ಬೆಂಗಳೂರು: ಹಲವು ಹಿಟ್ ಚಿತ್ರಗಳನ್ನು ನೀಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕಿರುತೆರೆ ರಿಯಾಲಿಟಿ ಶೋಗಳನ್ನೂ ಸೊಗಸಾಗಿ ನಡೆಸಿಕೊಡುವುದರಲ್ಲಿ ಎತ್ತಿದ ಕೈ. ಅಷ್ಟಕ್ಕೂ ಗಣೇಶ್ ಚಿತ್ರರಂಗ ಪ್ರವೇಶ ಮಾಡಲು ಕಾರಣವೇ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಟೈಮ್ಸ್‘ ಶೋ.
ಆ ನಂತರ ಗಣೇಶ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡು, ಇಂದಿಗೂ ಹೊಸ ಸಿನಿಮಾಗಳಲ್ಲಿ ಲವಲವಿಕೆಯಿಂದ ತೊಡಗಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅವರು ಕಿರುತೆರೆ ರಿಯಾಲಿಟಿ ಶೋಗಳಿಂದ ದೂರ ಇದ್ದರು. ಇದೀಗ ಮತ್ತೊಂದು ಕಿರುತೆರೆ ರಿಯಾಲಿಟಿ ಶೋ ಮೂಲಕ ಪ್ರವೇಶ ಮಾಡುತ್ತಿದ್ದಾರೆ.
ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವ ಅವರು, ‘ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ರಿಯಾಲಿಟಿ ಶೋ ಒಂದನ್ನು ನಡೆಸಿ ಕೊಡಲು ಶೀಘ್ರದಲ್ಲೇ ಬರುತ್ತಿದ್ದೇನೆ’ಎಂದು ಪ್ರೋಮೊವನ್ನು ಹಂಚಿಕೊಂಡಿದ್ದಾರೆ. ಆದರೆ, ಕಾರ್ಯಕ್ರಮ ಏನು? ಎಂಬುದರ ಬಗ್ಗೆ ಗುಟ್ಟು ಕಾಪಾಡಿಕೊಂಡಿದ್ದಾರೆ.
‘ಬಹಳ ದಿನಗಳ ನಂತರ ಕಿರುತೆರೆಗೆ, Zee ಕನ್ನಡದ ಮೂಲಕ ಒಂದು ಹೊಸ ರಿಯಾಲಿಟಿ ಶೋ ಜೊತೆ ಬರ್ತಿದೀನಿ. ಶೀಘ್ರದಲ್ಲಿ... ನಿರೀಕ್ಷಿಸಿ’ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಜೀ ವಾಹಿನಿ ‘ಗಣಪನ ಆಗಮನ’ಎಂದು ಗಣೇಶೋತ್ಸವದ ಹಿನ್ನೆಲೆಯಲ್ಲಿಸಕತ್ ಪ್ರೋಮೊ ಬಿಡುಗಡೆ ಮಾಡಿದೆ.
ಬಹಳ ದಿನಗಳ ನಂತರ ಕಿರುತೆರೆಗೆ, Zee ಕನ್ನಡದ ಮೂಲಕ ಒಂದು ಹೊಸ ರಿಯಾಲಿಟಿ ಶೋ ಜೊತೆ ಬರ್ತಿದೀನಿ. ಶೀಘ್ರದಲ್ಲಿ... ನಿರೀಕ್ಷಿಸಿ. pic.twitter.com/LrVSsL3bts