ತೆಲಂಗಾಣದಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆಯ ಪ್ರಮುಖ ಆರೋಪಿಗೆ ಅಲ್ಲಿನ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿಯೂ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗೆ ಇದೇ ಜನವರಿಯಲ್ಲಿ ಮರಣ ದಂಡನೆ ವಿಧಿಸಲಾಗಿತ್ತು. ಇಂಥ ಪ್ರಕರಣಗಳ ಕೆಲವು ವಿರಳ ತೀರ್ಪುಗಳ ಹೊರತಾಗಿ ಮರ್ಯಾದೆಯ ಹೆಸರಿನಲ್ಲಿ ಪ್ರಬಲ ಜಾತಿಗಳವರು ದಲಿತರೂ ಸೇರಿದಂತೆ ಇತರ ದುರ್ಬಲ ಜಾತಿಗಳ ಜನರ ಮೇಲೆ ಎಸಗುತ್ತಿರುವ ಕ್ರೌರ್ಯ, ಹಲ್ಲೆ, ಕೊಲೆಗಳ ವಿಚಾರದಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುತ್ತಿಲ್ಲ ಎನ್ನುವ ದೂರು ವ್ಯಾಪಕವಾಗಿದೆ. ಈ ಉದ್ದೇಶಕ್ಕೆ ಪ್ರತ್ಯೇಕ ಕಾಯ್ದೆ ತರಬೇಕು ಎನ್ನುವ ಬೇಡಿಕೆಯೂ ಇದೆ.