ಅಂತರ್ಜಲ ಬಳಕೆ ಮತ್ತು ನಿರ್ವಹಣೆ ಸಂಬಂಧದ ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊಳವೆ ಬಾವಿಗಳ ನೀರಿಗೆ ಡಿಜಿಟಲ್ ಟೆಲಿಮಿಟ್ರಿ ಅಳವಡಿಕೆ, ವಾಣಿಜ್ಯ, ಕೈಗಾರಿಕೆ, ಗಣಿಗಾರಿಕೆ, ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಕೊಳವೆಬಾವಿ ನೀರಿಗೆ ಮತ್ತು ಟ್ಯಾಂಕರ್ಗಳಿಗೆ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ. ಅಂತರ್ಜಲದ ಅತಿಬಳಕೆಯನ್ನು ತಡೆಗಟ್ಟಲು ತರಲಾಗುತ್ತಿರುವ ಈ ನಿಯಮಗಳಲ್ಲಿ ಕೆಲವು ಸ್ವಾಗತಾರ್ಹವೂ ಆಗಿವೆ. ಆದರೆ, ಕೇಂದ್ರ ಅಂತರ್ಜಲ ಪ್ರಾಧಿಕಾರದ ಕೆಲವು ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ಮುಂದಾಗಿದೆ. ಇದರಿಂದ ಅಂತರ್ಜಲವು ಗಂಭೀರ ಸ್ಥಿತಿಯಲ್ಲಿರುವ ತಾಲ್ಲೂಕುಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಂಭವ ಇದೆ. ಜತೆಗೆ, ನಿಯಮ ಜಾರಿಯ ಹೊಣೆ ಹೊತ್ತವರ ಭ್ರಷ್ಟಾಚಾರವೂ ಸೇರಿದರೆ, ಅಂತರ್ಜಲ ಅಪಾಯಕಾರಿ ಮಟ್ಟಕ್ಕೆ ಕುಸಿಯಬಹುದು ಎನ್ನುವ ಆತಂಕ ವ್ಯಕ್ತವಾಗಿದೆ