ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಚಂಡವ್ಯಾಘ್ರನ ದಿಗಿಲು ದುಮ್ಮಾನ
ಆಳ–ಅಗಲ: ಚಂಡವ್ಯಾಘ್ರನ ದಿಗಿಲು ದುಮ್ಮಾನ
Published 27 ಅಕ್ಟೋಬರ್ 2023, 0:18 IST
Last Updated 27 ಅಕ್ಟೋಬರ್ 2023, 0:18 IST
ಅಕ್ಷರ ಗಾತ್ರ

ಭಾರತದ ಕಾಲ್ಪನಿಕ ಕಥನಗಳಲ್ಲಿ ಹುಲಿಗೆ ದೈವತ್ವದ ಸ್ಥಾನ ನೀಡಲಾಗಿದೆ. ಹುಲಿಯು ಧೈರ್ಯ, ಶಕ್ತಿ ಹಾಗೂ ಪರಾಕ್ರಮದ ಸಂಕೇತವೂ ಆಗಿದೆ. ಹಾಗಾಗಿಯೇ ದೇಸಿ ಕಲೆ, ಜನಪದ ಕಥೆಗಳಲ್ಲಿ ಅದು ಪದೇ ಪದೇ ಕಾಣಿಕೊಳ್ಳುತ್ತದೆ.

ಅರಣ್ಯದ ಕಗ್ಗತ್ತಲಿನಲ್ಲಿ ನಿಶ್ಯಬ್ದವಾಗಿ ನೆರಳಿನಂತೆ ಚಲಿಸುವ ಅದರ ಬಗ್ಗೆ ಎಲ್ಲರಲ್ಲೂ ಆಕರ್ಷಣೆ ಮೂಡುವುದು ಸಹಜ. ಆದರೆ, ಚೀನಾ ಸೇರಿದಂತೆ ಹಲವು ದೇಶಗಳ ಜನರಲ್ಲಿ ಅದರ ಅವಯವಗಳು ಸರ್ವರೋಗ ನಿವಾರಕ ಶಕ್ತಿ ಹೊಂದಿವೆ ಎಂಬ ಮೌಢ್ಯ ಬೇರೂರಿದೆ.

ಮೋಜು, ವರ್ಣಮಯ ಚರ್ಮ, ಗೃಹಾಲಂಕಾರಿಕ ವಸ್ತುಗಳು ಹಾಗೂ ಔಷಧ ತಯಾರಿಕೆ ಸೇರಿದಂತೆ ಕಾಮೋದ್ದೀಪನ ಮದ್ದಿಗಾಗಿ ಅವುಗಳ ಬೇಟೆ ಅವ್ಯಾಹತವಾಗಿದೆ. ಮಾನವನ ಅತಿಯಾಸೆಯು ಅವುಗಳ ಬದುಕನ್ನು ಅಡಕತ್ತರಿಗೆ ಸಿಲುಕಿಸಿರುವುದು ಸತ್ಯ. 

10 ತಿಂಗಳಲ್ಲಿ 151 ಹುಲಿ ಸಾವು:

ವನ್ಯಜೀವಿ ಪ್ರವಾಸೋದ್ಯಮದ ಪರಿಕಲ್ಪನೆ ಬಲಗೊಂಡ ಬಳಿಕ ಭಾರತದಲ್ಲಿ ಹುಲಿಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಮತ್ತೊಂದೆಡೆ ಅಷ್ಟೇ ವೇಗದಲ್ಲಿ ವನ್ಯಜೀವಿ ವ್ಯಾಪಾರಕ್ಕಾಗಿ ಅವು ಬಲಿಯಾಗುತ್ತಿರುವುದು ವಿಪರ್ಯಾಸ. 

ದೇಶದಲ್ಲಿ 2022ರ ಗಣತಿ ಅನ್ವಯ ಒಟ್ಟು 3,682 ಹುಲಿಗಳಿವೆ. ಪ್ರಸಕ್ತ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗೆ 151 ಹುಲಿಗಳು ಮೃತಪಟ್ಟಿವೆ. ಈ ಅಂಕಿ–ಅಂಶಗಳು ಭಾರತದಲ್ಲಿ ಸಂರಕ್ಷಣಾ ವೈಫಲ್ಯದತ್ತ ಬೊಟ್ಟು ಮಾಡುತ್ತವೆ.

ದೇಶದಲ್ಲಿ ಬೇಟೆಯನ್ನೇ ವೃತ್ತಿಯಾಗಿಸಿಕೊಂಡಿರುವ ಬುಡಕಟ್ಟು ಸಮುದಾಯಗಳನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಗುರುತಿಸಿದೆ. ಉತ್ತರ ಭಾರತದಲ್ಲಿರುವ ಬೆಹೆಲಿಯಾಸ್, ಬವಾರಿಯಾ, ಅಂಬಲ್‌ಗರ್ಸ್, ಬಡಾಕ್ಸ್, ಮೊಂಗಿಯಾಸ್, ಪಾರ್ಧಿ, ಬೋಯಾಸ್, ಕರ್ವಾಲ್ ನಾಟ್ ಪಂಗಡಗಳು ಈ ಪಟ್ಟಿಯಲ್ಲಿವೆ. ಹುಲಿ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯ 4.5ನೇ ಸೆಕ್ಷನ್‌ನಲ್ಲಿ ಈ ಬುಡಕಟ್ಟು ಸಮುದಾಯಗಳನ್ನು ಗುರುತಿಸಲಾಗಿದೆ.

ವನ್ಯಜೀವಿ ವ್ಯಾಪಾರಿಗಳು ಹುಲಿ, ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಹತ್ಯೆಗೆ ಇವರನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. 2012ರಲ್ಲಿ ಹರಿಯಾಣದ ಬವಾರಿಯಾ ಸಮುದಾಯದವರು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಾ ಟ್ರಾಪ್‌ ಬಳಸಿ ಹುಲಿ ಬೇಟೆಗೆ ಸಂಚು ರೂಪಿಸಿದ್ದ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಿದ್ದರು. ದೇಶದ ಹಲವು ಸಂರಕ್ಷಿತ ಪ್ರದೇಶಗಳಲ್ಲಿ ಇವರು ಹುಲಿ ಹತ್ಯೆ ನಡೆಸಿದ್ದ ಸಂಗತಿ ತನಿಖೆಯಿಂದ ಬಹಿರಂಗಗೊಂಡಿತ್ತು.  

ಏತಕ್ಕಾಗಿ ಬಳಕೆ?:

ಪರಂಪರಾಗತ ಕಾರಣದಿಂದ ಹುಲಿಯ ಅವಯವಗಳಿಗೆ ಅತಿಹೆಚ್ಚಿನ ಮೌಲ್ಯವಿದೆ ಎಂಬ ಭಾವನೆ ಜನರಲ್ಲಿದೆ. ಅದರ ಚರ್ಮ, ಉಗುರು ಮತ್ತು ಹಲ್ಲುಗಳನ್ನು ಪಾರಿತೋಷಕ, ತಾಯಿತವನ್ನಾಗಿ ಜಗತ್ತಿನಾದ್ಯಂತ ಹಲವು ಶತಮಾನಗಳಿಂದ ಬಳಸಲಾಗುತ್ತದೆ.  

ಚೀನಾ, ಜಪಾನ್‌, ಟಿಬೆಟ್‌, ತೈವಾನ್‌, ವಿಯೆಟ್ನಾಂ, ದಕ್ಷಿಣ ಕೊರಿಯಾದ ಸಾಂಪ್ರದಾಯಿಕ ಔಷಧ ತಯಾರಿಕೆಯಲ್ಲಿ ಹುಲಿಯ ದೇಹದ ಭಾಗಗಳನ್ನು ಬಳಸಲಾಗುತ್ತದೆ. ಹಾಗಾಗಿಯೇ ಇದರ ಅವಯವಗಳಿಗೆ ಆ ದೇಶಗಳಲ್ಲಿ ಅಪಾರ ಬೇಡಿಕೆಯಿದೆ.

ಅದರ ಮೂಳೆಗಳಿಗೆ ಸಂಧಿವಾತ ಗುಣಪಡಿಸುವ ಹಾಗೂ ಸ್ನಾಯುಗಳನ್ನು ಬಲಗೊಳಿಸುವ ಶಕ್ತಿ ಇದೆ ಎಂದು ನಂಬಲಾಗಿದೆ. ರಕ್ತವು ಉತ್ತಮ ಟಾನಿಕ್‌ ಎಂದು ಭಾವಿಸುತ್ತಾರೆ. ಅದರ ಬಾಲ ಚರ್ಮವ್ಯಾಧಿಗೆ ದಿವ್ಯೌಷಧ. ಕಣ್ಣಿನಗುಡ್ಡೆಗಳನ್ನು ತಿಂದರೆ ಕಣ್ಣಿನ ಪೊರೆಯ ಸಮಸ್ಯೆ, ಮೂರ್ಛೆ ರೋಗ, ಮಲೇರಿಯಾ ಜ್ವರ ನಿವಾರಣೆಯಾಗುತ್ತದೆ ಎಂಬ ಮೌಢ್ಯ ಅವರಲ್ಲಿದೆ.

ಇಂದಿಗೂ ಚೀನೀಯರು ಹುಲಿಯ ದೇಹ ಭಾಗಗಳಿಂದ ತಯಾರಿಸಿದ ಶಕ್ತಿಪೇಯ ಕುಡಿಯುತ್ತಾರೆ. ಮೂಳೆಗಳಿಂದ ತಯಾರಿಸಿದ ವೈನ್‌ ಅಲ್ಲಿ ಜನಪ್ರಿಯ. ಕೆಲವು ಶ್ರೀಮಂತರು ತಮ್ಮ ಮನೆಗೆ ಬರುವವರಿಗೆ ಇದನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇದೆ. ಕಾಮೋದ್ದೀಪನಕ್ಕೂ ಇದು ಶಕ್ತಿಯುತ ಮದ್ದು ಎಂದು ನಂಬುತ್ತಾರೆ.

ಉಗುರುಗಳನ್ನು ನಿದ್ರಾಹೀನತೆ ಹೋಗಲಾಡಿಸುವ ಔಷಧ ತಯಾರಿಕೆಗೆ ಬಳಸುತ್ತಾರೆ. ಹಲ್ಲುಗಳನ್ನು ಜ್ವರದ ಔಷಧ, ಕೊಬ್ಬನ್ನು ಕುಷ್ಠರೋಗ, ಸಂಧಿವಾತ ರೋಗದ ಶಮನಕ್ಕೆ ಬಳಸುತ್ತಾರೆ. ಆದರೆ, ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ. ಪ್ರಯೋಗಾಲಯಗಳಲ್ಲೂ ಇದು ದೃಢಪಟ್ಟಿಲ್ಲ.

ನಕಲಿ ಹಾವಳಿ:

‌ದನಗಳ ಗೊರಸು, ಕೊಂಬುಗಳನ್ನು ಬಳಸಿ ಹುಲಿಯ ನಕಲಿ ಉಗುರು ತಯಾರಿಸಿ ಕರ್ನಾಟಕದಲ್ಲಿ ಮಾರಾಟ ಮಾಡುವರು ಇದ್ದಾರೆ.  

ಕೊರಳಲ್ಲಿ ಹುಲಿ ಉಗುರು ಧರಿಸಿದರೆ ಹುಲಿಯಷ್ಟೇ ಶಕ್ತಿ ಲಭಿಸುತ್ತದೆ. ಭಯ ನಿವಾರಣೆಯಾಗುತ್ತದೆ. ಭೂತಪ್ರೇತಗಳ ಚೇಷ್ಟೆ ಕಾಡುವುದಿಲ್ಲ ಎಂಬ ನಂಬಿಕೆ ಭಾರತೀಯರಲ್ಲಿದೆ. ಇದಕ್ಕಾಗಿ ಜ್ಯೋತಿಷಿಗಳ ಮೊರೆ ಹೋಗುವವರು ಇದ್ದಾರೆ. ಅಂತಹವರು ನಕಲಿ ವಸ್ತುಗಳ ಮಾರಾಟ ಜಾಲಕ್ಕೆ ಸುಲಭವಾಗಿ ಸಿಲುಕುತ್ತಾರೆ.

ಪೂರಕ ಮಾಹಿತಿ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವೆಬ್‌ಸೈಟ್‌, ವರ್ಲ್ಡ್‌ ವೈಲ್ಡ್‌ಲೈಫ್‌ ಫಂಡ್‌, ಕರ್ನಾಟಕ ಅರಣ್ಯ ಇಲಾಖೆ 

ಹುಲಿ ಮೂಳೆ
ಹುಲಿ ಮೂಳೆ
ಟ್ರೋಫಿ ಉಡುಗೊರೆ ನೀಡುವುದು ಅಪರಾಧ
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ವನ್ಯಜೀವಿಗಳ ಮಾರಾಟ ಮತ್ತು ಟ್ರೋಫಿಗಳ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಾಣಿಗಳ ಚರ್ಮ ಉಗುರು ಸೇರಿದಂತೆ ಇತರೆ ಅವಯವಗಳನ್ನು (ಟ್ರೋಫಿ) ಸಂಸ್ಕರಿಸಿ ಮನೆಯಲ್ಲಿ ಸಂಗ್ರಹಿಸಿಡುವುದು ಕೂಡ ಅಪರಾಧ. ಆದರೆ ಕೆಲವರು ವನ್ಯಜೀವಿ ಟ್ರೋಫಿಗಳು ನಮ್ಮ‌ ಪೂರ್ವಿಕರಿಂದ‌ ಬಂದಿರುವ ಬಳುವಳಿ ಎಂದು‌‌ ಸಮರ್ಥಿಸಿಕೊಳ್ಳುತ್ತಾರೆ.  ದೇಶದಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ವರ್ಷದಲ್ಲಿ 30 ದಿನ ವನ್ಯಜೀವಿ ಟ್ರೋಫಿಗಳ ಪ್ರಮಾಣೀಕರಣಕ್ಕೆ ಮೊದಲ ಬಾರಿಗೆ ಅವಕಾಶ‌ ನೀಡಲಾಗಿತ್ತು. ಇದಾದ‌ ಬಳಿಕ 1992ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದ ವೇಳೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿತ್ತು. 2003ರಲ್ಲಿ ಕಾಯ್ದೆಗೆ‌ ಮತ್ತೆ ತಿದ್ದುಪಡಿ ತಂದಾಗ ಆರು ತಿಂಗಳ ಅವಕಾಶ‌ ನೀಡಲಾಗಿತ್ತು.  ರಾಜ್ಯ ಮುಖ್ಯ ವನ್ಯಜೀವಿ ಪರಿಪಾಲಕರ ಮುಂದೆ ಟ್ರೋಫಿಗಳನ್ನು ಹಾಜರುಪಡಿಸಿದವರಿಗೆ ‘ಮಾಲೀಕತ್ವದ ಪ್ರಮಾಣ ಪತ್ರ’ ನೀಡಲಾಗಿದೆ.    ಆದರೆ ಅನುಮತಿ ಪಡೆದ ಟ್ರೋಫಿಗಳನ್ನು ಮನೆಯ ಆವರಣದಲ್ಲಷ್ಟೇ ಪ್ರದರ್ಶಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬಾರದು. ಅಲ್ಲದೇ ಬೇರೆಯವರಿಗೆ ಹಸ್ತಾಂತರಿಸುವುದು ಉಡುಗೊರೆ ರೂಪದಲ್ಲಿ ನೀಡುವುದು ಅಥವಾ ಮಾರಾಟ ಮಾಡುವುದು ಕಾಯ್ದೆಯಡಿ ಅಪರಾಧವಾಗಲಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು. 

ಕಾನೂನು ಕ್ರಮಕ್ಕೆ ಹಿಂಜರಿಯಲ್ಲ

ಪುಷ್ಕರ್ ‘ಹುಲಿಯ ಉಗುರು ಚರ್ಮ ಮೀಸೆ ಮೂಳೆ ಸೇರಿದಂತೆ ಇತರೆ ಅವಯವಗಳನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರ. ಸದ್ಯ ಬಿಗ್‌‌ಬಾಸ್ ಸ್ಪರ್ಧಿಯಿಂದ ವಶಪಡಿಸಿಕೊಂಡಿರುವ ಉಗುರುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ‌ ಕಳುಹಿಸಲಾಗಿದೆ. ಅವು ಅಸಲಿಯೋ ಅಥವಾ ನಕಲಿಯೋ ಎಂಬುದು ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಗೊತ್ತಾಗಲಿದೆ’ ಎಂದು ರಾಜ್ಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್‌ ಪುಷ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಉಗುರುಗಳು ಅಸಲಿ ಎಂಬುದು ಸಾಬೀತಾದರೆ ವನ್ಯಜೀವಿ ಕಾಯ್ದೆಯಡಿ‌ ಮುಂದಿನ‌ ಕ್ರಮ‌ಜರುಗಿಸುತ್ತೇವೆ’ ಎಂದರು. ‘ರಾಜ್ಯದಲ್ಲಿ ಕೆಲವರು ಹುಲಿ ಉಗುರು ಚರ್ಮವನ್ನು ಕಾನೂನುಬಾಹಿರವಾಗಿ‌ ಹೊಂದಿದ್ದಾರೆ ಎಂಬ ಬಗ್ಗೆ ದೂರು ಬಂದಿವೆ. ಈ‌ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮವಹಿಸಲು ಆಯಾ ಜಿಲ್ಲೆಯ ಅರಣ್ಯ ಅಧಿಕಾರಿಗಳು ಸೂಚಿಸಲಾಗಿದೆ. ತಪ್ಪಿತ್ಥರ ವಿರುದ್ಧ ಕ್ರಮ ಜರುಗಿಸಲು‌ ಹಿಂಜರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅರಣ್ಯ–ಪೊಲೀಸ್‌ ಜಂಟಿ ಕಾರ್ಯಾಚರಣೆ ಅಗತ್ಯ

‘ಸಂವಿಧಾನದ 51ಎ(ಜಿ) ವಿಧಿಯಡಿ ಅರಣ್ಯ ಸರೋವರ ನದಿ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಕರ್ತವ್ಯ ಆಗಿದೆ. ಎಲ್ಲರೂ ಈ ನೈತಿಕ ಹೊಣೆಯನ್ನು ಅರಿಯಬೇಕಿದೆ. ಹೀಗಿದ್ದರೂ ಸಮಾಜದಲ್ಲಿ ಗೌರವಯುತ ಸ್ಥಾನ ಹೊಂದಿದವರು ಕಾನೂನು ಉಲ್ಲಂಘನೆ ಮಾಡುವುದು ಸರಿಯಲ್ಲ’ ಎನ್ನುತ್ತಾರೆ ‘ವೈಲ್ಡ್‌ ಲೈಫ್‌ ಫಸ್ಟ್‌’ನ ವ್ಯವಸ್ಥಾಪಕ ಟ್ರಸ್ಟಿ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಪ್ರವೀಣ್‌ ಭಾರ್ಗವ್‌. ‘ವನ್ಯಜೀವಿಗಳ ಅವಯವ ಹೋಲುವ ನಕಲಿ ವಸ್ತುಗಳನ್ನು ಕೊರಳಲ್ಲಿ ಧರಿಸುವುದು ತಪ್ಪು. ಇದು ವನ್ಯಜೀವಿಗಳ ಹತ್ಯೆಗೆ ಅವರನ್ನು ಪ್ರೇರೇಪಿಸುವ ಸಾಧ್ಯತೆಯೂ ಇರುತ್ತದೆ. ವನ್ಯಜೀವಿ ವ್ಯಾಪಾರವು ದೊಡ್ಡ ಜಾಲ. ನಕಲಿ ವಸ್ತುಗಳನ್ನು ಮಾರಾಟ ಮಾಡುವವರು ಅಸಲಿ ವಸ್ತುಗಳನ್ನೂ ಮಾರಾಟ ಮಾಡುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ ಅವರು. ಅರಣ್ಯ ಅಧಿಕಾರಿಗಳಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಷ್ಟೇ ಪ್ರಕರಣ ದಾಖಲಿಸಲು ಅವಕಾಶವಿದೆ. ಆದರೆ ಪೊಲೀಸರು ಭಾರತೀಯ ದಂಡ ಸಂಹಿತೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು. ವನ್ಯಜೀವಿ ಅಪರಾಧ ತಡೆ ಸಂಬಂಧ ರಚಿಸುವ ಕಾರ್ಯಪಡೆಗಳಲ್ಲಿ ಈ ಎರಡೂ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸುವುದು ಉತ್ತಮ ಎಂಬುದು ಅವರ ಸಲಹೆ.

3ರಿಂದ 7 ವರ್ಷ ಸಜೆ
ಕಾಯ್ದೆಯ ಪರಿಚ್ಛೇದ 1 2 3 ಮತ್ತು 4ರಲ್ಲಿ ಬರುವ ಸಸ್ತನಿಗಳು ಪಕ್ಷಿಗಳು ಜಲಚರಗಳು ಉಭಯವಾಸಿಗಳು ಸರೀಸೃಪಗಳನ್ನು ಸೆರೆ ಹಿಡಿಯುವುದು ಮತ್ತು ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಅವುಗಳ ಉಗುರು ಚರ್ಮ ಇತ್ಯಾದಿ ಸಂಗ್ರಹಿಸುವುದು ಪ್ರದರ್ಶಿಸುವುದು ದಂಡಾರ್ಹ ಮತ್ತು ಶಿಕ್ಷಾರ್ಹ ಅಪರಾಧವಾಗಲಿದೆ. ಕಾನೂನು ಉಲ್ಲಂಘಿಸಿದರೆ ಕನಿಷ್ಠ 3ರಿಂದ 7 ವರ್ಷ ಸಜೆ ಹಾಗೂ ₹ 10 ಸಾವಿರ ದಂಡ ವಿಧಿಸುವ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT