ರೂಪಕಗಳನ್ನು ಬಳಸಿಕೊಂಡು ರಾಜ್ ಇಲ್ಲಿ ಹಲವು ಕಥೆಗಳನ್ನು ನೇಯ್ದಿದ್ದಾರೆ. ‘ಸಾವು’, ‘ನಂದಿ ಬಟ್ಟಲು’, ‘ಕೆರೆ’, ‘ಬೀದಿ ನಾಯಿ’, ‘ವಾಷಿಂಗ್ ಮಷಿನ್’ ಹೀಗೆ ಬಗೆಬಗೆಯ ರೂಪಕಗಳಲ್ಲಿ ಬದುಕನ್ನು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಾ, ಸಾವಿನ ವೇದಿಕೆ ಸೃಷ್ಟಿಸಿದ್ದಾರೆ. ಯುವಜನತೆ ಅರಿತುಕೊಳ್ಳಬೇಕಾದ ವಿಷಯವೊಂದನ್ನೂ ಸೂಕ್ಷ್ಮವಾಗಿ ಹೇಳಿದ್ದಾರೆ. ‘ನಂದಿ ಬಟ್ಟಲು’ ನಾಯಕನ ಇಷ್ಟದ ಹೂವು. ಆತ ಬದುಕನ್ನು ನೋಡುವುದೂ ಈ ಹೂವಿನ ಮೂಲಕವೇ. ಹೀಗಾಗಿ ಇಡೀ ಸಿನಿಮಾ ಸ್ವಚ್ಛ; ಶುಭ್ರ. ಸಂಭಾಷಣೆಯ ಗಾಢತೆಯೇ ಈ ಸಿನಿಮಾದ ಆಸ್ತಿ. ಒಂದು ಪ್ರಬುದ್ಧ ಪಯಣವನ್ನು ಇಲ್ಲಿ ರಾಜ್ ಕಟ್ಟಿದ್ದಾರೆ. ಯಾವುದಕ್ಕೂ ಧಾವಂತ ಇಲ್ಲಿಲ್ಲ.
ಸಿರಿ ರವಿಕುಮಾರ್ ಇಡೀ ಸಿನಿಮಾದ ಜೀವಾಳ. ಅವರ ಪಾತ್ರವನ್ನು ರಾಜ್ ಆ ರೀತಿಯಲ್ಲಿ ಬರೆದಿದ್ದಾರೆ, ಹೆಣೆದಿದ್ದಾರೆ. ನಟನೆಯಲ್ಲಿ ಸಿರಿಗೆ ಪೂರ್ಣ ಅಂಕ. ಭಾವನೆಗಳ ಹಲವು ರೂಪಗಳನ್ನು ಸಿರಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರೇ ಸಿನಿಮಾದ ಹೀರೊ ಎಂದರೆ ತಪ್ಪಲ್ಲ. ರಾಜ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಜೆ.ಪಿ. ತುಮ್ಮಿನಾಡು ಪಳಗುತ್ತಿದ್ದಾರೆ.
ಊಟಿಯನ್ನು ಪ್ರವೀಣ್ ಶ್ರೀಯಾನ್ ಸೆಳೆಯುವಂತೆ ಸೆರೆಹಿಡಿದಿದ್ದರೆ, ಮಿಥುನ್ ಮುಕುಂದನ್ ಸಂಗೀತ ಉಕ್ಕುವ ಭಾವನೆಗಳಿಗೆ ಇಂಬುನೀಡಿದೆ. ಈ ಸಿನಿಮಾ ಮನರಂಜನೆಗಾಗಿ ಖಂಡಿತ ಇಲ್ಲ. ಒಂದಿಷ್ಟು ಆಲೋಚನೆಗಳು, ಪ್ರಶ್ನೆಗಳನ್ನು ಕೆದಕುತ್ತ ಸಾಗುವ ಪಯಣವಿದು. ಒಂದರ್ಥದಲ್ಲಿ ರಾಜ್ ಚಂದನವನದ ‘ನಂದಿ ಬಟ್ಟಲು’ ಎನ್ನಬಹುದು. ಸಿನಿಮಾ ಕೇವಲ 101 ನಿಮಿಷದ್ದಾದರೂ, ಈ ಅವಧಿಯಲ್ಲೂ ಸೂಕ್ಷ್ಮ ದೃಷ್ಟಿಯ ತಾಳ್ಮೆ ಅಗತ್ಯ.