ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಜೂನ್ 22ರಿಂದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಆರಂಭವಾಗಲಿದೆ.
ನಟ‘ಪವರ್ ಸ್ಟಾರ್‘ ಪುನೀತ್ ರಾಜ್ಕುಮಾರ್
ಮತ್ತೆ ಈ ಶೋ ನಡೆಸಿಕೊಡಲಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ. ಹುಬ್ಬಳ್ಳಿ, ಮೈಸೂರು, ದಾವಣಗೆರೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆಡಿಷನ್ ನಡೆಸಲಾಗಿದೆ. ಒಟ್ಟು 43 ಸಂಚಿಕೆಗಳು ಮೂಡಿಬರಲಿದ್ದು, ಈಗಾಗಲೇ ನಾಲ್ಕು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ.
ಈ ಬಾರಿ ವೀಕ್ಷಕರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿಯೇ ವೂಟ್ ಮತ್ತು ಮೈ ಜಿಯೊ ಆ್ಯಪ್ಗಳಲ್ಲಿ ಪ್ಲೇ ಅಲಾಂಗ್ ಆರಂಭಿಸಲಾಗಿದೆ. ಇದರ ಮೂಲಕ ವೀಕ್ಷಕರು ಕಾರ್ಯಕ್ರಮದ ಜೊತೆಯಲ್ಲಿಯೇ ಕೇಳುವ ಪ್ರಶ್ನೆಗಳಿಗೆ ಪ್ಲೇ ಅಲಾಂಗ್ನಲ್ಲಿಯೇ ಉತ್ತರಿಸಿ ಬಹುಮಾನ ಗೆಲ್ಲಬಹುದು.
ಇದನ್ನೂ ಓದಿ:‘ಕೋಟ್ಯಧಿಪತಿ’ ಕುರ್ಚಿಯಲ್ಲಿ ಮತ್ತೆ ಪುನೀತ್?
‘ಅಪ್ಪಾಜಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಕೌನ್ ಬನೇಗಾ ಕರೋಡ್ಪತಿ ಶೋ ನೋಡುತ್ತಿದ್ದರು. ಅದೇ ನಾನು ಈ ಕಾರ್ಯಕ್ರಮ ನಡೆಸಿಕೊಡಲು ಸ್ಫೂರ್ತಿ’ ಎಂದು ನಟ ಪುನೀತ್ ರಾಜ್ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಹಿಂದೆ ಎರಡು ಬಾರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದೇನೆ. ಮೂರನೇ ಬಾರಿಗೆ ಕಾರ್ಯಕ್ರಮನಡೆಸಿಕೊಡಲು ಉತ್ಸುಕನಾಗಿದ್ದೇನೆ’ ಎಂದರು.
ಕನ್ನಡದ ಕೋಟ್ಯಧಿಪತಿ starting soon..
— Puneeth Rajkumar (@PuneethRajkumar) June 15, 2019
June 22 ರಿಂದ ಶನಿ - ಭಾನು ರಾತ್ರಿ 8:00ಕ್ಕೆ pic.twitter.com/HzA1BqU9qy
‘ಮೊದಲ ಸೀಸನ್ ನಡೆಸಿ ಕೊಡುವಾಗ ಸಾಕಷ್ಟು ಭಯಪಟ್ಟಿದ್ದೆ. ಆಗ ಅಮ್ಮ(ಪಾರ್ವತಮ್ಮ ರಾಜ್ಕುಮಾರ್) ಮತ್ತು ಅಣ್ಣಂದಿರು ಧೈರ್ಯ ತುಂಬಿದರು. ರಾಜ್ಯದ ವಿವಿಧೆಡೆಯಿಂದ ಹಲವು ಮಂದಿ ಕಾರ್ಯಕ್ರಮದ ಮೇಲೆ ಭರವಸೆ ಇಟ್ಟುಕೊಂಡು ಬರುತ್ತಾರೆ. ಕೆಲವರು ದುಃಖ ತೋಡಿಕೊಳ್ಳುತ್ತಾರೆ. ಆದರೆ, ನಾನು ಅವರು ಅಳುವುದನ್ನು ಇಷ್ಟಪಡುವುದಿಲ್ಲ. ಹುಟ್ಟೂರು, ಅಲ್ಲಿನ ಸಂಸ್ಕೃತಿ, ಅವರ ವೃತ್ತಿ ಸೇರಿದಂತೆ ಬದುಕಿನ ಸಂತಸ ಕ್ಷಣಗಳನ್ನು ಹಂಚಿಕೊಳ್ಳುವಾಗ ನನಗೂ ಖುಷಿಯಾಗುತ್ತದೆ’ ಎಂದು ಹೇಳಿದರು.
ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಮಾತನಾಡಿ, ‘ನಮ್ಮ ವಾಹಿನಿಯಲ್ಲಿ ಮೊದಲ ಬಾರಿಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಯುತ್ತಿದೆ. ಪಾರದರ್ಶಕವಾಗಿ ಕಾರ್ಯಕ್ರಮ ನಡೆಸಿಕೊಡುವುದೇನಮ್ಮ ಗುರಿ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.