ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣಪಟಲ ಸಿನಿಮಾ ವಿಮರ್ಶೆ: ಆಟಿಸಂ ತೀವ್ರತೆಯ ಪಾಠದ ಚಿತ್ರ

Last Updated 9 ಏಪ್ರಿಲ್ 2022, 14:03 IST
ಅಕ್ಷರ ಗಾತ್ರ

ಚಿತ್ರ: ವರ್ಣಪಟಲ

ನಿರ್ದೇಶಕ: ಚೇತನ್‌ ಮುಂಡಾಡಿ

ಪಾತ್ರವರ್ಗ: ಜ್ಯೋತಿ ರೈ, ಸುಹಾಸಿನಿ ಮಣಿರತ್ನಂ, ಅನೂಪ್‌ ಸಾಗರ್‌, ಧನಿಕಾ ಹೆಗ್ಡೆ

ಅಮ್ಮ ಎಂಬ ಸ್ವರವನ್ನು ಹೊರಡಿಸಲು ತಾಯಿ ಮಾಡಿದ ದಶಕದ ತಪಸ್ಸು...

ಸ್ವಲೀನತೆ(ಆಟಿಸಂ) ಸಮಸ್ಯೆಯ ಸುತ್ತ ಸಂಕೀರ್ಣವಾದ ಕಥೆಯೊಂದನ್ನು ಹೆಣೆದು ತೆರೆಗೆ ಬಂದಿದೆ ಈ ಚಿತ್ರ. ಇಂಗ್ಲೆಂಡ್‌ನ ಸಮುದಾಯ ಮಕ್ಕಳ ತಜ್ಞೆ, ಸಲಹೆಗಾರ್ತಿ ಡಾ.ಸರಸ್ವತಿ ಮತ್ತು ವಿಶೇಷ ಕಾಳಜಿಯ ಅಗತ್ಯವುಳ್ಳ ಮಕ್ಕಳ ಸಂಸ್ಥೆ ನಡೆಸುತ್ತಿರುವ, ಉದ್ಯಮಿ ಕವಿತಾ ಸಂತೋಷ್‌ ಅವರು ತಮ್ಮ ವೃತ್ತಿ ಬದುಕಿನ ಅನುಭವ ಆಧರಿಸಿ ಕಥೆ ಹೆಣೆದಿದ್ದಾರೆ.

ಕಾರ್ತಿಕ್‌ ಸರಗೂರು ಮತ್ತು ಆಟಿಸಂ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿನ ತಾಯಿ ಪಲ್ಲವಿ ರಾವ್‌ ಅವರು ಕೂಡಾ ಕಥೆ ರೂಪಿಸಲು ಕೈಜೋಡಿಸಿದ್ದಾರೆ.

ನರದೌರ್ಬಲ್ಯದಿಂದ ಬಳಲುತ್ತಿರುವ ಮಗಳು (ಧನಿಕಾ ಹೆಗ್ಡೆ), ಅವಳಿಂದ ಒಂದು ಮಾತು ಹೊರಡಿಸಲು ಸಂಗೀತದ ಮೊರೆ ಹೋಗುತ್ತಾಳೆ ತಾಯಿ ನಿತ್ಯಾ. ಆಟಿಸಂ ಸಮಸ್ಯೆಯನ್ನು ಸಮಾಜ ಸ್ವೀಕರಿಸಬೇಕಾದ ಮತ್ತು ಅದಕ್ಕೆ ಸ್ಪಂದಿಸಬೇಕಾದ ಬಗೆಯನ್ನು ಹೇಳಲು ಪರಿಣಾಮಕಾರಿ ಪ್ರಯತ್ನ ನಡೆಸಿದೆ ಈ ಚಿತ್ರ. ಸಂಗೀತದ ಮೂಲಕ ಇಂಥ ಸಮಸ್ಯೆಯುಳ್ಳ ಮಕ್ಕಳೊಂದಿಗೆ ಸಂವಹನ ನಡೆಸಬಹುದು ಎಂಬುದನ್ನೂ ಸಲಹೆಯ ರೂಪದಲ್ಲಿ ಹೇಳಿದೆ.

ಚಿತ್ರಕಥೆಯು ಸೂಕ್ಷ್ಮ ಮತ್ತು ವೇಗವಾಗಿದೆ. ಇಂಥ ಮಕ್ಕಳನ್ನು ನಿರ್ವಹಿಸಿ ಹೈರಾಣಾಗಿರುವ, ಸಮಸ್ಯೆಯ ಕಾರಣಕ್ಕೆ ಕುಟುಂಬವನ್ನು ತೊರೆಯುವ ತಂದೆ, ಆಗ ತಾಯಿ ಮಾತ್ರ ಇರುವ ಮಕ್ಕಳ ಈ ಪರಿಸ್ಥಿತಿ ಎಂಷ್ಟು ಆತಂಕಕಾರಿ ಎಂಬುದನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಒಂದು ಕೋನದಲ್ಲಿ ಇದೊಂದು ಮಕ್ಕಳ ಚಿತ್ರ. ಮತ್ತೊಂದು ರೀತಿ ನೋಡಿದರೆ ಇದು ಶೈಕ್ಷಣಿಕ ಚಲನಚಿತ್ರ ಎಂದು ಅಂದುಕೊಳ್ಳಬಹುದು.

ಜ್ಯೋತಿ ರೈ ಅವರು ಒಳ್ಳೆಯ ಅಭಿನಯ ನೀಡಿದ್ದಾರೆ. ವೈದ್ಯೆಯಾಗಿ ಸುಹಾಸಿನಿ ಮಣಿರತ್ನಂ ಕಡಿಮೆ ಅವಧಿಯಲ್ಲಿ ಬಂದು ಹೋದರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎಂಟು ವರ್ಷದ ಧನಿಕಾ ಹೆಗ್ಡೆ ಎಎಸ್‌ಡಿ ಹೊಂದಿರುವ ಮಗುವಿನಂತೆಯೇ ನಮ್ಮನ್ನು ಕಾಡುತ್ತಾಳೆ. ಅವಳು ಪುಟ್ಟ ಮಗುವಿನಂತೆಯೇ ತನ್ನ ಅಭಿವ್ಯಕ್ತಿಯ ಮೂಲಕ ಭಾವನೆಗಳನ್ನು ತೋರಿಸಿದ್ದಾಳೆ.

ಹಾಗಾಗಿ ಒಂದು ಹೊಸ ಪ್ರಯೋಗ, ವಸ್ತು ವಿಷಯದ ದೃಷ್ಟಿಯಿಂದ ನೋಡಬಹುದಾದ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT