ಶುಕ್ರವಾರ, 11 ಜುಲೈ 2025
×
ADVERTISEMENT
ಒಳನೋಟ: ‘ಪ್ರಪಾತ’ಕ್ಕೆ ಸರ್ಕಾರಿ ವಿವಿಗಳು
ಒಳನೋಟ: ‘ಪ್ರಪಾತ’ಕ್ಕೆ ಸರ್ಕಾರಿ ವಿವಿಗಳು
ಫಾಲೋ ಮಾಡಿ
Published 9 ಡಿಸೆಂಬರ್ 2023, 23:40 IST
Last Updated 9 ಡಿಸೆಂಬರ್ 2023, 23:40 IST
Comments
ಹಗರಣಗಳ ಸರಮಾಲೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ನಡೆದಿದೆ ಎನ್ನಲಾದ ₹250 ಕೋಟಿಯಷ್ಟು ಹಣ ದುರ್ಬಳಕೆ ಮಾಡಿಕೊಂಡ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. 2009–10ರಿಂದ 2015–16ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಕುಲಪತಿ, ಕುಲಸಚಿವ ಹಾಗೂ ಇತರೆ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಸಿಬಿಐ ಕೆಲ ದಿನಗಳ ಹಿಂದಷ್ಟೇ ನೋಟಿಸ್‌ ನೀಡಿದೆ. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕ, ಪರೀಕ್ಷೆ, ಅಧ್ಯಯನ ಕೇಂದ್ರಗಳ ಸ್ಥಾಪನೆ ಸೇರಿದಂತೆ ಹಣ ದುರ್ಬಳಕೆ ಆರೋಪಗಳು ವಿಶ್ವವಿದ್ಯಾಲಯದಲ್ಲಿ ನಡೆದಿರಬಹುದಾದ ಭ್ರಷ್ಟಾಚಾರದ ಕರಾಳಮುಖವನ್ನು ಅನಾವರಣಗೊಳಿಸಿದೆ. ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹೊಂದಿದ್ದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮಗಳು ನಡೆದರೂ, ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ದೊಡ್ಡ ಮೊತ್ತದ ‘ಕಪ್ಪಕಾಣಿಕೆ‘ಯನ್ನು ಇಂತಹ ಕೇಂದ್ರಗಳು ವಿ.ವಿ ಆಡಳಿತ ಮಂಡಳಿಗೆ ಸಲ್ಲಿಸುತ್ತಿದ್ದದ್ದೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು. ಆರೋಪಗಳಿಗೆ ಬಲವಾದ ಸಾಕ್ಷ್ಯವೇನು ಇರಲಿಲ್ಲ. ಕೊನೆಗೆ ಕೆಎಸ್‌ಒಯು ಹೊರತುಪಡಿಸಿ ಉಳಿದ ವಿಶ್ವವಿದ್ಯಾಲಯಗಳ ದೂರ ಶಿಕ್ಷಣ ನಿರ್ದೇಶನಾಲಯಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಎಲ್ಲಾ ವಿ.ವಿಗಳ ಆದಾಯದ ಮೂಲವೇ ಮುಚ್ಚಿದಂತಾಗಿದೆ. ನೇಮಕಾತಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳದ ಆರೋಪಗಳು ಹಲವು ವಿಶ್ವವಿದ್ಯಾಲಯಗಳ ಮೇಲಿದೆ. ನೇಮಕಾತಿಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ನೀಡಿ ಸರ್ಕಾರ ಈಚೆಗೆ ಕೆಎಸ್‌ಒಯು, ಜಾನಪದ ವಿಶ್ವವಿದ್ಯಾಲಯಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದಿದೆ. ಒಟ್ಟಾರೆ ಬಿಗಿ ಆಡಳಿತ ಮತ್ತು ಆರ್ಥಿಕ ಶಿಸ್ತು ಜಾರಿಯಾಗದಿದ್ದರೆ ವಿ.ವಿಗಳ ಸ್ಥಿತಿ ಮತ್ತಷ್ಟು ಕೆಟ್ಟದಾಗಲಿದೆ.
ಸದ್ಯಕ್ಕಿಲ್ಲ ಹೊಸ ವಿ.ವಿ ಸ್ಥಾಪನೆ: ಸಚಿವ ಸುಧಾಕರ್‌
ಬೇಕಾಬಿಟ್ಟಿಯಾಗಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದರಿಂದಲೇ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಈಗಿರುವ ಎಲ್ಲ ವಿಶ್ವವಿದ್ಯಾಲಯಗಳೂ ಬಲವರ್ಧನೆಯಾಗುವವರೆಗೆ ಯಾವುದೇ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಸುಧಾಕರ್‌. ಹೊಸ ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಸರ್ಕಾರ ಐದು ವರ್ಷಗಳ ಅವಧಿಗೆ ಕನಿಷ್ಠ ₹342 ಕೋಟಿ ನೀಡಬೇಕು. 100ರಿಂದ 200 ಎಕರೆ ಭೂಮಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಮಿತಿ ಶಿಫಾರಸು ಮಾಡಿದೆ. ಅಗತ್ಯವಾದ ಹಣಕಾಸಿನ ನೆರವು, ಮೂಲ ಸೌಕರ್ಯ ದೊರಕದೆ ಹೊಸ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟದಲ್ಲಿವೆ. ಹಲವು ಕುಲಪತಿಗಳು ಬಾಡಿಗೆ ಕಾರು ಬಳಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಇದೆ. ಕಟ್ಟಡಗಳಿಲ್ಲದೆ ಪರಿತಪಿಸುವಂತಾಗಿದೆ. ಹಳೆಯ ಹಾಗೂ ಹೊಸ ವಿಶ್ವವಿದ್ಯಾಲಯಗಳಿಗೆ ಮುಂದಿನ ಬಜೆಟ್‌ನಲ್ಲಿ ಸೂಕ್ತ ಅನುದಾನ ಒದಗಿಸಲಾಗುವುದು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅನುದಾನ ನೀಡದೆ ರಾಜಕೀಯ ಪ್ರತಿಷ್ಠೆಗಾಗಿ ಕಳೆದ ವರ್ಷ ಸ್ಥಾಪಿಸಿದ್ದ ಚಾಮರಾಜನಗರ, ಹಾಸನ, ಮಂಡ್ಯ, ಬೀದರ್, ಕೊಡಗು, ಕೊಪ್ಪಳ, ಬಾಗಲಕೋಟೆ, ಹಾವೇರಿ ಸೇರಿ ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಕುರಿತು ವಿವರವಾದ ವರದಿ ಸಿದ್ಧಪಡಿಸಲು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎನ್ನುತ್ತಾರೆ ಸಚಿವ ಸುಧಾಕರ್.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 211 ಬೋಧಕ ಹುದ್ದೆಗಳಿವೆ. ಕೇವಲ 42 ಬೋಧಕ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ.
–ದಯಾನಂದ ಅಗಸರ, ಕುಲಪತಿ, ಗುಲಬರ್ಗಾ ವಿ.ವಿ.
ಸಿಬ್ಬಂದಿಯ ವೇತನದ ಜತೆಗೆ, ಪಿಂಚಣಿಯನ್ನೂ ನೀಡಬೇಕು. ಇಲ್ಲ ವಾದರೆ ಮೂರು ವರ್ಷಗಳ ನಂತರ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಲಿದ್ದೇವೆ.
– ಎಸ್‌.ಎಂ.ಜಯಕರ್‌, ಕುಲಪತಿ ಬೆಂಗಳೂರು ವಿ.ವಿ
ವಿ.ವಿಯ ಆರ್ಥಿಕ ಸ್ಥಿತಿಗತಿ ಉತ್ತವಾಗಿದೆ. ಆದರೆ, ವಿಶ್ವವಿದ್ಯಾಲಯದಲ್ಲಿ ಕಾಯಂ ಸಿಬ್ಬಂದಿ ಇಲ್ಲದಿರುವುದೇ ಪ್ರಮುಖ ಸಮಸ್ಯೆ.
– ನಿರಂಜನ ವಾನಳ್ಳಿ, ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ
ಶತಮಾನದ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವಾಗಿಸುವ ಎಲ್ಲ ಪ್ರಕ್ರಿಯೆ ನಡೆಸುತ್ತಿರುವೆ. ಆಗ, ಕೇಂದ್ರ ಬಜೆಟ್‌ನಲ್ಲಿಯೇ ಅನುದಾನ ಸಿಗುತ್ತದೆ ನೇಮಕಾತಿಯೆಲ್ಲವೂ ರಾಷ್ಟ್ರಮಟ್ಟದಲ್ಲಿಯೇ ಆಗುತ್ತದೆ. ದೇಶದ ಎಲ್ಲೆಡೆಯಿಂದ ಸಂಶೋಧಕರು ಬರಲಿದ್ದಾರೆ.
– ಲೋಕನಾಥ್, ಮೈಸೂರು ವಿಶ್ವವಿದ್ಯಾಲಯ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT