ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಬಹುರಾಜ್ಯ ಸಹಕಾರ ಸಂಘ- ಕೇಂದ್ರ ಸರ್ಕಾರಕ್ಕೇ ಪರಮಾಧಿಕಾರ

Last Updated 4 ಜನವರಿ 2023, 23:26 IST
ಅಕ್ಷರ ಗಾತ್ರ

ಬೇರೆ–ಬೇರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳನ್ನು ಒಗ್ಗೂಡಿಸಿ ಬಹುರಾಜ್ಯ ಸಹಕಾರ ಸಂಘಗಳನ್ನು ರಚಿಸುವ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂತಹ ಬಹುರಾಜ್ಯ ಸಹಕಾರ ಸಂಘಗಳ ರಚನೆಯ ನಂತರ, ಸಹಕಾರ ಸಂಘಗಳ ಕಾರ್ಯನಿರ್ವಹಣೆಯಲ್ಲಿ ಭಾಗಿಯಾಗಲು ಕೇಂದ್ರ ಸರ್ಕಾರಕ್ಕೆ ಈ ತಿದ್ದುಪಡಿಯು ಅವಕಾಶ ಮಾಡಿಕೊಡುತ್ತದೆ. ಕೇಂದ್ರ ಸರ್ಕಾರಕ್ಕೆ ಈವರೆಗೆ ಇಲ್ಲದೇ ಇದ್ದ ಅಧಿಕಾರಗಳನ್ನು ಈ ತಿದ್ದುಪಡಿಯು ನೀಡುತ್ತದೆ. ಗುಜರಾತಿನ ಅಮೂಲ್‌ ಮತ್ತು ಕರ್ನಾಟಕದ ಕೆಎಂಎಫ್‌ ಒಟ್ಟಿಗೆ ಕೆಲಸ ಮಾಡುತ್ತವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯು, ಈ ತಿದ್ದುಪಡಿ ಮಸೂದೆಯ ಕಾರಣದಿಂದ ಮಹತ್ವ ಪಡೆದಿದೆ

‘ಸಹಕಾರ ಸಂಘಗಳು ಮತ್ತು ಬಹುರಾಜ್ಯ ಸಹಕಾರ ಸಂಘಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಬಹುರಾಜ್ಯ ಸಹಕಾರ ಸಂಘ ಕಾಯ್ದೆ–2022ಕ್ಕೆ ತಿದ್ದುಪಡಿ ತರಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಭಾಗವಾಗಿ ಬಹುರಾಜ್ಯ ಸಹಕಾರ ಸಂಘ ಮಸೂದೆ–2022ನ್ನು ಈಚೆಗೆ ಸಂಸತ್ತಿನಲ್ಲಿ ಮಂಡಿಸಲಾಗಿದೆ. ವಿರೋಧ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾದ ಕಾರಣ, ಈ ಮಸೂದೆಯನ್ನು ಸಂಸದೀಯ ಸಮಿತಿಯ ಪರಾಮರ್ಶೆಗೆ ಕಳುಹಿಸಲಾಗಿದೆ. ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳ ಅಧಿಕಾರವನ್ನು ಈ ಮಸೂದೆಯು ಮೊಟಕುಗೊಳಿಸುತ್ತದೆ ಎಂಬುದು ಈ ತಿದ್ದುಪಡಿಯ ಬಗ್ಗೆ ವಿರೋಧ ಪಕ್ಷಗಳ ಪ್ರಮುಖ ಆಕ್ಷೇಪ.

ರಾಜ್ಯದಲ್ಲಿ ಸಹಕಾರ ಸಂಘಗಳಿಗೆ ಚುನಾವಣೆ ನಡೆಸಲು ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರ ಎಂಬ ಪ್ರತ್ಯೇಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರಗಳು ಸಂಪೂರ್ಣ ಸ್ವಾಯತ್ತೆ ಹೊಂದಿವೆ. ಈಗ ಬಹುರಾಜ್ಯ ಸಹಕಾರ ಸಂಘಗಳ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಸಲು ರಾಷ್ಟ್ರಮಟ್ಟದಲ್ಲಿಯೂ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರಚಿಸಲು ಈ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ರಾಜ್ಯಮಟ್ಟದ ಚುನಾವಣಾ ಪ್ರಾಧಿಕಾರಗಳಿಗೆ ಹೋಲಿಸಿದರೆ, ರಾಷ್ಟ್ರಮಟ್ಟದ ಚುನಾವಣಾ ಪ್ರಾಧಿಕಾರದ ಅಧಿಕಾರ ಹೆಚ್ಚು. ಈ ಪ್ರಾಧಿಕಾರದ ರಚನೆ ಮತ್ತು ಅಧಿಕಾರಗಳ ಬಗ್ಗೆಯೇ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಈ ಮಸೂದೆಯಲ್ಲಿರುವ ಸೆಕ್ಷನ್‌ಗಳ ಅಡಿಯಲ್ಲಿ ಸ್ಥಾಪಿಸಲಾದ ಬಹುರಾಜ್ಯ ಸಹಕಾರ ಸಂಘಗಳ ನಿರ್ದೇಶಕ ಮಂಡಳಿಗೆ ರಾಷ್ಟ್ರಮಟ್ಟದ ಚುನಾವಣಾ ಪ್ರಾಧಿಕಾರವು ಚುನಾವಣೆ ನಡೆಸಲಿದೆ. ಈ ಪ್ರಾಧಿಕಾರವು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಗರಿಷ್ಠ ಮೂವರು ಸದಸ್ಯರನ್ನು ಕೇಂದ್ರ ಸರ್ಕಾರವು ನೇಮಕ ಮಾಡಬಹುದು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಮತ್ತು ಅಧೀನ ಕಾರ್ಯದರ್ಶಿ ರ‍್ಯಾಂಕ್‌ನ ಅಧಿಕಾರಿಗಳನ್ನು ನೇಮಕ ಮಾಡಲು ಈ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ, ಉಳಿದ ಮೂವರು ಸದಸ್ಯರ ಆಯ್ಕೆ ಹೇಗೆ ನಡೆಯುತ್ತದೆ ಎಂಬುದರ ವಿವರ ಮಸೂದೆಯಲ್ಲಿ ಇಲ್ಲ. ಬದಲಿಗೆ, ‘ಸದಸ್ಯರಾಗುವವರಿಗೆ ಇರಬೇಕಾದ ಅರ್ಹತೆಗಳೇನು ಎಂಬುದನ್ನು ಆಯ್ಕೆ ಸಂದರ್ಭದಲ್ಲಿ ವಿವರಿಸಲಾಗುತ್ತದೆ’ ಎಂದಷ್ಟೇ ಮಸೂದೆಯಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ‘ಸರ್ಕಾರವು ತನಗೆ ಬೇಕಾದವರನ್ನು ಪ್ರಾಧಿಕಾರಕ್ಕೆ ನೇಮಕಾತಿ ಮಾಡಿಕೊಡಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಸದಸ್ಯರು ಯಾರಾಗಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸಬೇಕು’ ಎಂದು ಕಾಂಗ್ರೆಸ್‌ನ ಅಧಿರ್ ರಂಜನ್‌ ಚೌಧರಿ ಅವರು ಮಸೂದೆ ಮೇಲಿನ ಚರ್ಚೆಯ ವೇಳೆ ಒತ್ತಾಯಿಸಿದ್ದರು.

ಈ ಪ್ರಾಧಿಕಾರದ ಕೆಲವು ಅಧಿಕಾರಗಳ ಬಗ್ಗೆಯೂ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ತಮ್ಮ ಆಕ್ಷೇಪವನ್ನು ದಾಖಲಿಸಿದೆ. ಬಹುರಾಜ್ಯ ಸಹಕಾರ ಸಂಘಗಳ ನಿರ್ದೇಶಕರ ಮಂಡಳಿಗೆ ನಡೆದ ಚುನಾವಣೆಯನ್ನು ಮತ್ತು ಚುನಾವಣೆಯ ಮೂಲಕ ಆದ ಆಯ್ಕೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಅಧಿಕಾರ ಕೇಂದ್ರ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಇದೆ. ಇದನ್ನು ಮಸೂದೆಯ 123ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಪ್ರಜಾಸತ್ತಾತ್ಮಕವಾಗಿ ನಡೆದ ಚುನಾವಣೆಯ ಮೂಲಕ ಆಯ್ಕೆಯಾದವರನ್ನು, ಸರ್ಕಾರದಿಂದ ನೇಮಕವಾದ ಪ್ರಾಧಿಕಾರಕ್ಕೆ ಸಂಪೂರ್ಣವಾಗಿ ಅಮಾನತು ಮಾಡಲು ಅಥವಾ ಆಯ್ಕೆಯನ್ನೇ ರದ್ದುಪಡಿಸುವ ಅಧಿಕಾರ ನೀಡಲಾಗಿದೆ. ಇದು ಸಹಕಾರ ತತ್ವಕ್ಕೇ ವಿರುದ್ಧವಾದುದು ಎಂಬುದು ವಿರೋಧ ಪಕ್ಷಗಳ ಆಕ್ಷೇಪ.

ಅನಿರ್ದಿಷ್ಟಾವಧಿವರೆಗೆ ಆಡಳಿತಾಧಿಕಾರಿ ನೇಮಕಕ್ಕೆ ಅವಕಾಶ

ಬಹುರಾಜ್ಯ ಸಹಕಾರ ಸಂಘಗಳ ಕಾರ್ಯನಿರ್ವಹಣೆಯಲ್ಲಿ ಸರ್ಕಾರವು ನೇರವಾಗಿ ಭಾಗಿಯಾಗಲು ತಿದ್ದುಪಡಿ ಮಸೂದೆಯು ಅವಕಾಶ ಮಾಡಿಕೊಡುತ್ತದೆ.

‘ಬಹುರಾಜ್ಯ ಸಹಕಾರ ಸಂಘಗಳ ನಿರ್ದೇಶಕರ ಮಂಡಳಿಯು ಸಹಕಾರ ತತ್ವಗಳಿಗೆ ವಿರುದ್ಧವಾಗಿ, ಸಂಘ ಮತ್ತು ಸಂಘದ ಸದಸ್ಯರ ನ್ಯಾಯಬದ್ಧ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಸರ್ಕಾರವು ಭಾವಿಸಿದರೆ ಮಂಡಳಿಯನ್ನು ರದ್ದುಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ’ ಎಂದು ಈ ಮಸೂದೆಯ 123ಮೇ (1)(ಎ) ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

ಇದೇ ಸೆಕ್ಷನ್‌ನಲ್ಲಿ, ‘ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಹಕಾರ ಚುನಾವಣಾ ಪ್ರಾಧಿಕಾರವು ನೀಡಿದ ನಿರ್ದೇಶನವನ್ನು ಮತ್ತು ಚುನಾವಣೆ ನಡೆಸುವಂತೆ ನೀಡಲಾದ ಸೂಚನೆಯನ್ನು ಪಾಲಿಸುವಲ್ಲಿ ನಿರ್ದೇಶಕ ಮಂಡಳಿಯು ವಿಫಲವಾದರೆ, ಅಂತಹ ನಿರ್ದೇಶಕ ಮಂಡಳಿಯನ್ನು ರದ್ದುಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ’ ಎಂದು ವಿವರಿಸಲಾಗಿದೆ.

ಜತೆಗೆ, ‘ನಿರ್ದೇಶಕ ಮಂಡಳಿಯನ್ನು ರದ್ದುಪಡಿಸದೇ ಅಥವಾ ಅಮಾನತು ಮಾಡದೇ ಇದ್ದರೆ, ಸಹಕಾರ ಸಂಘದ ಕಾರ್ಯನಿರ್ವಹಣೆಗೆ ಗರಿಷ್ಠ ಇಬ್ಬರು ಆಡಳಿತಾಧಿಕಾರಿಗಳನ್ನು ಕೇಂದ್ರ ಸರ್ಕಾರವು ನೇಮಕ ಮಾಡಬಹುದು. ಅಂತಹ ಆಡಳಿತಾಧಿಕಾರಿಯ ಅಧಿಕಾರದ ಅವಧಿ ಆರು ತಿಂಗಳು ಮೀರಬಾರದು ಅಥವಾ ಅವರ ಅಧಿಕಾರದ ಅವಧಿ ಎಷ್ಟು ಎಂಬುದನ್ನು ಸರ್ಕಾರವು ತನ್ನ ಆದೇಶದಲ್ಲಿ ಉಲ್ಲೇಖಿಸಬಹುದು’ ಎಂದು ಇದೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

ತನ್ನ ವಿರುದ್ಧ ಬಂದಿರುವ ಆರೋಪಗಳಿಗೆ ನಿರ್ದೇಶಕ ಮಂಡಳಿಯು ಸ್ಪಷ್ಟನೆ ನೀಡಲು ಅವಕಾಶವಿದೆಯಾದರೂ, ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ. ಜತೆಗೆ ಬಹುರಾಜ್ಯ ಸಹಕಾರ ಸಂಘಗಳಿಗೆ ಅನಿರ್ದಿಷ್ಟಾವಧಿವರೆಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಈ ಮಸೂದೆ ನೀಡುತ್ತದೆ. ಈ ಮಸೂದೆಯು ಕಾಯ್ದೆಯಾದರೆ, ಬಹುರಾಜ್ಯ ಸಹಕಾರ ಸಂಘಗಳ ಮೇಲೆ ಸಂಪೂರ್ಣ ಹಿಡಿತ ಕೇಂದ್ರ ಸರ್ಕಾರಕ್ಕೆ ದೊರೆಯುತ್ತದೆ.

ಲಾಭವನ್ನು ಹಂಚಿಕೊಳ್ಳಬೇಕು...

ದೇಶದ ಹಲವು ಬಹುರಾಜ್ಯ ಸಹಕಾರ ಸಂಘಗಳು ವಿವಿಧ ಕಾರಣಗಳಿಂದ ನಷ್ಟದಲ್ಲಿವೆ. ಇಂತಹ ಸಂಘಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ನಷ್ಟದಲ್ಲಿ ಸಿಲುಕಿರುವ ಸಹಕಾರ ಸಂಘಗಳಿಗೆ ಚೈತನ್ಯ ನೀಡುವ ಉದ್ದೇಶದಿಂದ ಸಹಕಾರ ನಿಧಿ ಅಸ್ತಿತ್ವಕ್ಕೆ ತರಲು ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಆದರೆ ಈ ಉದ್ದೇಶಕ್ಕಾಗಿ ಹಾಕಿಕೊಂಡಿರುವ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ. ನಷ್ಟದಲ್ಲಿರುವ ಸಹಕಾರ ಸಂಘಗಳನ್ನು ಮೇಲೆತ್ತುವ ಹೊಣೆಯನ್ನು ಲಾಭದಲ್ಲಿರುವ ಸಹಕಾರ ಸಂಘಗಳಿಗೆ ಹೊರಿಸಲು ಈ ಮಸೂದೆಯಲ್ಲಿ ಅವಕಾಶವಿದೆ.

ಸತತ ಮೂರು ವರ್ಷಗಳಿಂದ ಲಾಭದಲ್ಲಿ ಇರುವ ಸಹಕಾರ ಸಂಘಗಳು ‘ಬಹುರಾಜ್ಯ ಸಹಕಾರ ಸಂಘಗಳ ಪುನಶ್ಚೇತನ ಹಾಗೂ ಅಭಿವೃದ್ಧಿ ನಿಧಿ’ಗೆ ಹಣಕಾಸು ನೆರವು ನೀಡಬೇಕು ಎಂದು ಮಸೂದೆ ಹೇಳುತ್ತದೆ. 2002ರ ಕಾಯ್ದೆಯ ಸೆಕ್ಷನ್ 63ಕ್ಕೆ ಹೊಸದಾಗಿ ಸೇರಿಸಲಾಗಿರುವ ಉಪ ಸೆಕ್ಷನ್‌ನಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ.‌ ಸತತ 3 ವರ್ಷಗಳಿಂದ ಲಾಭದಲ್ಲಿರುವ ಸಹಕಾರ ಸಂಘಗಳು ತಮ್ಮ ಲಾಭಾಂಶದ ಶೇಕಡ ಒಂದರಷ್ಟನ್ನು ಅಥವಾ ₹1 ಕೋಟಿ ಹಣವನ್ನು ಐದು ವರ್ಷಗಳ ಕಾಲ ಈ ನಿಧಿಗೆ ನೆರವಿನ ರೂಪದಲ್ಲಿ ನೀಡಬೇಕು ಎಂದು ತಿದ್ದುಪಡಿ ಮಸೂದೆಯು ಹೇಳುತ್ತದೆ.

ಸಹಕಾರ ಸಂಘಗಳು ತಮ್ಮ ಲಾಭಾಂಶವನ್ನು ಸಂಘದ ಸದಸ್ಯರಿಗೆ ಮತ್ತು ಷೇರುದಾರರಿಗೆ ಹಂಚಿಕೆ ಮಾಡುತ್ತವೆ. ಆದರೆ ತಿದ್ದುಪಡಿ ಸಮೂದೆಯಿಂದಾಗಿ, ಸಂಘಗಳ ಲಾಭಾಂಶದ ಹಣವು ಸಹಕಾರ ಖಜಾನೆಗೆ ಸೇರುತ್ತದೆ. ಸಹಕಾರ ಸಂಘದ ಲಾಭಕ್ಕೆ ಕಾರಣರಾದ ಸದಸ್ಯರಿಗೆ ಈ ಹಣ ತಲುಪುವ ಬದಲು ನಷ್ಟದಲ್ಲಿರುವ ಬೇರೆ ಯಾವುದೋ ಒಂದು ಸಂಘದ ಪುನಶ್ಚೇತನಕ್ಕೆ ಬಳಕೆಯಾಗುತ್ತದೆ. ದಕ್ಷಿಣ ಭಾರತದ ಸಾಕಷ್ಟು ಸಹಕಾರ ಸಂಘಗಳು ಉತ್ತಮ ಸ್ಥಿತಿಯಲ್ಲಿದ್ದರೆ, ಉತ್ತರ ಭಾರತದ ಬಹುತೇಕ ಸಹಕಾರಿ ಸಂಘಗಳು ನಷ್ಟದಲ್ಲಿವೆ ಎಂಬುದು ಇಲ್ಲಿ ಗಮನಾರ್ಹ.

ಸಹಕಾರ ನಿಧಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಹೊಸದಾಗಿ ಸಮಿತಿಯೊಂದನ್ನು ರಚಿಸುವ ಪ್ರಸ್ತಾವವನ್ನು ತಿದ್ದುಪಡಿ ಮಸೂದೆಯು ಮುಂದಿಟ್ಟಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯ ಮೂಲಕ ರಚನೆಯಾಗಲಿರುವ ಈ ಸಮಿತಿಯು ಹಣಕಾಸು ನಿಧಿಯ ನಿರ್ವಹಣೆ, ನಿಧಿಯ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಲೆಕ್ಕಪತ್ರಗಳ ನಿರ್ವಹಣೆ ಹಾಗೂ ಇತರೆ ದಾಖಲೆಗಳ ನಿರ್ವಹಣೆ ಮಾಡಬೇಕಿದೆ. ಸಿಎಜಿ ಜೊತೆ ಸಂಹವನ ನಡೆಸಿದ ಬಳಿಕ ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಿದ ಸ್ವರೂಪದಲ್ಲಿ ಲೆಕ್ಕಪತ್ರಗಳನ್ನು ನಿರ್ವಹಣೆ ಮಾಡಬೇಕಿರುವುದು ಈ ಸಮಿತಿಯ ಜವಾಬ್ದಾರಿಯಾಗಿರುತ್ತದೆ. ಈ ನಿಧಿಯು ಕೇಂದ್ರ ಸರ್ಕಾರದ ಸಂಪೂರ್ಣ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಎನ್ನಲಾಗಿದೆ.

ಯಾವ ಸಂದರ್ಭದಲ್ಲಿ ನಿಧಿಯನ್ನು ಬಳಕೆ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಕೇಂದ್ರೀಯ ರಿಜಿಸ್ಟ್ರಾರ್ ಅವರು, ಬಹುರಾಜ್ಯ ಸಹಕಾರ ಸಂಘವೊಂದು ನಷ್ಟದಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಅಥವಾ ಅದು ನಷ್ಟದಲ್ಲಿದೆ ಎಂದು ಘೋಷಿಸಿದರೆ, ಈ ನಿಧಿಯನ್ನು ನಷ್ಟದಲ್ಲಿರುವ ಸಂಘದ ಪುನಶ್ಚೇತನಕ್ಕೆ ಬಳಕೆ ಮಾಡಬಹುದು. ಸೆಕ್ಷನ್ 63(1)ರ ಅಡಿಯಲ್ಲಿ ಬಹುರಾಜ್ಯ ಸಹಕಾರ ಸಂಘವೊಂದು ನಷ್ಟದಲ್ಲಿರುವುದಾಗಿ ಘೋಷಿಸಿಕೊಂಡರೆ ಮತ್ತು ಸಂಘ ನಷ್ಟದಲ್ಲಿದೆ ಎಂದು ಕೇಂದ್ರ ಸರ್ಕಾರದ ಅಥವಾ ಇತರೆ ಪ್ರಾಧಿಕಾರಗಳ ಅಧಿಕಾರಿಗಳು ಪ್ರಮಾಣೀಕರಿಸಿದರೆ, ಆ ಸಂಘವು ಪುನಶ್ಚೇತನ ನಿಧಿ ಯೋಜನೆಗೆ ಅರ್ಹತೆ ಪಡೆಯುತ್ತದೆ.

ನಷ್ಟದಲ್ಲಿರುವ ಸಂಘವು ಕೇಂದ್ರ ಸಹಕಾರ ನಿಧಿ ಯೋಜನೆಗೆ ಒಳಪಟ್ಟರೆ, ಅದು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಹೋದಂತಾಗುತ್ತದೆ. ಕಾರ್ಯಕಾರಿ ಮಂಡಳಿ ಶಿಫಾರಸಿನ ಮೇರೆಗೆ, ನಷ್ಟದಲ್ಲಿರುವ ಸಂಘದ ಮಂಡಳಿಯ ಸದಸ್ಯರನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ಸಹಕಾರ, ಹಣಕಾಸು, ಲೆಕ್ಕಪತ್ರ, ಮ್ಯಾನೇಜ್‌ಮೆಂಟ್ ವಲಯದ ಪರಿಣತರು ಅಥವಾ ಇನ್ನಾವುದೇ ಕ್ಷೇತ್ರದವರನ್ನು ಮಂಡಳಿಯ ಸದಸ್ಯರನ್ನಾಗಿ ನೇಮಿಸಬಹುದಾಗಿದೆ. ಸಹಕಾರ ಬ್ಯಾಂಕ್‌ ಒಂದರ ಪುನಶ್ಚೇತನ ಯೋಜನೆ ಆರಂಭಕ್ಕೆ ರಿಸರ್ವ್‌ ಬ್ಯಾಂಕ್‌ನ ಪೂರ್ವಾನುಮತಿ ಅಗತ್ಯ ಎಂದು ಮಸೂದೆ ಹೇಳುತ್ತದೆ.

ಸಹಕಾರ ನಿಧಿಗೆ ಸತತವಾಗಿ ಐದು ವರ್ಷಗಳ ಕಾಲ ಹಣಕಾಸು ನೆರವು ನೀಡಿದ ಬಹುರಾಜ್ಯ ಸಹಕಾರ ಸಂಘವು ಅರ್ಜಿ ಸಲ್ಲಿಸುವ ಮೂಲಕ, ಸಂಘದ ಮೂಲಸೌಕರ್ಯ ಕೆಲಸಗಳಿಗೆ ಹಣಕಾಸಿನ ನೆರವನ್ನು ಕೋರಬಹುದು. ಸಂಘದ ಕೋರಿಗೆ ಸೂಕ್ತವಾಗಿದ್ದಲ್ಲಿ, ಕೇಂದ್ರ ಸರ್ಕಾರವು ಹಣಕಾಸು ನೆರವು ನೀಡಬಹುದು ಎಂದು ಮಸೂದೆ ಹೇಳುತ್ತದೆ.

1.3 ಕೋಟಿ ಪಾಲುದಾರರು

ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಕೇಂದ್ರೀಕರಿಸಿದ ಸಹಕಾರ ಚಳವಳಿಯು ದೇಶದಲ್ಲಿ ಆರಂಭವಾಯಿತು. ದೇಶದ ಬಹುತೇಕರ ಸಹಕಾರ ಸಂಘಗಳು ಹಾಲು, ಗೊಬ್ಬರ, ಸಕ್ಕರೆ, ಮೀನು ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕಂಡುಬರುತ್ತವೆ. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ದೇಶದಲ್ಲೇ ಹೆಸರುವಾಸಿಯಾಗಿವೆ. ಭಾರತೀಯ ರೈತರ ರಸಗೊಬ್ಬರ ಸಹಕಾರ ಸಂಘ (ಇಫ್ಕೊ) ಸಹಕಾರ ತತ್ವದಡಿ ಶುರುವಾಗಿತ್ತು. ಸಂಘದ ಸದಸ್ಯರಿಗೆ ಸಾಲ ಸೌಲಭ್ಯ ನೀಡುವುದು, ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವುದು ಇವುಗಳ ಮುಖ್ಯ ಉದ್ದೇಶ.

ಕೇಂದ್ರ ಸಹಕಾರ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ 8.5 ಲಕ್ಷ ಸಹಕಾರ ಸಂಘಗಳಿವೆ. 1.3 ಕೋಟಿ ಜನರು ಈ ಸಂಘಗಳ ನೇರ ಪಾಲದಾರರು. ಕೆಲವು ಸಂಘಗಳು ಹಲವು ರಾಜ್ಯಗಳಿಗೆ ತಮ್ಮ ನೆಲೆಯನ್ನು ವಿಸ್ತರಿಸಿಕೊಂಡ ಬಳಿಕ ಅವು ಬಹುರಾಜ್ಯ ಸಹಕಾರ ಸಂಘ (ಎಂಎಸ್‌ಸಿಎಸ್) ಎನಿಸಿಕೊಂಡವು. ಉದಾಹರಣೆಗೆ, ಧಾನ್ಯಗಳನ್ನು ಬೆಳೆಯುವ, ಖರೀದಿಸುವ ಹಾಗೂ ಪೂರೈಸುವ ಸಂಘಗಳು ಹಲವು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಂತಹ 1,500 ಬಹುರಾಜ್ಯ ಸಹಕಾರ ಸಂಘಗಳು ನೋಂದಣಿಯಾಗಿವೆ. ಈ ಸ್ವರೂಪದ ಅತಿಹೆಚ್ಚು ಸಂಘಗಳು ಮಹಾರಾಷ್ಟ್ರದಲ್ಲಿವೆ. ಪತ್ತಿನ ಸಹಕಾರ ಸಂಘಗಳು, ಕೃಷಿ ಉತ್ಪನ್ನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕ್‌ಗಳು ಈ ವಲಯದಲ್ಲಿವೆ. ಎಲ್ಲ ರಾಜ್ಯಗಳಲ್ಲಿ ಬಹುತೇಕ ಸಂಘಗಳು ರಾಜಕೀಯ ಮುಖಂಡರ ನಿಯಂತ್ರಣದಲ್ಲಿವೆ. ಸಂಘಗಳ ಚಟುವಟಿಕೆಗಳಲ್ಲಿ ಪಾರದರ್ಶಕತೆಯನ್ನು ತರುವ, ಸಂಘಗಳನ್ನು ಬಲಗೊಳಿಸುವ, ಆರ್ಥಿಕ ಶಿಸ್ತು ತರುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಆಧಾರ: ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆ–2002, ಬಹುರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ–2022, ಪಿಟಿಐ, ಪಿಐಬಿ ಪ್ರಕಟಣೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT