ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಒಳಮೀಸಲಾತಿ ವಿಭಜನೆಯಲ್ಲಅತಿ ಹಿಂದುಳಿದವರ ಪ್ರಾತಿನಿಧ್ಯ

ಮೀಸಲಾತಿ ಚರ್ಚೆ
Last Updated 7 ಡಿಸೆಂಬರ್ 2022, 19:29 IST
ಅಕ್ಷರ ಗಾತ್ರ

ಕೆಲವರು ಉನ್ನತ ಶಿಕ್ಷಣ ಪಡೆದಿದ್ದರೂ, ಈ ವರ್ಗದ ಸಮುದಾಯಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಬಲ ಸಮುದಾಯಗಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ವರ್ಗದ ಅನೇಕ ಸಣ್ಣ ಜಾತಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ

ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜ್ಯ ಸಂಸ್ಥಾನ ಆಡಳಿತದಲ್ಲಿ ಬ್ರಾಹ್ಮಣೇತರರಿಗೆ ಶೇಕಡ 75ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ಆದರೆ ಯಾವ ಯಾವ ಜಾತಿಗಳಿಗೆ ಎಷ್ಟು ಎಂಬವರ್ಗೀಕರಣ ಇರಲಿಲ್ಲ. ಸ್ವಾತಂತ್ರ್ಯಾ ನಂತರ 1947ರಿಂದ 1950ರ ಮಧ್ಯದ ಅವಧಿಯಲ್ಲಿ ಕೇಂದ್ರ ಸರ್ಕಾರವು ಎರಡು ಅಧಿಸೂಚನೆಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು ಶೇ 17.5ರಷ್ಟು ಮೀಸಲಾತಿಯನ್ನು ನೀಡಿತು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಮರು ವಿಂಗಡಣೆಯ ನಂತರ ಪರಿಶಿಷ್ಟ ಜಾತಿಗಳಿಗೆ ಶೇ 15ರಷ್ಟು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ 3ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ನೀಡಲಾಯಿತು. ನಂತರದಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇ 17 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ 7 ರಷ್ಟು ಮೀಸಲಾತಿ ನೀಡಲಾಯಿತು.

ಹಿಂದುಳಿದ ವರ್ಗಗಳಿಗೆ 1958ರಿಂದ ರಾಜ್ಯದಲ್ಲಿ ಮೀಸಲಾತಿಯನ್ನು ನೀಡಲಾಯಿತು. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿಪ್ರವರ್ಗ-1ಕ್ಕೆ ಶೇ 2, ಪ್ರವರ್ಗ-2ಎಗೆ ಶೇ 15, ಪ್ರವರ್ಗ-2ಬಿಗೆ ಶೇ 5, ಪ್ರವರ್ಗ-3ಎಗೆ ಶೇ 4 ಮತ್ತು ಪ್ರವರ್ಗ-3ಬಿಗೆ ಶೇ 5 ಎಂಬುದಾಗಿ ಮೀಸಲಾತಿ ನೀಡಲಾಗಿದೆ. ಹೀಗೆ ಕಾಲಕಾಲಕ್ಕೆ ರಾಜ್ಯದಲ್ಲಿ ಒಂದು ರೀತಿಯ ಒಳ ಮೀಸಲಾತಿಯನ್ನು ನೀಡುತ್ತಲೇ ಬರಲಾಗಿದೆ. ಇತ್ತೀಚೆಗೆ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೂ (ಇಡಬ್ಲ್ಯುಎಸ್‌)ಶೇ 10ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗಿದೆ.

ಹೀಗೆ ಮೀಸಲಾತಿ 75 ವರ್ಷಗಳಿಂದ ಹಂತ ಹಂತವಾಗಿ ವಿಸ್ತಾರವಾಗುತ್ತಾ, ಜಾರಿಯಲ್ಲಿದೆ. ಸಂವಿಧಾನದ ವಿಧಿ 16ರಲ್ಲಿ ‘ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡದ ಜನರಿಗೆರಾಜ್ಯದ ಸೇವೆಗಳಲ್ಲಿ ಮೀಸಲಾತಿಯನ್ನು ಒದಗಿಸುವುದು’ ಎಂದು ಹೇಳಲಾಗಿದೆ. ಇದೇ ರೀತಿಯಲ್ಲಿ 46ನೇ ವಿಧಿ, 243ನೇ ವಿಧಿ, 330ನೇ ವಿಧಿ, 332ನೇ ವಿಧಿಯಲ್ಲಿ ಪ್ರಸ್ತಾಪಿಸಿದಂತೆ, ಈ ವಿಧಿಗಳ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಾಗೂ ರಾಜಕೀಯ ಮೀಸಲಾತಿಯನ್ನು ನೀಡಲಾಗಿದೆ. ಈ ಎಲ್ಲ ವಿಧಿಗಳ ಪ್ರಕಾರ ಯಾರಿಗೂ ಯಾವುದೇ ರೀತಿಯ ತಾರತಮ್ಯ ತೋರುವಂತಿಲ್ಲ ಎಂದು ನಿದೇರ್ಶಿಸಿದೆ.

ಹೀಗೆ ಸಂವಿಧಾನಬದ್ಧವಾಗಿರುವ ಮೀಸಲಾತಿಯು 75 ವರ್ಷಗಳಿಂದ ಜಾರಿಯಲ್ಲಿದೆ. ಆದರೂ ಮೀಸಲಾತಿಯ ಸವಲತ್ತು ಪರಿಶಿಷ್ಟ ಜಾತಿಗಳಲ್ಲಿನ ಎಲ್ಲಾ 101 ಜಾತಿ ಸಮುದಾಯಗಳು ಮತ್ತು ಪರಿಶಿಷ್ಟ ಪಂಗಡದ ಎಲ್ಲಾ 52 ಜಾತಿ ಸಮುದಾಯಗಳು ಸೇರಿ ಎಲ್ಲಾ ಜನವರ್ಗಗಳಿಗೆ ತಲುಪಲೇ ಇಲ್ಲ. ಪರಿಶಿಷ್ಟ ಜಾತಿಯ ಒಂದೆರಡು ಬಲಾಢ್ಯ ಜಾತಿ ಮತ್ತುಪರಿಶಿಷ್ಟ ಪಂಗಡದ ಒಂದೆರಡು ಜಾತಿಗಳು ಮಾತ್ರ ಮೀಸಲಾತಿಯಿಂದ ದೊರಕುವ ಶಿಕ್ಷಣ, ಉದ್ಯೋಗ, ಆರ್ಥಿಕ ಮತ್ತುರಾಜಕೀಯ ಅವಕಾಶವನ್ನು ಪಡೆಯುತ್ತಿವೆ. ಆದ್ದರಿಂದ, ‘ನಮ್ಮ ಪಾಲನ್ನು ನಮಗೆ ನೀಡಿ’ ಎಂಬ ಕೂಗು ಈ ವರ್ಗದ ತಳ ಸಮುದಾಯಗಳಿಂದ ದಿನೇ ದಿನೇ ಕೇಳಿ ಬರುತ್ತಿದೆ. ಇತರೆ ಹಿಂದುಳಿದ ವರ್ಗಗಳಲ್ಲೂ ಈ ಕೂಗು ಇದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳ ಶೇ 65ರಷ್ಟು ಜನರಿಗೆ ವಾಸಿಸಲು ಯೋಗ್ಯವಾದ ವಸತಿ ಸೌಲಭ್ಯಗಳಿಲ್ಲ. ಈ ಜನರು ಇಂದಿಗೂ ಗುಡಿಸಲುಗಳಲ್ಲಿ ಜೀವಿಸುತ್ತಿರುವುದು ವಾಸ್ತವ. ಈ ಸಮುದಾಯಗಳಲ್ಲಿ ಶೇಕಡ 80ರಷ್ಟು ಜನರಿಗೆ ಯಾವುದೇ ರೀತಿಯಾದ ಭೂಮಿಯ ಒಡೆತನವಿಲ್ಲ. ಇವರೆಲ್ಲರೂ ಬಹುತೇಕ ಕೂಲಿ ಕಾರ್ಮಿಕರಾಗಿದ್ದಾರೆ. ಈ ಸಮುದಾಯಗಳಲ್ಲಿ ಶಿಕ್ಷಣ ಪಡೆದಿರುವವರ ಪ್ರಮಾಣ ಅತಿ ಕಡಿಮೆ ಇದೆ. ಉದಾ; ಪರಿಶಿಷ್ಟ ಜಾತಿಯ ದಕ್ಕಲಿಗ, ಸಿಂಧೋಳ್, ಗೋಸಂಗಿ, ಕೊರಚ ಹಾಗೂ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಜೇನು ಕುರುಬ, ಮಲೆಕುಡಿಯ, ಯರವ, ಹಸಲರು ಮುಂತಾದ ಹಲವು ಜಾತಿಗಳ ಸಮುದಾಯಗಳಿಗೆ ಯಾವುದೇ ರೀತಿಯ ಮೀಸಲಾತಿಯ ಸೌಲಭ್ಯಗಳನ್ನು ದಕ್ಕಿಸಿಕೊಳ್ಳವ ಸಾಮರ್ಥ್ಯವಿಲ್ಲ.

ಇದೇ ರೀತಿಯಲ್ಲಿ ದೇವದಾಸಿಯರು, ಸಫಾಯಿ ಕರ್ಮಚಾರಿಗಳು ಮತ್ತು ಕೊಳಚೆ ಪ್ರದೇಶ ನಿವಾಸಿಗಳು ಸಹ ಮೀಸಲಾತಿ ಸವಲತ್ತುಗಳನ್ನು ಪಡೆಯಲಾಗುತ್ತಿಲ್ಲ. ಇವರ ಮಕ್ಕಳ ಶೈಕ್ಷಣಿಕ ಮಟ್ಟ ಬಹಳ ಕಡಿಮೆ ಇದೆ. ತತ್ಪರಿಣಾಮವಾಗಿ ಉನ್ನತ ಶಿಕ್ಷಣವಿಲ್ಲ ಮತ್ತು ಸರ್ಕಾರಿ ಉದ್ಯೋಗವಿಲ್ಲ. ಅಪ್ಪಿ ತಪ್ಪಿ ಕೆಲವರು ಉನ್ನತ ಶಿಕ್ಷಣ ಪಡೆದಿದ್ದರೂ, ಈ ವರ್ಗದ ಸಮುದಾಯಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಬಲ ಸಮುದಾಯಗಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ವರ್ಗದ ಅನೇಕ ಸಣ್ಣ ಜಾತಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ.

ಕಳೆದ 75 ವರ್ಷಗಳಿಂದ ಮೀಸಲಾತಿ ಜಾರಿಯಲ್ಲಿ ಇದ್ದರೂ ಸಹ ಈ ಸವಲತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿಗಳಿಗೆ, ಅರೆ ಅಲೆಮಾರಿಗಳಿಗೆ, ಆದಿವಾಸಿಗಳಿಗೆ, ದೇವದಾಸಿಯರಿಗೆ, ಕೊಳಚೆ ನಿವಾಸಿಗಳಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ ಹಾಗೂ ಅನೇಕ ಸಣ್ಣ ಸಣ್ಣ ಹಿಂದುಳಿದ ಜಾತಿಗಳಿಗೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಾಗಲೀ, ಕಲ್ಯಾಣ ಕಾರ್ಯಕ್ರಮಗಳಾಗಲೀ, ಮೀಸಲಾತಿಯ ಸೌಲಭ್ಯಗಳಾಗಲೀ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ. ಇಂದಿಗೂ ಅನೇಕರು ಭಿಕ್ಷಾಟನೆ ಮೂಲಕ ಬದುಕನ್ನು ಸಾಗಿಸುತ್ತಿರುವ ದುಸ್ಥಿತಿಯೂ ಇದೆ. ಉದಾಃ ನಗರ ಪ್ರದೇಶಗಳಲ್ಲಿನ ಸಿಗ್ನಲ್‌ಗಳಲ್ಲಿ ವೇಷಧಾರಿಗಳಾಗಿ ಬಿಕ್ಷಾಟನೆಯಲ್ಲಿರುವುದನ್ನು ಕಾಣುತ್ತೇವೆ.

ಹೀಗೆ ಇನ್ನೂ ಸಹಸ್ರಾರು ಜನರು ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ಮೀಸಲಾತಿ ನೀತಿಯಿಂದ ತಮಗೆ ನಿರಂತರವಾದ ಬಡತನವನ್ನು ಬಿಟ್ಟು ಬೇರೇನೂ ಸಿಕ್ಕುವುದಿಲ್ಲ ಎಂಬ ಆತಂಕ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯು ಸಂವಿಧಾನದ ಮೂಲ ಆಶಯಗಳಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾದದ್ದು. ಇದರಿಂದ ಈ ಜಾತಿಗಳಲ್ಲಿ ಆಂತರಿಕ ಘರ್ಷಣೆಗೆ ಕಾರಣವಾಗಬಹುದು. ಇವರಲ್ಲಿ ಹುಟ್ಟಿಕೊಂಡಿರುವ ಅಸಮಾಧಾನದತ್ತ ಗಮನಹರಿಸದಿದ್ದರೆ ಇವರ ಒಗ್ಗಟ್ಟಿಗೆ ಧಕ್ಕೆಯಾಗುವುದರಲ್ಲಿ ಸಂದೇಹವಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ವರ್ಗದ ಉತ್ತಮ ಸ್ಥಿತಿಯಲ್ಲಿ ಇರುವವರು, ತಮಗಿಂತ ಹೆಚ್ಚು ವಂಚಿತರಾದವರ ಬೇಡಿಕೆಯು ನ್ಯಾಯಯುತವಾದುದೆಂದು ಒಪ್ಪಿಕೊಂಡು ಒಳ ಮೀಸಲಾತಿಗೆ ಸಮ್ಮತಿಯನ್ನು ನೀಡುವ ಮುಖಾಂತರ ಶೋಷಿತ ಸಮುದಾಯಗಳ ಒಗ್ಗಟ್ಟನ್ನು ರಕ್ಷಿಸಬೇಕು.

2012ರಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. 10 ವರ್ಷ ಕಳೆದರೂ ಅಧಿಕಾರಕ್ಕೆ ಬಂದು ಹೋಗುವ ಯಾವ ಸರ್ಕಾರಗಳೂ ಪರಿಶೀಲನೆ ಮಾಡುತ್ತಿಲ್ಲ. ವರದಿ ಕೇವಲ ಪರಿಶಿಷ್ಟ ಜಾತಿಗೆ ಸಂಬಂಧಿಸಿದ್ದಾಗಿದೆ. ಅಲ್ಲದೆ ಹಲವಾರು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ ಎಂಬ ಅಭಿಪ್ರಾಯವೂ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಆ ವರಿದಿಯನ್ನು ಪರಿಶೀಲಿಸಿ ತಕ್ಷಣವೇ ಆಳುವ ಸರ್ಕಾರಗಳು ಅಗತ್ಯ ಬಿದ್ದರೆ ನೂತನ ಆಯೋಗವನ್ನು ರಚಿಸಿ ವೈಜ್ಞಾನಿಕವಾಗಿ ಅಧ್ಯಯನ ನಡೆಸುವಂತಾಗಬೇಕು. ಈ ಮುಖಾಂತರವೂ ಕೂಡಾ ಮೀಸಲಾತಿಯ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂತಹ ರೀತಿಯಲ್ಲಿ ಪುನರ್ ರೂಪಿಸುವ ಅಗತ್ಯವಿದೆ.

ಈ ಎಲ್ಲ ಕಾರಣಗಳಿಂದ ‘ಮೀಸಲಾತಿಯೊಳಗೆ ಮೀಸಲಾತಿ’ ಅಥವಾ ‘ಒಳ ಮೀಸಲಾತಿ’ಯ ಅಗತ್ಯವಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆಲ ಬಲಾಢ್ಯ ಜಾತಿ ರಾಜಕೀಯ ನಾಯಕರು ಸೇರಿದಂತೆ ಅವರ ಬೆಂಬಲಿಗರಾಗಿರುವ ತಾತ್ವಿಕವಾಗಿ ಸ್ಪಷ್ಟತೆ ಇಲ್ಲದ ಕೆಲವರು, ಸ್ವಹಿತ
ಶಕ್ತಿಗಳಾದ ಕೆಲ ಪ್ರಗತಿಪರರೆನ್ನಿಸಿಕೊಂಡವರು ಒಳಮೀಸಲಾತಿಯನ್ನ ವಿರೋಧಿಸುತ್ತಿದ್ದಾರೆ. ಒಳಮೀಸಲಾತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಭಜನೆಯಲ್ಲ. ದಲಿತ ಸಮುದಾಯಗಳ ಒಗ್ಗಟ್ಟನ್ನು ಇದು ಹಾಳು ಮಾಡುತ್ತದೆ ಎಂಬುದು ಒಂದು ತಪ್ಪು ಕಲ್ಪನೆ. ಇದು ಮೀಸಲಾತಿ ವಿರೋಧಿಗಳು ಹುಟ್ಟು ಹಾಕಿರುವ ಒಂದು ವಿಕೃತಿ.ಇದರ ಬಗ್ಗೆ ಪ್ರಜ್ಞಾವಂತ ಸಮಾಜ ಗಂಭೀರವಾಗಿ ಚಿಂತಿಸಬೇಕಾಗಿದೆ.

ಈವರೆಗೂ ಮೀಸಲಾತಿಯಿಂದ ವಂಚಿತರಾದವರಿಗೆಇನ್ನಾದರೂ ಅದರ ಫಲವನ್ನು ತಲುಪಿಸುವುದಕ್ಕೆಮೊದಲನೇ ಆದ್ಯತೆ ಸಿಗಬೇಕಾಗಿದೆ. ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿಯನ್ನು ತೋರಿ ಈ ದೌರ್ಭಾಗ್ಯರಿಗೆ ಮೀಸಲಾತಿ ಸವಲತ್ತನ್ನು ತಲುಪಿಸುವ ಕಾನೂನುಗಳನ್ನು, ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ. ಈ ಬಗ್ಗೆ ಜನಪರ ಚಳವಳಿಗಳು ಜನಾಂದೋಲನವನ್ನು ರೂಪಿಸುವ ಮುಖಾಂತರ ‘ಮೀಸಲಾತಿಯೊಳಗಿನ ಒಳ ಮೀಸಲಾತಿ’ ವಿಭಜನೆಯಲ್ಲ, ಅಗೋಚರವಾಗಿಯೇ ಅತಿ ಹಿಂದುಳಿದವರಿಗೆ ಪ್ರಾತಿನಿಧ್ಯ ನೀಡುವ ಮಾರ್ಗ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ.

–ಲೇಖಕ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಹ ಸಂಚಾಲಕ

––––

‘ಪ್ರಬಲ ಜಾತಿಗಳ ಲಾಬಿ ಅಡ್ಡಿ’

ಒಳಮೀಸಲಾತಿ ಎಂಬುದು ಯಾರದೋ ಅವಕಾಶಗಳನ್ನು ಕಬಳಿಸುವ ಅಥವಾ ಮತ್ಯಾವುದೋ ಸಮುದಾಯದ ಏಳಿಗೆಗೆ ಕುಂದು ತರುವ ಕ್ರಮವಲ್ಲ. ಅಸಲಿಗೆ ಭಾರತದ ಮೀಸಲಾತಿ ಎಂಬುದು ಜಾತಿ ಜನಸಂಖ್ಯೆಗನುಸಾರವಾಗಿ ಯಾವತ್ತೋ ಹಂಚಿಕೆಯಾಗಬೇಕಿತ್ತು. ಅಸ್ಪೃಶ್ಯತೆಯ ನೋವುಣ್ಣದ ಸಮುದಾಯಗಳೂ ಪರಿಶಿಷ್ಟರ ಮೀಸಲು ಪಟ್ಟಿಯಲ್ಲಿ ನುಸುಳಿರುವುದು ಚಾರಿತ್ರಿಕ ದೋಷ. ಈ ದೋಷವನ್ನು ಪರಿಹರಿಸಲು ಇರುವ ಸರಿಯಾದ ಕ್ರಮವನ್ನು ನ್ಯಾ. ಸದಾಶಿವ ಆಯೋಗದ ವರದಿಯು ತಿಳಿಸುತ್ತದೆ.

ಇದನ್ನು ಜಾರಿಗೊಳಿಸಲು ಆಡಳಿತಕ್ಕೆ ಬರುತ್ತಿರುವ ಎಲ್ಲಾ ಪಕ್ಷಗಳೂ ಹೆದರುತ್ತಿರುವುದರ ಕಾರಣ ಪ್ರಬಲ ಜಾತಿಗಳ ಲಾಬಿ ಅಲ್ಲದೆ ಮತ್ತೇನೂ ಅಲ್ಲ. ಈ ಲಾಬಿ ಬಾಬಾಸಾಹೇಬರು ಪ್ರತ್ಯೇಕ ಚುನಾಯಕ ಅಧಿಕಾರ ಕೇಳಿದ್ದಾಗಲೂ ಹುನ್ನಾರ ನಡೆಸಿತ್ತು; ಈಗಲೂ ನಡೆಸುತ್ತಿದೆ. ಆಂಧ್ರಪ್ರದೇಶದಲ್ಲಿ ಈ ಒಳಮೀಸಲಾತಿ ಜಾರಿಗೊಳಿಸಲು ವಿಫಲವಾದದ್ದನ್ನೇ ಮುಂದಿಟ್ಟುಕೊಂಡು, ಅದರ ಜಾರಿಗೆ ವಿರುದ್ಧವಾದ ವಾದವನ್ನು ಮುನ್ನೆಲೆಗೆ ತರಲಾಗುತ್ತಿದೆ. ಆದರೆ, ತಮಿಳುನಾಡಿನ ಅರುಂಧತಿಯರ್ ಸಮುದಾಯಕ್ಕೆ ನೀಡಲಾದ ಪ್ರತ್ಯೇಕ ಮೀಸಲಾತಿ ಕುರಿತು ಮಾತನಾಡದೆ, ಜಾಣಕಿವುಡು ತೋರಿಸುತ್ತಿರುವುದು ದುರಂತ.

ಕೊರಮ, ಕೊರಚ, ಭೋವಿ, ಲಂಬಾಣಿಗರು ಕರ್ನಾಟಕ ಹೊರತುಪಡಿಸಿ ಭಾರತದ ಯಾವ ರಾಜ್ಯದಲ್ಲೂ ಎಸ್‌ಸಿ ಪಟ್ಟಿಯಲ್ಲಿ ಇಲ್ಲ. ಈ ಅನ್ಯಾಯವನ್ನು ಸದಾಶಿವ ಆಯೋಗ ಸ್ಪಷ್ಟವಾಗಿ ಗುರುತಿಸಿದೆ. ದೇವರಾಜ ಅರಸು ಈ ಸಮುದಾಯಗಳನ್ನು ಎಸ್‌ಸಿ ಪಟ್ಟಿಗೆ ಸೇರಿಸುವ ಮೂಲಕ ಮೂಲ ಅಸ್ಪೃಶ್ಯರ ಮೀಸಲಾತಿ ಅಥವಾ ಪ್ರಾತಿನಿಧ್ಯದ ಉದ್ದೇಶವನ್ನೇ ಬುಡಮೇಲು ಮಾಡಿದರು. ಅಸ್ಪೃಶ್ಯರಲ್ಲದ ಕೊರಮ, ಕೊರಚ, ಭೋವಿ, ಲಂಬಾಣಿಗರು ರಾಜಕೀಯವಾಗಿ ಅಸ್ಪೃಶ್ಯರ ಪಾಲನ್ನು ಕಬಳಿಸಲು ಈ ಜಾತಿವಾದಿ ಸಮಾಜವೂ ಕೈಜೋಡಿಸಿತು.

ಯಾವುದೇ ಚಳವಳಿ, ಬೀದಿ ಹೋರಾಟ ಮಾಡದ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ಸೌಲಭ್ಯ ಸುಲಭವಾಗಿ ಸಿಗುತ್ತದೆಂದರೆ ಕರ್ನಾಟಕದ ಜನಸಂಖ್ಯೆಯಲ್ಲಿಯೇ ದೊಡ್ಡದಾಗಿರುವ ಸಮುದಾಯಗಳಿಗೆ, ಜಾತಿ ಜನಸಂಖ್ಯೆಯ ಪದ್ಧತಿಯಲ್ಲಿ ಒಳಮೀಸಲಾತಿ ಜಾರಿಯಾಗದಿರುವುದರ ಹಿಂದಿರು
ವುದು ಅನ್ಯಾಯದ ಪರಮಾವಧಿ ಎಂದೇ ಬಗೆಯಬೇಕಾಗುತ್ತದೆ.

–ವಿ.ಆರ್.ಕಾರ್ಪೆಂಟರ್, ಸಾಹಿತಿ

‘ಒಳಮೀಸಲಾತಿ ಅನಿವಾರ್ಯ’

ಸಾಮಾಜಿಕ ಜಾತಿ ವ್ಯವಸ್ಥೆಯ ಶ್ರೇಣಿಯಲ್ಲಿ ತಳಸಮುದಾಯದ ಪ್ರಾತಿನಿಧ್ಯಕ್ಕಾಗಿ ಸಂವಿಧಾನಾತ್ಮಕವಾಗಿ ಸಿಕ್ಕ ಅವಕಾಶವೇ ಮೀಸಲಾತಿ. ಅರ್ಹರೆಲ್ಲರಿಗೂ ಮೀಸಲಾತಿಯ ಅನುಕೂಲ ದೊರೆಯದೇ ಇರುವ ಪರಿಸ್ಥಿತಿಯೇ ಒಳಮೀಸಲಾತಿಯ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ಮೀಸಲಾತಿಯ ಕಾರಣದಿಂದ ಶಿಕ್ಷಣ ಪಡೆದ ಮೊದಲ ತಲೆಮಾರಿನ ಬಲಗೈ ಹೊಲೆಯ ಸಮುದಾಯದವರು, ಆರಂಭದಿಂದಲೇ ಮೀಸಲಾತಿಯ ಸಿಂಹಪಾಲನ್ನು ಪಡೆಯುತ್ತಿದ್ದರು. ಶಿಕ್ಷಣದಿಂದ ವಂಚಿತರಾದ ಎಡಗೈ ಮಾದಿಗ ಸಮುದಾಯದವರು ತಮ್ಮ ಮೀಸಲಾತಿ ಪಡೆದುಕೊಳ್ಳುವಲ್ಲಿ ಮೊದಲಿನಿಂದಲೂ ಹಿಂದಿದ್ದರು. ಹೀಗಾಗಿ ಮಾದಿಗರಿಗೆ ಅವರ ಜನಸಂಖ್ಯೆಗನುಗುಣವಾಗಿ ದೊರೆಯಬೇಕಿದ್ದ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಅವಕಾಶಗಳು ದೊರೆಯಲೇ ಇಲ್ಲ. ಒಳಮೀಸಲಾತಿ ಇಲ್ಲದೇ ಇರುವುದರ ಪರಿಣಾಮ ಇದು. ಇದರ ವಿರುದ್ಧ 1980ರ ದಶಕದಲ್ಲೇ ದನಿ ಎತ್ತಲಾಯಿತು ಮತ್ತು ಒಳಮೀಸಲಾತಿಗಾಗಿ ಒತ್ತಾಯಿಸಲಾಯಿತು. ಯಾವ ಸರ್ಕಾರಗಳೂ ಒಳಮೀಸಲಾತಿಯನ್ನು ತರಲು ಉತ್ಸುಕತೆ ತೋರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ಸುಕತೆ ತೋರಿತಾದರೂ, ಬಲಗೈ ಸಮುದಾಯದ ವಿರೋಧಕ್ಕೆ ಹೆದರಿ ಕೈತೊಳೆದುಕೊಂಡಿತು. ಈಗಿನ ಸರ್ಕಾರವೂ ಒಳಮೀಸಲಾತಿ ನೀಡುವ ಭರವಸೆ ನೀಡುತ್ತಿದೆಯಾದರೂ, ಕಾದು ನೋಡಬೇಕಿದೆ.

ಈಚೆಗೆ ನಡೆದ ದಲಿತ ಸಂಘರ್ಷ ಸಮಿತಿಯ ಐಕ್ಯತಾ ಸಮಾವೇಶದ ಹಕ್ಕೊತ್ತಾಯಗಳಲ್ಲಿ ಒಳಮೀಸಲಾತಿಗೆ ಜಾಗ ನೀಡಲಾಗಿದೆ. ಬಲಗೈ ಸಮುದಾಯವೂ ಒಳಮೀಸಲಾತಿಗೆ ಒಪ್ಪಿಗೆ ಸೂಚಿಸದಂತಾಗಿದೆ. ಪರಿಶಿಷ್ಟ ಪಂಗಡದ ಬೇಡಿಕೆಯ ಹೋರಾಟಕ್ಕೆ ಮಣಿದು ಸುಗ್ರೀವಾಜ್ಞೆ ಮೂಲಕ ಶೇ 7 ಮೀಸಲಾತಿ ಹೆಚ್ಚಿಗೆ ಮಾಡಿರುವ ಹಿನ್ನೆಲೆಯಲ್ಲಿ ಅದಕ್ಕೂ ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬಂದಿರುವ ಒಳಮೀಸಲಾತಿ ಹೋರಾಟದ ಕಾವು ಮತ್ತಷ್ಟು ಹೆಚ್ಚಾಗಿದೆ. ಈಗ ಮೇಲ್ನೋಟಕ್ಕೆ ಒಳಮೀಸಲಾತಿಗೆ ವಿರೋಧವೇ ಇಲ್ಲದಂತಾಗಿದೆ. ಹೀಗಿರುವಾಗ ಮುಂಬರುವ ಅಧಿವೇಶನದಲ್ಲಿ ಪ್ರಸ್ತುತ ಸರ್ಕಾರ ಧೈರ್ಯ ಮಾಡಿ ಒಳಮೀಸಲಾತಿ ತರುತ್ತದೆಯೇ ಎಂಬುದನ್ನು ನೋಡಬೇಕಿದೆ.

–ಡಾ.ನಾಗೇಶ್‌ ಕೆ.ಎನ್. ಚಿತ್ರ ಸಾಹಿತಿ, ಸಾಮಾಜಿಕ ಕಾರ್ಯಕರ್ತ

‘ಒಳಮೀಸಲಾತಿ ಆಸರೆ’

‘ಒಳಮೀಸಲಾತಿಯಿಂದ ದಲಿತರಲ್ಲಿನ ಒಗ್ಗಟ್ಟು ಒಡೆದು ಹೋಗುತ್ತದೆ. ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಈಗಿರುವ ಕಿಂಚಿತ್ ಸೌಲಭ್ಯವೂ ಕೈತಪ್ಪಿ ಹೋಗುತ್ತದೆ’– ಎಂಬಿತ್ಯಾದಿ ತಪ್ಪು ಅಭಿಪ್ರಾಯಗಳನ್ನು ರೂಪಿಸುವ ಹುನ್ನಾರಗಳು ಕೂಡ ಕ್ರಿಯಾಶೀಲಗೊಂಡಿವೆ. ದೊಡ್ಡ ಸೌಲಭ್ಯಗಳಿಂದ ಮಾದಿಗ ಸಮುದಾಯ ವಂಚಿತವಾಗಿದೆ. ತನ್ನದೇ ಸೋದರ ಜಾತಿ, ಸಮುದಾಯಗಳಿಂದ ಅನ್ಯಾಯಕ್ಕೊಳಗಾಗುತ್ತ ಬಂದಿರುವ ತಳ ಸಮುದಾಯಗಳಿಗೆ ಒಳ ಮೀಸಲಾತಿ ಆಸರೆಯಾಗಬಲ್ಲದು.ಒಳಮೀಸಲಾತಿಯು ಸಂವಿಧಾನವನ್ನು ವಿಸ್ತರಿಸುವ ಪ್ರಕ್ರಿಯೆಯೇ ಆಗಿದ್ದು, ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಬದ್ಧತೆಯನ್ನು ಪ್ರಗತಿಪರ ಸಂಘಟನೆಗಳು ಮಾಡಲಿ ಎಂದು ಆಶಿಸುತ್ತೇನೆ.

ಡಾ. ಚರಿತಾ ಮೈಸೂರು, ಕಲಾವಿದೆ, ಉಪನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT