ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಟಿ ಆಕ್ಸಿಡೆಂಟ್‌ ಆಗರಕಪ್ಪು ಜೀರಿಗೆ

Last Updated 18 ಜನವರಿ 2019, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಜೀವನಶೈಲಿಯಿಂದ ಬರುವ ಕಾಯಿಲೆಗಳು ಶರೀರವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಕಾಯಿಲೆ ಬರದಂತೆ ತಡೆಯುವುದು ಹೇಗೆ ಎಂಬುದರ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೌದು, ಕಾಯಿಲೆ ಬಂದ ಮೇಲೆ ವೈದ್ಯರು, ಔಷಧ ಎಂದು ಅಲೆದಾಡುವುದಕ್ಕಿಂತ ಆಹಾರ, ವ್ಯಾಯಾಮ, ಧ್ಯಾನದಂತಹ ಜೀವನಶೈಲಿ ಬದಲಾವಣೆಗಳನ್ನು ಅಳವಡಿಸಿಕೊಂಡು ಬಿಟ್ಟರೆ ಆರೋಗ್ಯಕರ ಬದುಕು ನಿಮ್ಮದಾಗಬಹುದು.

ಆಹಾರದಲ್ಲಿ ಸಂಬಾರು ಪದಾರ್ಥಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂಬಾರು ಪದಾರ್ಥ ಜೀರಿಗೆ ಬಹುತೇಕರಿಗೆ ಗೊತ್ತೇ ಇದೆ. ನಿತ್ಯ ಬಳಸುವ ಜೀರಿಗೆಯೂ ಸಾಕಷ್ಟು ಔಷಧ ಗುಣಗಳನ್ನು ಹೊಂದಿದೆ. ಆದರೆ ಕಪ್ಪು ಜೀರಿಗೆ ಅಥವಾ ಕಳೊಂಜಿ ಔಷಧಗಳ ಆಗರ ಎನ್ನಬಹುದು. ನೂರಾರು ವರ್ಷಗಳಿಂದ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತಿರುವ ಈ ಕಪ್ಪು ಜೀರಿಗೆ ಅಥವಾ ಕೃಷ್ಣ ಜೀರಿಗೆಗೆ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ, ಆ ಮೂಲಕ ರೋಗಗಳು ಬರಂದತೆ ತಡೆಯುವ ಶಕ್ತಿಯಿದೆ ಎಂಬುದು ಬಹಳ ಹಿಂದೆಯೇ ಸಾಬೀತಾಗಿದೆ. ಜೊತೆಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಮತ್ತು ಉಸಿರಾಟ ಸಮಸ್ಯೆಗೆ ಉತ್ತಮ ಮದ್ದಾಗಿದ್ದು, ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ ಗುಣ, ಉರಿಯೂತವನ್ನು ಹತ್ತಿಕ್ಕುವ ಗುಣ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಇದರ ಸಾರವನ್ನು ಬಳಸುವ ರೂಢಿ ಇದೆ. ರಕ್ತದೊತ್ತಡ ಕೆಲವರಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗುವುದು ಕಂಡು ಬರುತ್ತದೆ. ಇದಕ್ಕೆ ಎರಡು ತಿಂಗಳ ಕಾಲ ಇದನ್ನು ಸೇವಿಸಿದರೆ ಸಾಕು, ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ.

ಇದರಲ್ಲಿರುವ ಆರೋಗ್ಯಕರ ಕೊಬ್ಬು ಕೆಟ್ಟ ಮೇದಸ್ಸನ್ನು ಕಡಿಮೆ ಮಾಡಬಲ್ಲದು. ಇದರಲ್ಲಿರುವ ಲಿನೊಲಿಕ್‌ ಆಮ್ಲ ಮತ್ತು ಒಲಿಕ್‌ ಆಮ್ಲ ಉತ್ತಮ ಮೇದಸ್ಸಿನ ಮಟ್ಟವನ್ನು ಅಧಿಕಗೊಳಿಸುವ ಸಾಮರ್ಥ್ಯ ಹೊಂದಿವೆ.
ಸಂಧಿವಾತದ ಪರಿಣಾಮವನ್ನು ಕಡಿಮೆ ಮಾಡುವ ಉರಿಯೂತ ಪ್ರತಿರೋಧದ ಗುಣ ಇದರಲ್ಲಿದೆ. ಹಾಗೆಯೇ ಇದು ಆಸ್ತಮಾದ ದುಷ್ಪರಿಣಾಮವನ್ನು ಕಡಿಮೆ ಮಾಡಬಲ್ಲದು.

ಹೊಟ್ಟೆ ನೋವು, ಮುಟ್ಟಿನ ಸಂದರ್ಭದಲ್ಲಿ ಕೆಲವು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ನೋವನ್ನು ಕೂಡ ಇದು ಕಡಿಮೆ ಮಾಡಬಲ್ಲದು. ಬೀಜದ ಪುಡಿಯನ್ನು ಬಿಸಿ ನೀರಿನೊಂದಿಗೆ ಸೇವಿಸುವುದರಿಂದ ಹೊಟ್ಟೆಯುಬ್ಬರ, ವಾಯು ಹಾಗೂ ಆಮ್ಲೀಯತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಮಲಬದ್ಧತೆ ಕೂಡ ನಿವಾರಣೆಯಾಗುತ್ತದೆ. ಚರ್ಮದ ಕೆಲವು ಅಲರ್ಜಿಗೂ ಇದರ ಎಣ್ಣೆಯನ್ನು ಲೇಪಿಸಬಹುದು.

ಆದರೆ ಒಂದು ಅಂಶ ನೆನಪಿಡಿ. ಯಾವುದೇ ಔಷಧಕ್ಕೆ ಇದು ಪರ್ಯಾಯವಲ್ಲ. ವೈದ್ಯರು ಹೇಳುವ ಔಷಧವನ್ನು ಸಂಪೂರ್ಣ ನಿಲ್ಲಿಸಿ ಇದನ್ನು ಸೇವಿಸುವುದು ಒಳ್ಳೆಯದಲ್ಲ. ನಿತ್ಯ ಇದರ ಪುಡಿಯನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಂಡರೆ ಮೇಲೆ ಹೇಳಿದ ಹಾಗೆ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT