ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cyclone| ಅರಬ್ಬಿ ಸಮುದ್ರದಲ್ಲಿ 'ಬಿಪರ್ಜೋಯ್' ಚಂಡಮಾರುತ ಸೃಷ್ಟಿ: ಪರಿಣಾಮಗಳೇನು?

Published 6 ಜೂನ್ 2023, 16:14 IST
Last Updated 6 ಜೂನ್ 2023, 16:14 IST
ಅಕ್ಷರ ಗಾತ್ರ

ನವದೆಹಲಿ: ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಮಂಗಳವಾರ ಸಂಜೆ ಚಂಡಮಾರುತವಾಗಿ ರೂಪಾಂತರಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತಕ್ಕೆ 'ಬಿಪರ್ಜೋಯ್' ಎಂಬ ಹೆಸರನ್ನು ಬಾಂಗ್ಲಾದೇಶ ನೀಡಿದೆ.

‘ಆಗ್ನೇಯ ಮತ್ತು ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲಿನ ವಾಯುಭಾರ ಕುಸಿತದ ವಿದ್ಯಮಾನವು ಸುಮಾರು 40 ಕಿಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದ್ದು, ಚಂಡಮಾರುತವಾಗಿ ತೀವ್ರ ರೂಪ ಪಡೆದುಕೊಂಡಿದೆ. ಗೋವಾದಿಂದ ಸುಮಾರು 920 ಕಿಮೀ ದೂರದಲ್ಲಿ ಚಂಡಮಾರುತವು ಕೇಂದ್ರೀಕೃತವಾಗಿದೆ. ಮುಂಬೈನಿಂದ ನೈರುತ್ಯಕ್ಕೆ 1050 ಕಿ.ಮೀ, ಪೋರಬಂದರ್‌ನಿಂದ ದಕ್ಷಿಣ-ನೈಋತ್ಯಕ್ಕೆ 1130 ಕಿ.ಮೀ ದೂರದಲ್ಲಿ ಚಂಡಮಾರುತವಿದೆ’ ಎಂದು ಐಎಂಡಿಯ ಬುಲೆಟಿನ್‌ನಲ್ಲಿ ತಿಳಿಸಿದೆ.

ಚಂಡಮಾರುತವು ಉತ್ತರಕ್ಕೆ ಚಲಿಸುವ ಸಾಧ್ಯತೆಯಿದೆ ಮತ್ತು ಕ್ರಮೇಣ ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಚಂಡಮಾರುತ ಮುಂಬೈಗೆ ಅಪ್ಪಳಿಸುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ತಳ್ಳಿ ಹಾಕಿದೆ.

ಜೂನ್ 6 ರಂದು ಕೇರಳ-ಕರ್ನಾಟಕ ಕರಾವಳಿ ಮತ್ತು ಲಕ್ಷದ್ವೀಪ-ಮಾಲ್ಡೀವ್ಸ್ ಪ್ರದೇಶಗಳಲ್ಲಿ, ಜೂನ್ 8 ರಿಂದ ಜೂನ್ 10 ರವರೆಗೆ ಕೊಂಕಣ-ಗೋವಾ-ಮಹಾರಾಷ್ಟ್ರ ಕರಾವಳಿಯಲ್ಲಿ ಸಮುದ್ರದಲ್ಲಿನ ಪರಿಸ್ಥಿತಿಗಳು ವಿಪರೀತಕ್ಕೆ ತಲುಪುವ ಸಾಧ್ಯತೆಗಳಿವೆ. ಹೀಗಾಗಿ ಸಮುದ್ರದಲ್ಲಿರುವ ಮೀನುಗಾರರು ಹಿಂದೆ ಬರಲು ಸೂಚಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿನ ಈ ವಿದ್ಯಮಾನ ಮುಂಗಾರು ಮಾರುತಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಸೋಮವಾರವಷ್ಟೇ ಹೇಳಿತ್ತು. ಆದರೆ, ಮಾರುತಗಳು ಕೇರಳಕ್ಕೆ ಯಾವಾಗ ಪ್ರವೇಶಿಸಲಿವೆ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ. ಜೂನ್‌ 8 ಅಥವಾ 9ರಂದು ಮಾರುತಗಳು ಕೇರಳ ಪ್ರವೇಶಿಸಬಹುದು ಎಂದು ಖಾಸಗಿ ಸಂಸ್ಥೆ ‘ಸ್ಕೈಮೆಟ್‌’ ತಿಳಿಸಿದೆ.

'ಅರಬ್ಬಿ ಸಮುದ್ರದಲ್ಲಿನ ಈ ಪ್ರಬಲ ಹವಾಮಾನ ವ್ಯವಸ್ಥೆಗಳು ಮಾನ್ಸೂನ್ ಪ್ರವೇಶವನ್ನು ಹಾಳುಮಾಡಲಿವೆ. ಮಾನ್ಸೂನ್ ಮಾರುತಗಳು ಕರಾವಳಿ ಭಾಗಗಳನ್ನು ತಲುಪಿದರೂ, ಚಂಡಮಾರತದ ಪರಿಣಾಮವಾಗಿ ಪಶ್ಚಿಮ ಘಟ್ಟಗಳ ಆಚೆಗೆ ಹೋಗುವುದು ಕಷ್ಟವಾಗಬಹುದು’ ಎಂದು ‘ಸ್ಕೈಮೆಟ್‌’ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT