ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಅರೆಬಳಕೆಯ ಸಿರಿಧಾನ್ಯಗಳಿಗೆ ಹೊಸರೂಪ

Last Updated 6 ಫೆಬ್ರುವರಿ 2021, 10:15 IST
ಅಕ್ಷರ ಗಾತ್ರ

ಸದೃಢ ಹಾಗೂ ಆರೋಗ್ಯವಂತ ಜೀವನ ನಡೆಸಲಿಚ್ಛಿಸುವವರು ಹೆಚ್ಚಾಗಿ ಅಪೇಕ್ಷಿಸುವ ಸಿರಿಧಾನ್ಯಗಳ ಬಳಕೆಯನ್ನು ಸರಳಗೊಳಿಸುವ ವಿನೂತನ ಪ್ರಯತ್ನವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ ನಡೆಸಿ ಯಶಸ್ವಿಯಾಗಿದೆ. ಇದರಿಂದಾಗಿ ಸಿರಿಧಾನ್ಯ ಬಳಸಿದ ಆಹಾರಗಳನ್ನು ಸಿದ್ಧಪಡಿಸುವ ತಂತ್ರಜ್ಞಾನವು ಆಸಕ್ತರಿಗೆ ಮುಕ್ತವಾಗಿವೆ.

ರಾಜ್ಯದಲ್ಲಿ ಅತ್ಯಂತ ಕಡಿಮೆ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಸಿರಿಧಾನ್ಯಗಳಿಗೆ ಎಲ್ಲಿಲ್ಲದ ಬೇಡಿಕೆ. ಆದರೆ ಹಲವರಿಗೆ ಇವುಗಳನ್ನು ಬಳಸುವ ಮನಸ್ಸಿದ್ದರೂ, ಹೇಗೆ ಬಳಸಬೇಕು? ಇವುಗಳಿಂದ ಏನನ್ನು ಸಿದ್ಧಪಡಿಸಬೇಕು? ಎಂಬಿತ್ಯಾದ ಕುರಿತು ಬಹಳಷ್ಟು ಗೊಂದಲಗಳಿವೆ. ಇವುಗಳಿಗೆ ಉತ್ತರ ರೂಪದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಆಧುನಿಕ ಆಹಾರ ಶೈಲಿಗೆ ತಕ್ಕಂತೆ ಸಿರಿಧಾನ್ಯಗಳನ್ನು ಬಳಸಿ ತರಹೇವಾರಿ ತಿನಿಸುಗಳನ್ನು ಸಿದ್ಧಪಡಿಸಿದ್ದಾರೆ.

ಸಿರಿಧಾನ್ಯಗಳಲ್ಲಿ ಹಾರಕ, ಕೊರಲೆ, ಬರಗು ಮತ್ತು ಊದಲು ಅರೆಬಳಕೆಯ ಧಾನ್ಯಗಳು ಎಂದೆನಿಸಿಕೊಂಡಿವೆ. ಇವುಗಳ ಪೌಷ್ಟಿಕ ಸಂಯೋಜನೆ, ಮೌಲ್ಯವರ್ಧನೆ ಹಾಗೂ ವಾಣಿಜ್ಯೀಕರಣಗೊಳಿಸುವ ನಿಟ್ಟಿನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಎನ್‌ಎಐ ಮೂಲಕ ಯೋಜನೆಯನ್ನು ಕೈಗೆತ್ತಿಕೊಂಡ ಸಂಶೋಧಕರು, ಸುಮಾರು ಎರಡು ವರ್ಷಗಳಲ್ಲಿ ಏಳು ಉತ್ಪನ್ನಗಳನ್ನು ಈ ನಾಲ್ಕು ಸಿರಿಧಾನ್ಯಗಳಿಂದ ಸಿದ್ಧಗೊಂಡಿವೆ.

‘ಇದರಲ್ಲಿ ಅಡುಗೆಗೆ ಸಿದ್ಧ ಹಾರಕದ ಪಾಸ್ತಾ, ಬೀಟ್‌ರೂಟ್‌ನಿಂದ ಪುಷ್ಟೀಕರಿಸಿದ ಹಾರಕದ ಪಾಸ್ತಾ, ಊದಲಿನ ತ್ವರಿತ ದೋಸೆ ಮಿಕ್ಸ್ ಹಾಗೂ ಇಡ್ಲಿ ಮಿಕ್ಸ್, ಕೊರಲೆಯ ಲಾಡು, ಬರಗಿನ ಚಕ್ಕುಲಿ, ಊದಲು ಆಧಾರಿತ ಕಸ್ಟರ್ಡ್ ಪೌಡರ್ ಮಿಕ್ಸ್, ನುಗ್ಗೆ ಸೊಪ್ಪಿನಿಂದ ಪುಷ್ಟೀಕರಿಸಿದ ಬರಗಿನ ತ್ವರಿತ ದೋಸೆ ಮಿಕ್ಸ್‌ಗಳಿವೆ’ ಎಂದು ಮಾಹಿತಿ ನೀಡಿದರು ವಿಭಾದ ಮುಖ್ಯಸ್ಥೆ ಡಾ. ಸರೋಜನಿ ಕರಕಣ್ಣವರ.

‘ಸಿರಿಧಾನ್ಯಗಳಲ್ಲಿ ನಾರಿನಾಂಶ ಬೇರೆ ಧಾನ್ಯಗಳಿಗೆ ಹೋಲಿಸಿದರೆ ಅಧಿಕವಾಗಿರುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮತ್ತು ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡವಲ್ಲಿ ಇದು ಪರಿಣಾಮಕಾರಿ. ಹೀಗಾಗಿ ಹೃದಯ ಸಂಬಂಧ ರೋಗಗಳು ಇರುವವರಿಗೆ ಹಾಗೂ ಮಧುಮೇಹಿಗಳಿಗೆ ಒಂದು ಸೂಕ್ತ ಆಹಾರ. ಗ್ಲೂಟನ್ ಅಸಹಿಷ್ಣುತೆ ಇರುವ ರೋಗಿಗಳಿಗೆ ಇದೊಂದು ಉತ್ತಮ ಆಹಾರವಾಗಿದೆ. ಪೌಷ್ಟಿಕತೆ ಮತ್ತು ಚಿಕಿತ್ಸಾತ್ಮಕ ಗುಣಗಳನ್ನು ಹೊಂದಿರುವುದರಿಂದ ಜೀವನ ಶೈಲಿಯ ಅಸ್ವಸ್ಥತೆಯನ್ನು ನಿಯಂತ್ರಿಸಲು ಇವು ಸಹಕಾರಿ’ ಎಂದು ವಿವರಿಸಿದರು.

‘ಅಸಂಪ್ರದಾಯಿಕ ವ್ಯವಸಾಯ ಪದ್ಧತಿ, ವಿಷಪೂರಿತ ಆಹಾರ, ಆಧುನಿಕ ಬದುಕಿನ ಒತ್ತಡಗಳ ಕಾರಣದಿಂದ ಆರೋಗ್ಯ ಹದಗೆಟ್ಟಿದೆ. ವೈವಿಧ್ಯಮಯವಾದ ಆಹಾರ ಪದ್ದತಿಯನ್ನು ನಾವು ಏಕಾಹಾರಕ್ಕೆ ತಂದು ನಿಲ್ಲಿಸಿದ್ದೇವೆ. ಇತ್ತೀಚೆಗೆ ಹೆಚ್ಚಾಗಿರುವ ಗೋಧಿ, ಮೈದ ಮತ್ತು ಸಕ್ಕರೆ ಬಳಕೆಯಿಂದ ಮಂಡಿನೋವು, ರಕ್ತದ ಒತ್ತಡ ಮತ್ತು ಹೃದಯಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಆದರೆ ನವಣೆ, ರಾಗಿ, ಸಜ್ಜೆ, ಹಾರಕ, ಕೊರಲೆ ಹಾಗೂ ವಿವಿಧ ಕಾಳುಗಳನ್ನು ಮತ್ತು ಬಗೆಬಗೆಯ ಸೊಪ್ಪುಗಳನ್ನು ತಿನ್ನುತ್ತಿದ್ದರೆ ಮಧುಮೇಹ ಹಾಗೂ ರಕ್ತಹೀನತೆಯಿಂದ ದೂರ ಉಳಿಯಲು ಸಾಧ್ಯ. ಇವೆಲ್ಲವೂ ನಮ್ಮನ್ನು ರೋಗಮುಕ್ತವನ್ನಾಗಿಸುವ ಜೀವಸತ್ವ ಆಹಾರಗಳಾಗಿವೆ’ ಎಂದರು ಡಾ. ಸರೋಜನಿ.

ಈ ಹಿಂದೆ ಇದೇ ವಿಭಾಗವು ಸಿರಿಧಾನ್ಯಗಳಿಂದ 20ಕ್ಕೂ ಅಧಿಕ ಉತ್ಪನ್ನಗಳ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿತ್ತು.ಇವುಗಳಲ್ಲಿ ಮುಖ್ಯವಾಗಿ ನವಣೆಯ ಡಯಾಬಿಟಿಕ್ ಮಿಕ್ಸ್, ಸಾವೆಯ ಡಯಾಬಿಟಿಕ್ ಮಿಕ್ಸ್, ಎಕೆಜೆ-1 ಕೆಂಪು ಜೋಳದ ಸ್ನ್ಯಾಕ್ ಬಾರ್, ಸಾವೆ ಆಧಾರಿತ ಸ್ಪೋರ್ಟ್ಸ್ ಮಿಕ್ಸ್, ಪೂರಕ ಆಹಾರ, ಜೋಳದ ಅರಳಿನ ಹೆಲ್ತ್ ಮಿಕ್ಸ್, ಎಕೆಜೆ–1 ಕೆಂಪು ಜೋಳದ ಕುಕ್ಕೀಸ್, ಎಕೆಜೆ-1 ಕೆಂಪು ಜೋಳದ ಉಪ್ಪಿಟ್ಟಿನ ಮಿಕ್ಸ್, ನವಣೆಯ ಲಾಡು, ನವಣೆಯ ಚಕ್ಕುಲಿ, ಸಾವೆಯ ಶಂಕರಪೋಳೆ, ಸಾವೆಯ ನಿಪ್ಪಟ್ಟು, ನವೆಣೆಯ ಹುರಕ್ಕಿ ಹೋಳಿಗೆ, ಸಿರಿಧಾನ್ಯದ ಹಪ್ಪಳ, ನವಣೆಯ ಶಾವಿಗೆ, ಹಪ್ಪಳ, ಕುಕ್ಕೀಸ್ ಸೇರಿವೆ.

ತಂತ್ರಜ್ಞಾನ ಪಡೆಯುವ ಬಗೆ

ಸಿರಿಧಾನ್ಯಗಳಿಂದ ಅಭಿವೃದ್ಧಿಗೊಂಡಿರುವ ಆಹಾರ ತಂತ್ರಜ್ಞಾನಗಳನ್ನು ಪಡೆಯುವ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಮೂರು ವರ್ಷಗಳ ಅವಧಿಗೆ ಕನಿಷ್ಠ ₹10ಸಾವಿರದಿಂದ ₹25ಸಾವಿರದವರೆಗೆ ಈ ತಂತ್ರಜ್ಞಾನ ಲಭ್ಯ. ಜತೆಗೆ ಇವುಗಳನ್ನು ಸಿದ್ಧಪಡಿಸಲು ಬೇಕಿರುವ ತರಬೇತಿಯನ್ನು ಪಡೆಯಲು ಪ್ರತ್ಯೇಕ ಶುಲ್ಕವಾಗಲಿದೆ.

ಆಸಕ್ತ ಉದ್ಯಮಿಗಳು, ಸ್ವಸಹಾಯ ಗುಂಪುಗಳು ಅಥವಾ ಇತರ ಸಂಘ ಸಂಸ್ಥೆಯವರು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ 0836–2214259

ಪೌಷ್ಟಿಕಾಂಶಗಳ ಆಗರ ಸಿರಿಧಾನ್ಯ

ಈ ಸಿರಿಧಾನ್ಯಗಳು ಪ್ರೊಟೀನ್ (ಶೇ 6.11) ಹಾಗೂ ಕೊಬ್ಬು (ಶೇ 15.5) ಹೊಂದಿವೆ.ಸಿರಿಧಾನ್ಯಗಳಲ್ಲಿನ ವಿಶಿಷ್ಟವಾದ ಪೋಷಕಾಂಶಗಳು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯವಾಗುತ್ತವೆ. ಹೆಚ್ಚಿನ ನಾರಿನಾಂಶ ನಿಧಾನವಾಗಿ ಜೀರ್ಣಸುವ ಶರ್ಖರಪಿಷ್ಠ ಹಾಗೂ ಉತ್ತಮ ಜೀವಸತ್ವವನ್ನು ಹೊಂದಿದೆ. ಮಲಬದ್ಧತೆ, ವಿಷ ವಸ್ತುಗಳನ್ನು ಹೊರಸೂಸುವ ರಕ್ತದಲ್ಲಿ ಸಕ್ಕರೆ ಪ್ರಮಾಣ ಹಾಗೂ ಕೊಬ್ಬಿನಾಂಶಗಳನ್ನು ಕಡಿತಗೊಳಿಸುವ ಕಾರ್ಯವನ್ನು ಮಾಡುತ್ತದೆ. ಗ್ಲುಟೆನ್ ಮುಕ್ತ ಧಾನ್ಯ ಇದಾಗಿರುವುದರಿಂದ ಗ್ಲುಟನ್ ಅಲರ್ಜಿಯಿಂದ ನರಳುವವರು ಇದನ್ನು ಬಳಸಿದರೆ ಉತ್ತಮ.

ಸುಲಭವಾಗಿ ಆಹಾರ ತಯಾರಿಸುವ ತಂತ್ರಜ್ಞಾನ

ಸಿರಿಧಾನ್ಯಗಳ ಸಂಸ್ಕರಣೆಗೆ ಸಾಂಪ್ರದಾಯಿಕ ವಿಧಾನಗಳಾದ ಮೊಳಕೆಯೊಡೆಸುವುದು, ಹುದುಗಿಸುವಿಕೆ, ಹುರಿಯುವುದು, ಫ್ಲೇಕಿಂಗ್ ಮತ್ತು ಕುಟ್ಟುವ ಮೂಲಕ ಬಳಕೆಯೋಗ್ಯವನ್ನಾಗಿಸಲಾಗುತ್ತದೆ. ಇವುಗಳಿಗೆ ದೈಹಿಕ ಶ್ರಮ ಅಗತ್ಯ. ಆದರೆ ಇದನ್ನೇ ಸುಲಭವಾಗಿ ಸಂಸ್ಕರಿಸಿ, ಉತ್ತಮ ಗುಣಮಟ್ಟದ ಹಿಟ್ಟನ್ನು ಜನರಿಗೆ ತಲುಪುವಂತೆ ಕೃಷಿ ವಿವಿ ಮಾಡಿದೆ. ರವೆ, ಅವಲಕ್ಕಿ ಶಾವಿಗೆ, ಪಾಸ್ತಾ, ಬಿಸ್ಕತ್ತು, ಬಹುಧಾನ್ಯಗಳ ಹಿಟ್ಟು ಸೇರಿದಂತೆ ವಿವಿಧ ಪದಾರ್ಥಗಳನ್ನು ಗ್ರಾಹಕರ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಸಿರಿಧಾನ್ಯಗಳನ್ನು ಹೆಚ್ಚು ಜನರು ಸ್ವೀಕರಿಸುವಂತೆ ತಯಾರಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT