ಬೆಂಗಳೂರು: ಜನವಸತಿ ಹೆಚ್ಚಿರುವ ಪ್ರದೇಶಗಳಲ್ಲಿ ಚಿರತೆಗಳು ಉರುಳುಗಳು ಅಪಾಯ ಎದುರಿಸುತ್ತಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ರಾಜ್ಯದಲ್ಲಿ 2009ರಿಂದ 2020ರ ಅವಧಿಯಲ್ಲಿ 113 ಚಿರತೆಗಳು ತಂತಿ ಉರುಳಿಗೆ ಸಿಲುಕಿದ್ದು, 67 ಚಿರತೆಗಳು ಸಾವಿಗೀಡಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನೇಚರ್ ಕನ್ಸರ್ವೇಟಿವ್ ಫೌಂಡೇಷನ್ನ ವನ್ಯಜೀವಿ ವಿಜ್ಞಾನಿ ಡಾ.ಸಂಜಯ್ ಗುಬ್ಬಿ, ಅಪರ್ಣಾ ಕೊಳೆಕರ್ ಮತ್ತು ಡಾ.ವಿಜಯ ಕುಮಾರ್ ಅವರು ಈ ಕುರಿತು ಸಂಶೋಧನೆ ನಡೆಸಿದ್ದು, ಅಧ್ಯಯನ ವರದಿ ಬಿಡುಗಡೆ ಮಾಡಿದ್ದಾರೆ. ‘ಟ್ರಾಪಿಕಲ್ ಕನ್ಸರ್ವೇಶನ್ ಸೈನ್ಸ್’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಈ ವರದಿ ಪ್ರಕಟವಾಗಿದೆ.
ಮಾನವ ಪ್ರಾಬಲ್ಯವುಳ್ಳ ಪ್ರದೇಶಗಳಾದ, ಸಣ್ಣ ಕಾಡುಗಳು, ಅಡಿಕೆ ತೋಟ, ಜೋಳದ ಹೊಲ ಮತ್ತು ಕಬ್ಬಿನ ಗದ್ದೆಗಳಲ್ಲಿ ವ್ಯಾಪಕವಾಗಿ ಕಂಡುಬರುವ ಚಿರತೆಗಳು, ತಂತಿ ಉರುಳುಗಳಿಂದ ಅತಿ ಹೆಚ್ಚು ಅಪಾಯವನ್ನು ಎದುರಿಸುತ್ತಿವೆ ಎಂದು ವರದಿ ಹೇಳಿದೆ.
ಮಾನವ ಜನಸಂಖ್ಯೆಯ ಸಾಂದ್ರತೆಯು ಪ್ರತಿ ಚ.ಕಿ.ಮೀ.ಗೆ 225 ಜನಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಚಿರತೆಗಳು ಉರುಳಿಗೆ ಸಿಲುಕುವ ಘಟನೆಗಳು ಹೆಚ್ಚಾಗಿವೆ ಎಂದೂ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ಹೆಚ್ಚಿನ ಪ್ರಕರಣಗಳಲ್ಲಿ, (ಶೇ 97.5) ಬೆಳೆಗಳನ್ನು ತಿನ್ನಲು ಬರುವ ಬಲಿಪ್ರಾಣಿಗಳು, ಅದರಲ್ಲೂ ಮುಖ್ಯವಾಗಿ ಕಾಡುಹಂದಿಗಳನ್ನು ಬೇಟೆಯಾಡಲು ಅಳವಡಿಸಲಾಗಿದ್ದ ಉರುಳುಗಳಲ್ಲಿ ಚಿರತೆಗಳು ಬಲಿಪಶುವಾಗಿರುವುದು ಕಂಡು ಬಂದಿದೆ.
ಶೇಕಡಾ 50ರಷ್ಟು ಪ್ರಕರಣಗಳು ಮಳೆಗಾಲದಲ್ಲಿ ದಾಖಲಾಗಿದ್ದು, ಈ ಸಮಯದಲ್ಲಿ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಉರುಳುಗಳನ್ನು ಹೆಚ್ಚು ಅಳವಡಿಸಿರುವ ಕಾರಣ ಚಿರತೆಗಳು ಸಿಕ್ಕಿಹಾಕಿಕೊಂಡು ಸತ್ತಿರಬಹುದು ಎಂದೂ ವ್ಯಾಖ್ಯಾನಿಸಲಾಗಿದೆ.