ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Big Boss 8: ಮೊದಲ ಟಾಸ್ಕ್ ವೇಳೆಯೇ ಅಬ್ಬರಿಸಿ ಬೊಬ್ಬಿರಿದ ಚಂದ್ರಚೂಡ್

Last Updated 7 ಏಪ್ರಿಲ್ 2021, 9:22 IST
ಅಕ್ಷರ ಗಾತ್ರ

ಬೆಂಗಳೂರು: 6ನೇ ವಾರದ ಎಲಿಮಿನೇಶನ್ ಬಳಿಕ ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಮುಂದಿನ ಕ್ಯಾಪ್ಟನ್ ಆಯ್ಕೆಗೆ ಕ್ಯಾಪ್ಟನ್ಸಿ ಕಂಟೆಂಡರ್ ಟಾಸ್ಕ್ ನೀಡಲಾಗಿದೆ. ಈ ವೇಳೆ, ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ತಮ್ಮ ಅಸಲಿ ಮುಖ ತೆರೆದಿಟ್ಟಿದ್ದಾರೆ. ತಮ್ಮ ತಂಡದ ಸದಸ್ಯರ ಜೊತೆಯೆ ಕೂಗಾಡುತ್ತಾ ರಂಪಾಟ ಮಾಡಿದ್ದಾರೆ.

ರಘು ವಿರುದ್ಧ ‘ಚಕ್ರ’ ತಿರುಗಿಸಿದ ಚಂದ್ರಚೂಡ್: ಕ್ಯಾಪ್ಟೆನ್ಸಿ ಕಂಟೆಂಡರ್ ಟಾಸ್ಕ್‌ನ ಎರಡನೇ ಸೆಶನ್‌ನಲ್ಲಿ 4 ತಂಡಗಳಿಂದ ರಘು, ಅರವಿಂದ್, ವಿಶ್ವನಾಥ್ ಮತ್ತು ಚಕ್ರವರ್ತಿ ಚಂದ್ರಚೂಡ್ ಅಖಾಡಕ್ಕೆ ಇಳಿದಿದ್ದರು. ಹಗ್ಗ ಹಿಡಿದು ಹಲಗೆ ಜಾರದಂತೆ ಅದರ ಮೇಲೆ ಬೊಂಬೆಗಳನ್ನು ಜೋಡಿಸಬೇಕಿತ್ತು. ಅರವಿಂದ್, ರಘು ಆರಾಮವಾಗಿ ಕೆಲಸ ಮುಗಿಸಿದರು. ವಿಶ್ವನಾಥ್ ಎಲ್ಲರಿಗಿಂತ ವೇಗವಾಗಿ ಗುರಿ ತಲುಪಿದರು. ಅತ್ಯಂತ ಬಲಿಷ್ಠರಂತೆ ಕಾಣುವ ಚಂದ್ರಚೂಡ್ ಹೆಚ್ಚು ಸಮಯ ತೆಗೆದುಕೊಂಡು ಬೊಂಬೆ ಇಟ್ಟರು. ಆದರೆ, ಅಷ್ಟೊತ್ತಿಗೆ ಬಿಗ್ ಬಾಸ್ ನೀಡಿದ್ದ 22 ನಿಮಿಷ ಮುಗಿದಿದ್ದರಿಂದ ಎರಡು ಗೊಂಬೆಗಳು ಹಾಗೆ ಉಳಿದವು. ಹಾಗಾಗಿ, ಈ ತಂಡಕ್ಕೆ ಹಣ ಬರಲಿಲ್ಲ.

ಆದರೆ, ನಿಯಮದಂತೆ ನಾಲ್ವರಲ್ಲಿ ಏಜೆಂಟ್ ಒಬ್ಬರನ್ನು ಗುರುತಿಸಬೇಕಿತ್ತು. ಈ ಸಂದರ್ಭ, ನಿಧಾನ ಮಾಡಿದ ಚಂದ್ರಚೂಡ್ ಏಜೆಂಟ್ ಇರಬಹುದು ಎಂದು ಉಳಿದ ಮೂವರೂ ಶಂಕಿಸಿದರು. ಚರ್ಚೆ ವೇಳೆ ರಘು ಆಡಿದ ಮಾತಿಗೆ ಸುಖಾ ಸುಮ್ಮನೆ ಎಗರಾಡಿದ ಚಂದ್ರಚೂಡ್, ಇನ್ಮುಂದೆ ಈ ಮನೆಯಲ್ಲಿ ಯಾವನಿಗೂ ಸಹಾಯ ಮಾಡುವುದಿಲ್ಲ, ನನ್ನ ಜ್ಞಾನ ಉಪಯೋಗಿಸಿ, ನಿನಗೆ ಸೈಕಾಲಜಿಕಲಿ ಸಹಾಯ ಮಾಡಿದ್ದಕ್ಕೆ ನನ್ನನ್ನೇ ಏಜೆಂಟ್ ಎನ್ನುತ್ತೀಯಾ ಎಂದು ರೇಗಾಡಿದರು.

ಈ ಜಗಳ ನೋಡುತ್ತಿದ್ದ ಮನೆಯ ಇತರ ಸ್ಪರ್ಧಿಗಳು ದಂಗಾಗಿ ನಿಂತಿದ್ದರು. ರಘು ಸಮರ್ಥನೆಗೆ ಚಂದ್ರಚೂಡ್ ಒಪ್ಪಲೇ ಇಲ್ಲ. ಬಳಿಕ, ಅರವಿಂದ್ ಅವರು ಮನವೊಲಿಸುವ ಪ್ರಯತ್ನ ನಡೆಸಿದರು. ಬಳಿಕ, ಮೂವರು ಕ್ಯಾಮೆರಾ ಮುಂದೆ ಬಂದು ಚಂದ್ರಚೂಡ್ ಅವರೇ ಏಜೆಂಟ್ ಆಗಿರಬಹುದು ಎಂದು ಬಹುಮತದಿಂದ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು.

ಮನೆ ಮಂದಿ ನಡುವೆ ಬಿರುಕು ಮೂಡಿಸಲು ಸಂಚು: ಮನೆಯಲ್ಲಿ ಎಲ್ಲರದು ಒಂದು ದಿಕ್ಕಾದರೆ, ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರದ್ದೇ ಬೇರೆಯಾಗಿದೆ. ಮನೆಯ ಸದಸ್ಯರ ನಡುವೆ ಬಿರುಕು ಮೂಡಿಸಿ ಒಡೆದು ಹಾಕಬೇಕು ಎಂದು ಮಾತನಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಜು ಪಾವಗಡ ಶಕ್ತಿ ಕುಂದಿಸಬೇಕಾದರೆ ಅವನ ಹಿಂದಿರುವವರನ್ನು ದೂರ ಸರಿಸಬೇಕು. ದಿವ್ಯಾ ಸುರೇಶ್, ವಿಶ್ವನಾಥ್, ಶುಭಾ ಪೂಂಜಾ ಅವರನ್ನು ಅವನಿಂದ ದೂರ ತರಬೇಕು ಎಂಬ ಚರ್ಚೆ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವೈಷ್ಣವಿಯೂ ಡೇಂಜರಸ್ ಎಂದು ಪ್ರಶಾಂತ್ ಮತ್ತು ಚಂದ್ರಚೂಡ್ ಚರ್ಚೆ ನಡೆಸಿದ್ದಾರೆ.

ಮುಂದಿನವಾರ ‘ಚಕ್ರವರ್ತಿ’ಗೆ ನಾಮಿನೇಶನ್ ಫಿಕ್ಸ್?: ಸದ್ಯದ, ಪರಿಸ್ಥಿತಿ ನೋಡಿದರೆ ಮನೆ ಮಂದಿಗೆಲ್ಲ ಚಂದ್ರಚೂಡ್ ಅವರ ವರ್ತನೆ ಬೇಸರ ತಂದಿದೆ. ಈ ವಾರ ಹೊಸ ಸ್ಪರ್ಧಿ ಎಂಬ ಕಾರಣಕ್ಕೆ ನಾಮಿನೆಶನ್ನಿನಿಂದ ಪಾರಾದ ಅವರು 7ನೇ ವಾರ ಸರಿಯಾಗಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಪ್ರಶಾಂತ್ ಬಿಟ್ಟು ಬಹುತೇಕರು ಅವರ ಬಗ್ಗೆ ಸಿಟ್ಟಾಗಿರುವುದರಿಂದ ನಾಮಿನೇಟ್ ಮಾಡುವ ಸಾಧ್ಯತೆ ಇದೆ. ಸ್ವತಃ, ಚಂದ್ರಚೂಡ್ ಅವರಿಗೆ ಈ ಬಗ್ಗೆ ಸೂಚನೆ ಸಿಕ್ಕಿದ್ದು, ನಾನು ಇದ್ದಂಗೆ ಇರ್ತೀನಿ. ನಾಮಿನೇಟ್ ಬೇಕಾದರೆ ಮಾಡಲಿ, ಜನ ತೀರ್ಮಾನಿಸುತ್ತಾರೆ ಎಂದು ಪ್ರಶಾಂತ್ ಬಳಿ ಬಡಾಯಿ ಕೊಚ್ಚಿಕೊಂಡಿದ್ದಾರೆ.
––––––––––––––––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT