ಜಾಗತಿಕ ಆರ್ಥಿಕ ಹಿಂಜರಿತ, ದೇಶದಲ್ಲಿನ ತೀವ್ರ ಹಣದುಬ್ಬರದ ಪರಿಣಾಮವಾಗಿ ಜನಸಾಮಾನ್ಯನ ಗಳಿಕೆ ಗಣನೀಯ ಪ್ರಮಾಣದಲ್ಲೇನೂ ಏರಿಕೆಯಾಗಿಲ್ಲ. ಆದರೆ ಆತನ ದೈನಂದಿನ ಜೀವನದ ವೆಚ್ಚ ಏರಿಕೆಯಾಗುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ನೀತಿ–ಕ್ರಮಗಳೇ ಇದಕ್ಕೆ ನೇರ ಕಾರಣ. ಎರಡೂ ಸರ್ಕಾರಗಳು ಭಾರಿ ಸುದ್ದಿಯಾಗುವಂತಹ ತೆರಿಗೆ ಹೆಚ್ಚಳ, ಬೆಲೆ ಹೆಚ್ಚಳವನ್ನು ಮಾಡಿಲ್ಲ. ಬದಲಿಗೆ ಸಣ್ಣ–ಸಣ್ಣ ಮಟ್ಟದಲ್ಲಿ ತೆರಿಗೆಗಳನ್ನು ಹೆಚ್ಚಿಸಿವೆ. ಕಚ್ಚಾ ವಸ್ತು ಮತ್ತು ಸಾಗಣೆಗೆ ಬಳಕೆಯಾಗುವ ಇಂಧನದ ಮೇಲೆ ಹೇರಿದ ತೆರಿಗೆ ಸರಪಳಿ ಕ್ರಿಯೆಯಂತೆ ದಿನಬಳಕೆ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದೆ.