿಕೊಂಡರು. ‘ತೊಂಬತ್ತರ ದಶಕದ ಕಥೆ ಇದು. ತಾಯಿ ಮತ್ತು ಮಗನ ಬಾಂಧವ್ಯದ ಮಹತ್ವ ಕುರಿತು ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ’ ಎಂದರು.
ಚಿತ್ರದಲ್ಲಿ ಶಿವಾಜಿನಗರದ ರಿಯಲ್ ರೌಡಿಗಳನ್ನು ತೋರಿಸಲು ನಿರ್ದೇಶಕರು ನಿರ್ಧರಿಸಿದ್ದಾರಂತೆ. ಆದರೆ, ಸುರಕ್ಷತೆ ದೃಷ್ಟಿಯಿಂದ ಅವರ ಹೆಸರುಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿದ್ಯಾ ಪ್ರಭು ಈ ಚಿತ್ರದ ನಾಯಕಿ. ರಘು ಪಡುಕೋಟೆ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಾಯಿ ಪಾತ್ರದಲ್ಲಿ ಅಶ್ವಿನಿ ಗೌಡ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಮಂಗಳೂರು, ಮುಂಬೈ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.
ಛಾಯಾಗ್ರಹಣ ಸಿ.ಎಸ್. ಸತೀಶ್ ಅವರದು. ಲೋಕಿ ಸಂಗೀತ ಸಂಯೋಜಿಸಿದ್ದಾರೆ. ಎಂ. ಬಸವರಾಜ್ ಪಡುಕೋಟೆ ಬಂಡವಾಳ ಹೂಡಿದ್ದಾರೆ.