ಮುಂಬೈ:ರಮಾನಂದ ಸಾಗರ್ ಅವರ ಜನಪ್ರಿಯ 'ರಾಮಾಯಣ' ಧಾರಾವಾಹಿಯಲ್ಲಿ ರಾವಣ ಪಾತ್ರ ನಿರ್ವಹಿಸಿದ್ದ ನಟ ಅರವಿಂದ ತ್ರಿವೇದಿ (82) ಕಳೆದ ರಾತ್ರಿ ನಿಧನರಾದರು.
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ರಾಮಾಯಣ‘ದಲ್ಲಿನ ರಾವಣ ಪಾತ್ರ ತ್ರಿವೇದಿ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ವೃತ್ತಿ ಜೀವನ ತೊರೆದ ನಂತರ ಕೆಲಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು, ಮಾಡಿದ್ದ ಪಾತ್ರ ರಾವಣನಾದರೂ ಆ ಪಾತ್ರಕ್ಕೆ ಅವರು ನಿಜಜೀವನದಲ್ಲಿ ತದ್ವಿರುದ್ದವಾಗಿದ್ದರು ಎಂದು ಅವರ ಅಭಿಮಾನಿಗಳು ಗುಣಗಾನ ಮಾಡುತ್ತಿದ್ದಾರೆ.
ಕೊರೊನಾ ಲಾಕ್ಡೌನ್ನಲ್ಲಿ ರಾಮಾಯಣ ಧಾರಾವಾಹಿ ದೂರದರ್ಶನದಲ್ಲಿ ಮರುಪ್ರಸಾರವಾಗಿತ್ತು. ಈ ವೇಳೆ ಮನೆಯಲ್ಲಿ ಕುಳಿತು ಟಿವಿಯಲ್ಲಿ ತಮ್ಮ ಪಾತ್ರ ನೋಡುತ್ತಿದ್ದ ಅರವಿಂದ ತ್ರಿವೇದಿ ಅವರು, ಭಾವುಕರಾಗಿದ್ದರು. ಸೀತಾಪಹರಣ ದೃಶ್ಯ ನೋಡಿ ಅತ್ತಿದ್ದ ಅವರು, ’ಆ ಸಮಯದಲ್ಲಿ ನನಗೆ ಪಾಪ ಪ್ರಜ್ಞೆ ಕಾಡಿತ್ತು’ ಎಂದು ಹೇಳಿದ್ದರು.
— Arvind Trivedi (@Arvindtrivedi0) April 15, 2020
ಆ ವಿಡಿಯೊ ಇಂದು ಟ್ವಿಟರ್ನಲ್ಲಿ ಮತ್ತೆ ವೈರಲ್ ಆಗಿದೆ. ಅಲ್ಲದೇ ಅರವಿಂದ ತ್ರಿವೇದಿ ಅವರು ಸಾಯುವ ಮುನ್ನ ‘ಹರ ಹರ ಮಹಾದೇವ‘ ಎಂದು ರಾವಣನ ಪಾತ್ರದಲ್ಲಿ ಮಹಾದೇವನನ್ನು ಸ್ಮರಿಸುವ ಚಿತ್ರವನ್ನು ನಿನ್ನೆ ಸಂಜೆ ಟ್ವಿಟರ್ನಲ್ಲಿ ಪ್ರಕಟಿಸಿದ್ದರು. ಬಳಿಕ ನಿಧನರಾಗಿದ್ದರು.
हर हर महादेव pic.twitter.com/s6QmWLtzeW
— Arvind Trivedi (@Arvindtrivedi0) April 5, 2020
ಗುಜರಾತಿ ಸಿನಿಮಾಗಳಲ್ಲಿ 40 ವರ್ಷಗಳ ನಟನೆಯ ಸುದೀರ್ಘ ಪ್ರಯಾಣದಲ್ಲಿ ಅವರ ಹಲವು ಚಿತ್ರಗಳು ಜನಪ್ರಿಯತೆ ಪಡೆದಿವೆ. ಹಿಂದಿ ಮತ್ತು ಗುಜರಾತಿಯ ಸಾಮಾಜಿಕ, ಪೌರಾಣಿಕ ಕಥೆಯಾಧಾರಿತ ಸುಮಾರು 300 ಸಿನಿಮಾಗಳಲ್ಲಿ ಅರವಿಂದ ಅಭಿನಯಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅವರನ್ನು ಗುರುತಿಸುವಂತೆ ಮಾಡಿದ್ದು ರಾಮಾಯಣ ಧಾರಾವಾಹಿಯ 'ರಾವಣ' ಪಾತ್ರ. ಇದರೊಂದಿಗೆ ಖ್ಯಾತಿ ತಂದುಕೊಟ್ಟ ಮತ್ತೊಂದು ಧಾರಾವಾಹಿ 'ವಿಕ್ರಮ್ ಔರ್ ಬೇತಾಳ್'.
ಅರವಿಂದ ತ್ರಿವೇದಿ ಅವರು 1991ರಿಂದ 1996ರ ವರೆಗೂ ಸಂಸತ್ ಸದಸ್ಯರಾಗಿದ್ದರು. ಗುಜರಾತ್ನ ಸಾಬರ್ಕಾಂಠಾ ಜಿಲ್ಲೆಯಿಂದ ಅವರು ಆಯ್ಕೆಯಾಗಿದ್ದರು. ವಿಜಯ್ ಆನಂದ್ ಅವರ ನಂತರ 2002ರಿಂದ 2003ರವರೆಗೂ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್ಸಿ) ಮುಖ್ಯಸ್ಥರಾಗಿದ್ದರು.
ಕಳೆದ ವರ್ಷ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ದೂರದರ್ಶನ ರಾಮಾಯಣ ಧಾರವಾಹಿಯನ್ನು ಮರುಪ್ರಸಾರ ಮಾಡಿದಾಗ, ಆ ಧಾರಾವಾಹಿಯ ಎಲ್ಲ ಹಿರಿಯ ನಟರು ಮತ್ತೆ ಮುನ್ನೆಲೆಗೆ ಬಂದರು. ಹಲವು ಕಲಾವಿದರು ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆದು ಸಕ್ರಿಯರಾದರು.
ಮುಂಬೈನ ದಹನುಕರವಾಡಿಯಲ್ಲಿ ಇಂದುಅರವಿಂದ ತ್ರಿವೇದಿ ಅವರ ಅಂತ್ಯಸಂಸ್ಕಾರ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.