ಫಿನಾಲೆಯಲ್ಲಿ ಐದು ಜನರಿಗೆ ಮಾತ್ರ ಜಾಗ ಇರುವುದರಿಂದ ಒಬ್ಬರ ಪ್ರಯಾಣ ಇಂದು ಅಂತ್ಯವಾಗಲಿದೆ ಎಂದು ಬಿಗ್ ಬಾಸ್ ಘೋಷಿಸಿದರು.
ಬಿಗ್ ಬಾಸ್ ಮನೆಯಲ್ಲಿ ಒಂದು ವೇದಿಕೆ ನಿರ್ಮಾಣ ಮಾಡಿ, ಮ್ಯೂಸಿಕ್ ಹಾಕಲಾಗಿತ್ತು. ಅದರ ಮೇಲೆ ಒಬ್ಬೊಬ್ಬರನ್ನೇ ಬಂದು ನಿಲ್ಲಲು ಸೂಚಿಸಲಾಗಿತ್ತು. ವೇದಿಕೆ ಭೂಮಿಯ ಒಳಗೆ ಹೋಗುವ ಮತ್ತು ಮೇಲೇಳುವ ಮೂಲಕ ಸ್ಪರ್ಧಿಗಳ ಟೆನ್ಶನ್ ಹೆಚ್ಚಿಸಿತ್ತು. ವೇದಿಕೆ ಮೇಲೆ ಬಂದಾಗಯಾವ ಸದಸ್ಯ ಕಾಣಿಸುವುದಿಲ್ಲವೋಅವರು ಎಲಿಮಿನೇಟ್ ಆಗಿರುತ್ತಾರೆ ಎಂದು ಬಿಗ್ ಬಾಸ್ ಹೇಳಿದ್ದರು. ಈ ರೀತಿ ಎರಡು ಮೂರು ಸುತ್ತು ನಡೆದ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿದ್ದಾರೆ.
ಆರ್ಯವರ್ಧನ್ ಕಣ್ಮರೆಯಾಗುತ್ತಿದ್ದಂತೆ ಅವರನ್ನು ಅಪ್ಪ ಎಂದು ಕರೆಯುತ್ತಿದ್ದ ರೂಪೇಶ್ ಶೆಟ್ಟಿ ತೀವ್ರ ದುಃಖ ವ್ಯಕ್ತಪಡಿಸಿದರು. ಅತ್ತು ಗೋಳಾಡಿದರು. ಅವರನ್ನು ಸಮಾಧಾನಪಡಿಸಲು ಉಳಿದ ಸದಸ್ಯರು ಹರಸಾಹಸಪಡಬೇಕಾಯಿತು.
ಮನೆಯಲ್ಲಿ ಉಳಿದಿರುವ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ದೀಪಿಕಾ ದಾಸ್ ಮತ್ತು ರೂಪೇಶ್ ರಾಜಣ್ಣ ಫೈನಲ್ ಹಂತಕ್ಕೆ ಬಂದಿದ್ದಾರೆ. ಶುಕ್ರವಾರ ಮತ್ತು ಶನಿವಾರ ಫಿನಾಲೆ ನಡೆಯಲಿದ್ದು, ಸೀಸನ್ 9ರ ವಿನ್ನರ್ ಯಾರು ಎಂಬುದು ಗೊತ್ತಾಗಲಿದೆ.