ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ರೈತರು ಮತ್ತೆ ಪ್ರತಿಭಟನೆಗೆ ಇಳಿದದ್ದು ಏಕೆ?

Published 14 ಫೆಬ್ರುವರಿ 2024, 0:30 IST
Last Updated 14 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ವರ್ಷವಿಡೀ ಪ್ರತಿಭಟನೆ ನಡೆಸಿದ್ದು ಇನ್ನೂ ಹಸಿರಾಗೇ ಇದೆ. ಇದರ ಮಧ್ಯೆ ಮತ್ತೆ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಪಂಜಾಬ್‌, ಹರಿಯಾಣದಿಂದ ತಂಡ ತಂಡವಾಗಿ ಸಾವಿರಾರು ರೈತರು ದೆಹಲಿಯತ್ತ ಹೊರಟಿದ್ದಾರೆ. ದೇಶದ ಬೇರೆ ರಾಜ್ಯಗಳಿಂದಲೂ ರೈತರು ಅತ್ತ ಹೊರಟಿದ್ದಾರೆ. ಈ ಬಾರಿಯ ಪ್ರತಿಭಟನೆಯ ಪ್ರಮುಖ ಬೇಡಿಕೆ ‘ಕನಿಷ್ಠ ಬೆಂಬಲ ಬೆಲೆ’ ಅನುಷ್ಠಾನಕ್ಕೆ ಕಾಯ್ದೆಯ ಖಾತರಿ ನೀಡಿ ಎಂಬುದಾಗಿದೆ. ಅಂತಹದ್ದೊಂದು ಭರವಸೆಯನ್ನು ಕೇಂದ್ರ ಸರ್ಕಾರವು ರೈತರಿಗೆ ನೀಡಿತ್ತು. ಆದರೆ ವರ್ಷಗಳು ಕಳೆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈಗಿನ ಪ್ರತಿಭಟನೆಗೆ ಇದೇ ಪ್ರಮುಖ ಕಾರಣ.

–––––––

ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಿರಿ – ಇದು ಒಂದು ವರ್ಷದವರೆಗೆ ದೆಹಲಿಯಲ್ಲಿ ನೆಲೆನಿಂತು ಪ್ರತಿಭಟಿಸಿದ್ದ ರೈತರ ಪ್ರಮುಖ ಆಗ್ರಹವಾಗಿತ್ತು. ಬೆಂಬಲ ಬೆಲೆ ನಿಗದಿ, ಸ್ವಾಮಿನಾಥ್‌ ಆಯೋಗದ ಶಿಫಾರಸು ಜಾರಿ ಸೇರಿದಂತೆ ಇತರ ಹಲವು ಬೇಡಿಕೆಗಳೂ ಇದ್ದವು. 2021ರ ನವೆಂಬರ್‌ ತಿಂಗಳೊಂದರ ಬೆಳಗಿನ ಹೊತ್ತಿನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳುತ್ತೇವೆ ಎಂದು ಘೋಷಿಸಿದರು. ಇದೇ ವೇಳೆ ಬೆಂಬಲ ಬೆಲೆ ನಿಗದಿಯು ಹೆಚ್ಚು ಪಾರದರ್ಶಕವಾಗುವ ಕುರಿತು ಸಮಿತಿಯೊಂದನ್ನು ರಚಿಸಲಾಗುವುದು ಎಂದೂ ಭರವಸೆ ನೀಡಿದ್ದರು.

ಪ್ರಧಾನಿ ಮೋದಿ ಅವರು ಹೀಗೆ ಭರವಸೆ ನೀಡಿದ ಸುಮಾರು ಎಂಟು ತಿಂಗಳ ಬಳಿಕ ಕೇಂದ್ರ ಸರ್ಕಾರವು ಸಮಿತಿಯೊಂದನ್ನು ರಚನೆ ಮಾಡಿತು. ಕೃಷಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಸಂಜಯ್‌ ಅಗರ್ವಾಲ್‌ ಅವರ ನೇತೃತ್ವದಲ್ಲಿ 2022ರ ಜುಲೈನಲ್ಲಿ ಸಮಿತಿಯನ್ನು ರೂಪಿಸಲಾಯಿತು. 2022ರ ಜುಲೈಯಿಂದ 2024 ಫೆಬ್ರುವರಿಯವರೆಗೆ 37 ಸಭೆಗಳನ್ನು, ಕಾರ್ಯಾಗಾರಗಳನ್ನು ಈ ಸಮಿತಿ ನಡೆಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಮಿತಿ ರಚನೆಯಾದ ಎರಡು ವರ್ಷದ ಬಳಿಕವೂ ಇಲ್ಲಿಯವರೆಗೂ ಸಮಿತಿಯು ಯಾವುದೇ ಶಿಫಾರಸನ್ನು ನೀಡಿಲ್ಲ ಅಥವಾ ಯಾವುದೇ ಮಧ್ಯಂತರ ವರದಿಯನ್ನೂ ನೀಡಿಲ್ಲ.

ಸಮಿತಿಯ ಕುರಿತು ಸಂಯುಕ್ತ ಕಿಸಾನ್‌ ಮೋರ್ಚಾ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವು ರೈತ ಸಂಘಟನೆಗಳಿಗೂ ಒಪ್ಪಿಗೆ ಇರಲಿಲ್ಲ. ‘ಮೂರು ಕೃಷಿ ಕಾನೂನುಗಳನ್ನು ಬೆಂಬಲಿಸಿದ್ದ ‘ಕೃಷಿ ನಾಯಕ’ರನ್ನು ಈ ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಆದ್ದರಿಂದ ನಮಗೆ ಈ ಸಮಿತಿಯು ಒಪ್ಪಿಗೆ ಇಲ್ಲ’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿತ್ತು. 

ಈಗ ಬೆಂಬಲ ಬೆಲೆ, ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಬೆಂಬಲ ಬೆಲೆ ನಿಗದಿ ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ದೆಹಲಿಯತ್ತ ಹೊರಟಿದ್ದಾರೆ. 2020ರಲ್ಲಿ ರೈತರು ಹಾಗೆ ‘ದೆಹಲಿ ಚಲೋ’ ಆರಂಭಿಸಿದಾಗ, ಕೋವಿಡ್‌ನ ನೆಪವೊಡ್ಡಿ ಅವರನ್ನು ದೆಹಲಿ ಗಡಿಯಲ್ಲಿ ತಡೆದು ನಿಲ್ಲಿಸಲಾಗಿತ್ತು. ಆದರೆ ಈಗಲೂ ರೈತರನ್ನು ಅದೇ ರೀತಿ ತಡೆದು ನಿಲ್ಲಿಸಲು ಹರಿಯಾಣದ ಬಿಜೆಪಿ ಸರ್ಕಾರ ಮತ್ತು ದೆಹಲಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ರೈತರಿಗೆ ಕಬ್ಬಿಣದ ಮುಳ್ಳುಗಳಿರುವ ತಡೆ ಗೋಡೆಯನ್ನು ನಿರ್ಮಿಸಲಾಗಿದೆ. ರೈತರ ಮೇಲೆ ಅಶ್ರುವಾಯು ಶೆಲ್‌ ಸಿಡಿಸಲಾಗಿದೆ. ಹಲವರಿಗೆ ಗಾಯಗಳೂ ಆಗಿವೆ. ಪ್ರಭುತ್ವದ ಯಾವ ತಡೆಯನ್ನೂ ಲೆಕ್ಕಿಸದೆ ರೈತರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮುನ್ನಡೆಯುತ್ತಿದ್ದಾರೆ.

ಘೋಷಿಸಿದ್ದೇ ಬೇರೆ, ರಚಿಸಿದ ಸಮಿತಿಯೇ ಬೇರೆ

ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ, ಶಿಫಾರಸು ನೀಡಲು ಸಮಿತಿ ರಚಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗ ಹೇಳಿದ್ದರು. ಆದರೆ ಸರ್ಕಾರವು ರಚಿಸಿದ ಸಮಿತಿಗೆ ವಹಿಸಿದ ಜವಾಬ್ದಾರಿಗಳಲ್ಲಿ ಹೆಚ್ಚಿನವು ಬೇರೆಯದ್ದೇ ಆಗಿದ್ದವು. 

ಸಂಜಯ್‌ ಅಗರ್ವಾಲ್‌ ನೇತೃತ್ವದ ಸಮಿತಿಗೆ ‘ಶೂನ್ಯ ವೆಚ್ಚದಲ್ಲಿ ಬೇಸಾಯ’ ಹೇಗೆ ಮಾಡಬೇಕು ಎನ್ನುವುದರ ಕುರಿತು ಪ್ರಮುಖವಾಗಿ ಅಧ್ಯಯನ ನಡೆಸುವಂತೆ ಸೂಚಿಸಲಾಗಿತ್ತು. ಇದರೊಂದಿಗೆ ಹೆಚ್ಚು ಪಾರದರ್ಶಕವಾಗಿ ಹಾಗೂ ಹೆಚ್ಚು ಸೂಕ್ತವಾದ ರೀತಿಯಲ್ಲಿ ಬೆಂಬಲ ಬೆಲೆ ನಿಗದಿ ಮಾಡುವ ಕುರಿತೂ ಅಧ್ಯಯನ ಮಾಡುವಂತೆ ಹೇಳಲಾಗಿತ್ತು. ಈ ಬಗ್ಗೆ ರೈತ ಸಂಘಟನೆಗಳಿಂದ ಅಸಮಾಧಾನ ಭುಗಿಲೆದ್ದಿತ್ತು. ಸಮಿತಿಯ ಮೊದಲ ಸಭೆಗೆ ರೈತ ಸಂಘಟನೆಗಳು ಗೈರಾಗಿದ್ದವು. ಆಗ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಸಂಘಟನೆಗಳು ಈ ಸಮಿತಿಯ ಸಭೆಗಳಲ್ಲಿ ಈವರೆಗೂ ಭಾಗಿಯಾಗಿಲ್ಲ. 

ದೇಶದ ಅಗತ್ಯಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆಯುವ ಕುರಿತು ಸಲಹೆ ನೀಡಲು ಕೇಳಲಾಗಿತ್ತು. ಹೀಗೆ, ಅನೇಕ ವಿಷಯಗಳಿಗೆ ಸಂಬಂಧಿಸಿ ಸಲಹೆ ನೀಡುವಂತೆ ಸಮಿತಿಗೆ ಕೇಂದ್ರ ಸರ್ಕಾರವು ಕೋರಿತ್ತು. ಆದರೆ, ಬೆಂಬಲ ಬೆಲೆ ನಿಗದಿಗೆ ಸಂಬಂಧಿಸಿ ಇದ್ದ ರೈತರ ಬೇಡಿಕೆಗೆ ಪೂರಕವಾಗಿರುವ ಯಾವ ವಿಷಯದ ಕುರಿತೂ ಸಲಹೆ ನೀಡುವಂತೆ ಸಮಿತಿಯನ್ನು ಕೇಂದ್ರ ಸರ್ಕಾರ ಕೇಳಿಲ್ಲ. ಬೆಂಬಲ ಬೆಲೆ ನಿಗದಿ ಮಾಡುವ ವ್ಯವಸ್ಥೆಯು ಹೆಚ್ಚು ಪಾರದರ್ಶಕವಾಗಿರುವಂತೆ ಯಾವ ಕ್ರಮ ಕೈಗೊಳ್ಳಬೇಕು ಎಂದಷ್ಟೇ ಸಮಿತಿಗೆ ಕೇಳಲಾಗಿತ್ತು. ಇದೇ ಕಾರಣಕ್ಕೇ ರೈತ ಸಂಘಟನೆಗಳು ಈ ಸಮಿತಿಯನ್ನು ನಿರಾಕರಿಸಿದ್ದವು. 

‘ನಾವು ನಿರ್ದಿಷ್ಟವಾಗಿ ಬೆಂಬಲ ಬೆಲೆ ವಿಷಯದ ಕುರಿತೇ ಚರ್ಚೆ ಮಾಡುವ ಸಮಿತಿಯನ್ನು ಬಯಸಿದ್ದೆವು. ಇದು ಬೆಂಬಲ ಬೆಲೆ ವಿಷಯಕ್ಕಿಂತ ಬೇರೆಯ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಿ ವರದಿ ನೀಡಲಿದೆ’ ಎಂದು ರೈತ ಸಂಘಟನೆಗಳು ಹೇಳಿದ್ದವು.

ಕೇಂದ್ರವು ಸಮಿತಿಗೆ ನೀಡಿದ್ದ ಕಾರ್ಯಸೂಚಿ

*ನೈಸರ್ಗಿಕ ಕೃಷಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ರೂಪಿಸುವುದು ಹಾಗೂ ಇಂಥ ಕೃಷಿ ಮಾಡುವ ಕೃಷಿಕರಿಗೆ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸಲಹೆ ನೀಡಿ

*ನೈಸರ್ಗಿಕ ಕೃಷಿ ಉತ್ಪನ್ನಗಳ ಮೌಲ್ಯವನ್ನು ವರ್ಧಿಸುವ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸುವ ವಿಧಾನಗಳ ಕುರಿತು ಸಲಹೆ ನೀಡಿ

*ನೈಸರ್ಗಿಕ ಕೃಷಿ ಮೂಲಕ ಬೆಳೆದ ಉತ್ಪನ್ನಗಳಿಗೆ ಪ್ರಮಾಣಪತ್ರ ನೀಡಲು ಪ್ರಯೋಗಾಲಯವನ್ನು ಸ್ಥಾಪಿಸುವ ಕುರಿತು ಸಲಹೆ ನೀಡಿ

*ಬೆಂಬಲ ಬೆಲೆ ನಿಗದಿ ಮಾಡುವ ವ್ಯವಸ್ಥೆಯು ಹೆಚ್ಚು ಸೂಕ್ತವಾಗಿ ಹಾಗೂ ಹೆಚ್ಚು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಲು ಸಲಹೆ ನೀಡಿ

*ಕೃಷಿ ವೆಚ್ಚ ಮತ್ತು ಬೆಲೆ ಆಯೋಗಕ್ಕೆ ಹೆಚ್ಚಿನ ಸ್ವಾಯತ್ತೆ ನೀಡುವುದು ಎಷ್ಟು ಕಾರ್ಯಸಾಧು ಮತ್ತು ಈ ಆಯೋಗದ ಕಾರ್ಯವಿಧಾನವನ್ನು ಇನ್ನಷ್ಟು ವೈಜ್ಞಾನಿಕಗೊಳಿಸುವುದು ಹೇಗೆ ಎಂಬುದನ್ನು ತಿಳಿಸಿ

*ಕೃಷಿ ಉತ್ಪನ್ನಗಳಿಗೆ ಮೌಲ್ಯ ಒದಗಿಸುವ, ರಫ್ತು ಅವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಕೃಷಿ ಮಾರುಕಟ್ಟೆಯನ್ನು ಶಕ್ತಿಯುತ ಮಾಡುವುದು ಹಾಗೂ ಆಧುನಿಕಗೊಳಿಸುವುದು ಹೇಗೆ ತಿಳಿಸಿ 

*ದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಅಭಿವೃದ್ಧಿಪಡಿಸುವಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ, ಈ ಪ್ರಕ್ರಿಯೆಯಲ್ಲಿ ರೈತ ಸಂಘಟನೆಗಳನ್ನು ಹೇಗೆ ಬಳಸಿಕೊಳ್ಳಬೇಕು, ಈ ಕೃಷಿಯ ಕುರಿತು ಸಾರ್ವಜನಿಕರಿಗೆ ತಿಳಿಸುವ ಮಾರ್ಗಗಳ ಕುರಿತೂ ಸಲಹೆ ನೀಡಿ

*ಕೃಷಿ ವಿಜ್ಞಾನ ಕೇಂದ್ರವನ್ನು ಜ್ಞಾನ ಕೇಂದ್ರವಾಗಿಸಬೇಕು. ಅಲ್ಲಿ ಹೆಚ್ಚು ಹೆಚ್ಚು ಅಧ್ಯಯನಗಳನ್ನು ನಡೆಸುವಂತಾಗಬೇಕು. ಜೊತೆಗೆ, ವಿಶ್ವವಿದ್ಯಾಲಯಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಪಠ್ಯದಲ್ಲಿ ಸೇರಿಸುವ ಕುರಿತು ಸಲಹೆ ನೀಡಿ

ಎಲ್ಲಾ ಪ್ರಶ್ನೆಗಳಿಗೂ ಸರ್ಕಾರದ್ದು ಒಂದೇ ಉತ್ತರ

*ರೈತ ಸಂಘಟನೆಯಾದ ಸಂಯುಕ್ತ ಕಿಸಾನ್‌ ಮೋರ್ಚಾ ಹಾಗೂ ಪಂಜಾಬ್‌ ಸರ್ಕಾರದ ಪ್ರತಿನಿಧಿಗಳನ್ನು ಸೇರಿಸಿಕೊಂಡು ಸಮಿತಿಯನ್ನು ರಚಿಸಿ, ರೈತರ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರವು ಕಾಲಮಿತಿಯನ್ನು ಹಾಕಿಕೊಂಡಿದೆಯೇ?

*ಬೆಂಬಲ ಬೆಲೆಯನ್ನು ನೀಡಲು ಕಾನೂನು ರೂಪಿಸುವಂತೆ ರೈತರು ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಲು ಕೇಂದ್ರ ಸರ್ಕಾರ ಆಸಕ್ತಿ ವಹಿಸಿದೆಯೇ. ಅದರ ಮಾಹಿತಿ ನೀಡಿ...

ಕೇಂದ್ರ ಸರ್ಕಾರವು ರಚಿಸಿದ್ದ ಸಮಿತಿಯಿಂದಾದ ಪ್ರಗತಿಯ ಬಗ್ಗೆ ಸಂಸದರು ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗಳಿವು. ಲೋಕಸಭೆಯಲ್ಲಿ ಕೃಷಿ ಸಚಿವಾಲಯಕ್ಕೆ ಇಂತಹ ಹತ್ತಾರು ಪ್ರಶ್ನೆಗಳನ್ನು ಈವರೆಗೆ ಕೇಳಲಾಗಿದೆ. ಆದರೆ, ಎಲ್ಲ ರೀತಿಯ ಪ್ರಶ್ನೆಗಳಿಗೂ ಕೃಷಿ ಸಚಿವಾಲಯವು ಒಂದೇ ವಾದಸರಣಿಯ ಉತ್ತರವನ್ನು ನೀಡಿದೆ. ಸಮಿತಿ ರಚಿಸಲಾಗಿದೆ. ಸಭೆಗಳು ನಿಯಮಿತವಾಗಿ ನಡೆಯುತ್ತಿವೆ. ಕೇಂದ್ರ ಸರ್ಕಾರವು ಯಾವ ಲೆಕ್ಕಾಚಾರದಲ್ಲಿ ಬೆಂಬಲ ಬೆಲೆ ನೀಡುತ್ತದೆ ಎಂದಿತ್ಯಾದಿ ಉತ್ತರವನ್ನೇ ನೀಡಿದೆ. ಈ ಉತ್ತರಗಳ ಜೊತೆಯಲ್ಲಿ ಸಮಿತಿ ರಚನೆ ಸಂಬಂಧ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ಸಚಿವಾಲಯ ಲಗತ್ತಿಸಿದೆ.

ಆಧಾರ: ಪಿಟಿಐ, ಲೋಕಸಭೆಗೆ ಕೃಷಿ ಸಚಿವಾಲಯ ನೀಡಿದ ಲಿಖಿತ ಉತ್ತರಗಳು, ಸಂಜಯ್‌ ಅಗರ್ವಾಲ್‌ ನೇತೃತ್ವದ ಸಮಿತಿ ರಚನೆಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಅಧಿಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT