ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ‘ಅತಿ ಅಪಾಯಕಾರಿ ಸ್ಥಿತಿಯಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯ’

Published 7 ಮೇ 2024, 0:30 IST
Last Updated 7 ಮೇ 2024, 0:30 IST
ಅಕ್ಷರ ಗಾತ್ರ

ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಸಂಸ್ಥೆಯು ಪ್ರಕಟಿಸಿರುವ 2024ನೇ ಸಾಲಿನ ‘ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ ಭಾರತವು 159ನೇ ರ‍್ಯಾಂಕ್‌ನಲ್ಲಿದೆ. ಈಚಿನ ವರ್ಷಗಳಲ್ಲಿ ಭಾರತದ ಸ್ಥಾನವು ಕುಸಿಯುತ್ತಲೇ ಸಾಗಿತ್ತು. 2023ರಲ್ಲಿ ಭಾರತವು ಈವರೆಗಿನ ಅತ್ಯಂತ ಕನಿಷ್ಠ–161ನೇ ರ‍್ಯಾಂಕ್‌ನಲ್ಲಿತ್ತು. 2024ರಲ್ಲಿ ಈ ಪರಿಸ್ಥಿತಿ ತುಸು ಸುಧಾರಿಸಿದ್ದು, 159ನೇ ರ‍್ಯಾಂಕ್‌ಗೆ ಏರಿದೆ. ಆದರೆ ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿಯೇ ಇದೆ ಎನ್ನುತ್ತದೆ ‘ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ’ ವರದಿ. ಈ ವಿಚಾರದಲ್ಲಿ ಭಾರತದ ಸ್ಥಾನವು ವರ್ಷಾನುವರ್ಷ ಕುಸಿಯುತ್ತಲೇ ಇರಲು ಕಾರಣವೇನು ಎಂಬುದನ್ನೂ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಹಲವು ದೇಶಗಳಲ್ಲಿ ನಿಯಂತ್ರಿತ ಮಾಧ್ಯಮ

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಪರಿಶೀಲನೆಗೆ ಒಳಪಡಿಸಿದ 180 ದೇಶಗಳ ಪೈಕಿ 135 ದೇಶಗಳಲ್ಲಿ ಮಾಧ್ಯಮಗಳನ್ನು ಸರ್ಕಾರಗಳು ಇಲ್ಲವೇ ಉದ್ಯಮ ಸಂಸ್ಥೆಗಳು ನಿಯಂತ್ರಿಸುತ್ತಿವೆ ಎಂದು ಈ ಸೂಚ್ಯಂಕ ವರದಿಯಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ 36 ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅಪಾಯಕಾರಿ ಮಟ್ಟದಲ್ಲಿದೆ ಮತ್ತು ಭಾರತವೂ ಅಂತಹ ದೇಶಗಳಲ್ಲಿ ಒಂದು. ನೆರೆಯ ಪಾಕಿಸ್ತಾನವೂ ಅದೇ ವರ್ಗದಲ್ಲಿರುವ ದೇಶವಾದರೂ, ಭಾರತಕ್ಕಿಂತ ಅಲ್ಲಿನ ಸ್ಥಿತಿ ತುಸು ಉತ್ತಮ ಎಂದು ವರದಿಯ ದತ್ತಾಂಶಗಳು ಹೇಳುತ್ತವೆ.

‘ಭಾರತವು ಪತ್ರಕರ್ತರಿಗೆ ಅಪಾಯಕಾರಿ ದೇಶ’

‘ವೃತ್ತಿಪರತೆಯ ಕಾರಣಕ್ಕಾಗಿಯೇ ಪ್ರತಿ ವರ್ಷವೂ ಅಂದಾಜು ಮೂರರಿಂದ ನಾಲ್ಕು ಪತ್ರಕರ್ತರನ್ನು ದೇಶದಲ್ಲಿ ಕೊಲೆ ಮಾಡಲಾಗುತ್ತಿದೆ. ಇದೇ ಕಾರಣಕ್ಕಾಗಿ ಪತ್ರಕರ್ತರಿಗೆ ವಿಶ್ವದಾದ್ಯಂತ ಅಪಾಯಕಾರಿಯಾಗಿರುವ ದೇಶಗಳ ಪೈಕಿ ಭಾರತವೂ ಒಂದು’ ಎನ್ನುತ್ತದೆ ವರದಿ.

‘ಸರ್ಕಾರದ ಕಟುಟೀಕೆ ನಡೆಸುವ ಪತ್ರಕರ್ತರನ್ನು ದಿನಂಪ್ರತಿ ಆನ್‌ಲೈನ್‌ನಲ್ಲಿ ಹಿಂಸಿಸಲಾಗುತ್ತದೆ, ಬೆದರಿಕೆ
ಒಡ್ಡಲಾಗುತ್ತದೆ. ದೈಹಿಕವಾಗಿ ದಾಳಿ ನಡೆಸುವ ಬೆದರಿಕೆಯನ್ನೂ ನೀಡಲಾಗುತ್ತದೆ. ಇಲ್ಲವೇ ಕ್ರಿಮಿನಲ್‌
ಪ್ರಕರಣಗಳನ್ನು ದಾಖಲಿಸಿ, ಸ್ವೇಚ್ಛೆಯಿಂದ ಬಂಧನವನ್ನೂ ಮಾಡಲಾಗುತ್ತದೆ. ಪೊಲೀಸರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಕೆಲವೊಮ್ಮೆ ಅಪರಾಧಿಗಳ ಗುಂಪುಗಳು ಹಾಗೂ ಸ್ಥಳೀಯವಾಗಿರುವ ಭ್ರಷ್ಟ ಅಧಿಕಾರಿಗಳಿಂದಲೂ ಪತ್ರಕರ್ತರಿಗೆ ಹಿಂಸೆ ನೀಡಲಾಗುತ್ತದೆ’ ಎಂದು ವರದಿ ವಿವರಿಸುತ್ತದೆ.

‘ಸರ್ಕಾರದ ವಿರುದ್ಧ ಸುದ್ದಿ ಬರೆಯುವ, ಟೀಕೆ ಮಾಡುವ ಪತ್ರಕರ್ತರಿಗೆ ‘ಉಗ್ರ’ ಮತ್ತು ‘ದೇಶದ್ರೋಹಿ’ ಎನ್ನುವ ಪಟ್ಟವನ್ನು ಹಿಂದುತ್ವವಾದಿಗಳು ಕಟ್ಟುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಪತ್ರಕರ್ತರ ಹತ್ಯೆಗೆ ಕರೆ ನೀಡುವಂಥ ಅಭಿಯಾನವನ್ನು ಮಾಡಲಾಗುತ್ತದೆ. ಈ ಅಭಿಯಾನವು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತದೆ. ಇದು ಭಯಹುಟ್ಟಿಸುವ ರೀತಿಯಲ್ಲಿದೆ. ಇಂಥ ಅಭಿಯಾನಕ್ಕೆ ಮಹಿಳಾ ಪತ್ರಕರ್ತರೂ ಗುರಿಯಾಗುತ್ತಾರೆ. ಇದಂತೂ ಇನ್ನೂ ಅಪಾಯಕಾರಿ. ಮಹಿಳಾ ಪತ್ರಕರ್ತರ ಖಾಸಗಿ ವಿವರಗಳನ್ನೂ ಬಹಿರಂಗಪಡಿಸಲಾಗುತ್ತದೆ. ಕಾಶ್ಮೀರದಲ್ಲಂತೂ ಪತ್ರಕರ್ತರ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ. ಪೊಲೀಸರು, ಅರೆಸೇನಾ ಪಡೆಗಳಿಂದ ಪತ್ರಕರ್ತರು ಹಿಂಸೆಗೆ ಒಳಗಾಗುತ್ತಾರೆ. ಪತ್ರಕರ್ತರನ್ನು ವಶಕ್ಕೆ ಪಡೆದು, ವಿಚಾರಣೆಯನ್ನೇ ನಡೆಸದೆ ಜೈಲಿನಲ್ಲಿ ವರ್ಷಗಟ್ಟಲೆ ಇಟ್ಟುಕೊಳ್ಳಲಾಗುತ್ತದೆ’ ಎಂಬುದನ್ನು ವರದಿಯಲ್ಲಿ ಒತ್ತಿ ಹೇಳಲಾಗಿದೆ.

ಸುದ್ದಿಮನೆ...

‘ಭಾರತವು ವೈವಿಧ್ಯಮಯ ದೇಶ. ಆದರೆ, ಈ ವೈವಿಧ್ಯವು ದೇಶದ ಮಾಧ್ಯಮಗಳಲ್ಲಿ ಪ್ರತಿಫಲನವಾಗುವುದಿಲ್ಲ. ಈ ಮಾತು ಸುದ್ದಿ ಪ್ರಸಾರಕ್ಕೂ ಮತ್ತು ಮಾಧ್ಯಮ ಸಂಸ್ಥೆಗಳ ವ್ಯವಸ್ಥಾಪನಾ ಸ್ಥಾನಮಾನ ಗಳಿಗೂ ಅನ್ವಯವಾಗುತ್ತದೆ. ಮಾಧ್ಯಮ ಗಳಲ್ಲಿ ದೇಶದ ಹಿಂದೂ ಧರ್ಮದ ಪ್ರಭಾವಿ ಜಾತಿಗಳ ಪುರುಷರದ್ದೇ ಪಾರುಪತ್ಯವಿದೆ. ಇದು ಆ ಸಂಸ್ಥೆಯ ಸುದ್ದಿಯ ದೃಷ್ಟಿಕೋನಗಳು ಹಾಗೂ ವರದಿಗಳು, ಲೇಖನಗಳ ವಿಷಯಗಳ ಆಯ್ಕೆಯಲ್ಲಿ ಪ್ರಭಾವ ಬೀರುತ್ತವೆ’ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಜಾಹೀರಾತಿನ ಮೂಗುದಾರ

‘ಭಾರತೀಯ ಮಾಧ್ಯಮಗಳ ಆದಾಯದ ಪ್ರಧಾನ ಮೂಲ ಜಾಹೀರಾತು. ಇವುಗಳಲ್ಲಿ ಸರ್ಕಾರಿ ಜಾಹೀರಾತುಗಳ ಪ್ರಮಾಣವೇ ಅಧಿಕ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಂತೂ ಇಂಥ ಜಾಹೀರಾತುಗಳಿಗಾಗಿಯೇ ಜನರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಗಳನ್ನು ವಿನಿಯೋಗಿಸಲಾಗುತ್ತಿದೆ. ಸಣ್ಣ ಪತ್ರಿಕೆಗಳಂತೂ ಹೆಚ್ಚಿನ ಆದಾಯವನ್ನು ಸರ್ಕಾರಿ ಜಾಹೀರಾತುಗಳಿಂದಲೇ ಪಡೆಯುತ್ತವೆ. ಆದರೆ ಸರ್ಕಾರವು ಈ ಜಾಹೀರಾತುಗಳ ಮೂಲಕವೇ ಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮಗೆ ಸಂಬಂಧಿಸಿದ ಸುದ್ದಿಗಳ ಮೇಲೆ ನಿಯಂತ್ರಣ ಹೊಂದಿವೆ. ತಮಗೆ ಅನುಕೂಲಕರ ವಲ್ಲದ ಸುದ್ದಿಗಳ ಪ್ರಸಾರಕ್ಕಾಗಿ ಸರ್ಕಾರಗಳು ತಮ್ಮ ಜಾಹೀರಾತುಗಳನ್ನೂ ನಿಲ್ಲಿಸಬಹುದು. ಈ ಮೂಲಕ ಸುದ್ದಿ ಸಂಸ್ಥೆಗಳ ಮೇಲೆ ಸರ್ಕಾರವು ಹಿಡಿತ ಸಾಧಿಸಿದೆ. ಇದು ಒಂದು ಸ್ಥಿತಿ. ಮತ್ತೊಂದೆಡೆ, ಕೇಂದ್ರ ಸರ್ಕಾರವು, ಸರ್ಕಾರಿ ಹಾಗೂ ಖಾಸಗಿ ಸುದ್ದಿ ಸಂಸ್ಥೆಗಳ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಕೆಲವೇ ಉದ್ಯಮಿಗಳ ಕೈಯಲ್ಲಿ ಭಾರತೀಯ ಮಾಧ್ಯಮದ ಮಾಲೀಕತ್ವವಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಅಂತ್ಯಕಂಡ ಬಹುತ್ವ ತತ್ವದ ಪತ್ರಿಕೋದ್ಯಮ’

‘ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಏರಿದಾಗಿನಿಂದಲೂ ಭಾರತೀಯ ಮಾಧ್ಯಮವು ‘ಅಘೋಷಿತ ತುರ್ತು ಪರಿಸ್ಥಿತಿ’ಯ ಮಟ್ಟವನ್ನು ತಲುಪಿದೆ. ದೇಶದ ಮಾಧ್ಯಮದ ಹೆಚ್ಚಿನ ಸಂಸ್ಥೆಗಳನ್ನು ನಡೆಸುವ ಉದ್ಯಮಿಗಳು ಹಾಗೂ ಬಿಜೆಪಿಯ ಮಧ್ಯೆಯ ಉತ್ತಮ ಸಂಬಂಧವು ಕಳೆದ 10 ವರ್ಷದಿಂದ ಈಚೆಗೆ ಗಟ್ಟಿಯಾಗುತ್ತಲೇ ಸಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ರಿಲಯನ್ಸ್‌ ಇಂಡಸ್ಟ್ರೀಸ್‌ ಗ್ರೂಪ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಪ್ರಧಾನಿ ಮೋದಿ ಅವರ ಖಾಸಾ ಸ್ನೇಹಿತರು. ಅಂಬಾನಿ ಅವರು ಸುಮಾರು 70ಕ್ಕೂ ಅಧಿಕ ಮಾಧ್ಯಮ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಈ ಮಾಧ್ಯಮ ಸಂಸ್ಥೆಗಳ ಸುದ್ದಿಗಳು ಸುಮಾರು 80 ಕೋಟಿ ಜನರನ್ನು ತಲುಪುತ್ತವೆ. ಭಾರತದ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಎನ್‌ಡಿಟಿವಿಯು ಬಹುತ್ವ ತತ್ವವನ್ನು ಅನುಸರಿಸಿಕೊಂಡು ಪತ್ರಿಕೋದ್ಯಮವನ್ನು ನಡೆಸುತ್ತಿತ್ತು. ಆದರೆ, 2022ರ ಅಂತ್ಯದ ಹೊತ್ತಿಗೆ ಪ್ರಧಾನಿ ಮೋದಿ ಅವರ ಮತ್ತೊಬ್ಬ ಖಾಸಾ ಸ್ನೇಹಿತರಾದ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ ಅವರು ಎನ್‌ಡಿಟಿವಿಯನ್ನು ಸ್ವಾಧೀನಪಡಿಸಿಕೊಂಡರು. ಅಲ್ಲಿಗೆ ಬಹುತ್ವ ತತ್ವದಡಿ ಕೆಲಸ ಮಾಡುತ್ತಿದ್ದ ಪತ್ರಿಕೋದ್ಯಮವು ಅಂತ್ಯಕಂಡಿತು’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಇತ್ತೀಚಿನ ವರ್ಷಗಳಲ್ಲಿ ‘ಗೋದಿ ಮೀಡಿಯಾ’ (ರಾಜಕಾರಣಿಯ (ನಿರ್ದಿಷ್ಟವಾಗಿ ಮೋದಿ ಅವರ) ತೊಡೆಯ ಮೇಲೆ ಕೂರುವ ನಾಯಿಯಂತೆ ಇರುವ ಮಾಧ್ಯಮಗಳು) ಸಂಖ್ಯೆಯು ಏರಿಕೆಯಾಯಿತು. ಇವುಗಳು ಬಿಜೆಪಿ ಪರವಾಗಿ ಪ್ರಚಾರವನ್ನು ಮಾಡಿದವು. ಒತ್ತಡ ಹೇರುವುದು ಹಾಗೂ ಪ್ರಭಾವ ಬೀರುವ ಮುಖಾಂತರವಾಗಿ ಭಾರತದಲ್ಲಿದ್ದ ಬಹುತ್ವ ತತ್ವದ ಪತ್ರಿಕೋದ್ಯಮವನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರದ ಕುರಿತು ಕಟುವಾಗಿ, ನೇರವಾಗಿ ಟೀಕೆ–ಟಿಪ್ಪಣಿಗಳನ್ನು ಮಾಡುವ ಪತ್ರಕರ್ತರನ್ನು ಬಿಜೆಪಿ ಬೆಂಬಲಿತರು ಟ್ರೋಲ್‌ಗೆ ಗುರಿಪಡಿಸುತ್ತಾರೆ’ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT