ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಾಂತ್ವನ | ಕಾಯಿಲೆಗೆ ಆತಂಕವೇ ಶತ್ರು

Last Updated 30 ಏಪ್ರಿಲ್ 2020, 3:26 IST
ಅಕ್ಷರ ಗಾತ್ರ

ಕೋವಿಡ್-19 ಮಾನವ ಕಂಡಿರುವ ಹೊಸ ಕಾಯಿಲೆ. ಹೀಗಾಗಿ ಜನಸಾಮಾನ್ಯರಲ್ಲಿ ಈ ಕಾಯಿಲೆ ಬಗ್ಗೆ ವಿಪರೀತ ಆತಂಕ/ ಭ್ರಮೆ ತಲೆದೋರಿದೆ. ಈ ತರಹದ ಆತಂಕ, ದುಗುಡ ಮತ್ತಿತರ ಮಾನಸಿಕ ಸಮಸ್ಯೆಗಳು ಕೋವಿಡ್–19 ರೋಗಿಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು.

ಈ ಸಮಸ್ಯೆಗಳ ಪರಿಹಾರಕ್ಕೆ ಕೆಲವು ಸಲಹೆಗಳನ್ನು ಪಾಲಿಸಬಹುದು.

* ನಿಮಗೆ ಜ್ವರ, ಶೀತ ಅಥವಾ ಹಸಿಕೆಮ್ಮ ಬಂತು ಎಂದುಕೊಳ್ಳಿ. ಇದು ಕೊರೊನಾ ಸೋಂಕಿನಿಂದಲೇ ಬಂದಿದೆ ಅಂತಲ್ಲ. ಇನ್ನೂ ಎಷ್ಟೋ ತರಹದ ವೈರಸ್‌ಗಳು ಈ ತರಹದ ಲಕ್ಷಣವನ್ನು ತರಬಲ್ಲವು. ನಿಮಗೆ ಸಂಶಯ ಬಂದಲ್ಲಿ ಆರೋಗ್ಯವಾಣಿ ಸಂಖ್ಯೆಗೆ (104 - 14410) ಕರೆಮಾಡಿ ಮಾರ್ಗಸೂಚಿಯನ್ನು ಅನುಸರಿಸಬಹುದು.

* ನಿಗದಿತ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ತಪಾಸಣೆಯ ನಂತರ ವೈದ್ಯರ ಸಲಹೆಯನ್ನು ಪಾಲಿಸಿ.

* ವೈದ್ಯರು ಕ್ವಾರಂಟೈನ್‌ಗೆ ಸಲಹೆ ನೀಡಬಹುದು. ಅದನ್ನು ಸರಿಯಾಗಿ ಪಾಲಿಸಿ. ಒಂದು ವೇಳೆ ಕೊರೊನಾ ಸೋಂಕು ಇರುವುದು ನಿಜವಾದರೆ ಗಾಬರಿಗೊಳ್ಳದಿರಿ. ಈ ಕಾಯಿಲೆ ಶೇ 80ರಷ್ಟು ವ್ಯಕ್ತಿಗಳಲ್ಲಿ ಸೌಮ್ಯಸ್ವಭಾವದ್ದು ಎಂಬುದನ್ನು ನೆನಪಿಡಿ. ಸುಮಾರು ಎರಡು ವಾರಗಳಲ್ಲಿ ಈ ಸೋಂಕಿನಿಂದ ಗುಣವಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ.

ಇನ್ನು ಆತಂಕಕ್ಕೆ ಕಾರಣವಾಗುವಂತಹ ಕೆಲವು ಅಂಶಗಳು ಹಾಗೂ ಅವುಗಳಿಂದ ಹೊರಬರುವ ಬಗೆಯನ್ನು ನೋಡೋಣ.

* ಕೋವಿಡ್-19 ರಿಂದ ಸಾವು ಖಚಿತವೇ?: ದಿನ ದಿನಕ್ಕೆ ಹೊರಬರುವ ಮಾಹಿತಿಯನ್ನು ನೋಡಿದಾಗ, ಈ ಕಾಯಿಲೆಯಿಂದಾಗುವ ಸಾವಿನ ಪ್ರಮಾಣ ಸುಮಾರು ಶೇ 3 - 4 ರಷ್ಟು ಮಾತ್ರ. ಮಿಕ್ಕ ಶೇ 96ರಷ್ಟು ಜನ ಸಾಯೋದಿಲ್ಲ ಎಂಬುದನ್ನು ಮನಗಾಣಿ.

* ಇದರ ಅಪಾಯಕಾರಿ ಲಕ್ಷಣ ಎಂದರೆ ಉಸಿರಾಟದ ತೊಂದರೆ: ನಿಮಗೆ ಉಸಿರಾಟದ ತೊಂದರೆ ಇಲ್ಲದೆ ಇದ್ದಲ್ಲಿ, ನೀವು ತಕ್ಕಮಟ್ಟಿಗೆ ಸುರಕ್ಷಿತ. ಒಂದು ವೇಳೆ ಉಸಿರಾಟದ ತೊಂದರೆ ಬಂದಲ್ಲಿ ವೆಂಟಿಲೇಟರ್ ಸಹಾಯ ಬೇಕಾಗಬಹುದು. ಆದರೆ ವೆಂಟಿಲೇಟರ್‌ ಹಾಕಿಕೊಳ್ಳಬೇಕಾದ ಸಂದರ್ಭ ಬಂದವರೆಲ್ಲ ಸಾವಿಗೀಡಾಗಬಹುದು ಎಂಬ ಭಯವನ್ನು ಮನಸ್ಸಿನಿಂದ ತೆಗೆದು ಹಾಕಿ.

* ಸಾಮಾನ್ಯ ಜನರು ಕ್ವಾರಂಟೈನ್‌ನಲ್ಲಿ ವಾಸಮಾಡಲು ಸಾಧ್ಯವಿಲ್ಲ; ಹೀಗಾಗಿ ಒಂಟತನವನ್ನು ನೀಗುವುದು ಸ್ವಲ್ಪ ಕಷ್ಟ ಎಂಬ ತಪ್ಪು ಅಭಿಪ್ರಾಯವನ್ನು ಬಿಡಿ. ತಂತ್ರಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ, ಎರಡು ವಾರಗಳ ಸಮಯ ಕಳೆಯಲು ಬಹಳಷ್ಟು ಮಾರ್ಗಗಳಿವೆ. ಅವುಗಳನ್ನು ಅನುಸರಿಸಿ. ಯಾವುದಕ್ಕೂ ಸಂಯಮ ಮುಖ್ಯ.

* ವಿಶ್ರಾಂತಿ, ನಿದ್ದೆ ಹಾಗೂ ಪೌಷ್ಟಿಕ ಆಹಾರ ಬಹಳ ಅಗತ್ಯ. ಇವೆಲ್ಲವನ್ನೂ ನಿಯಮಿತವಾಗಿ ಮಾಡುವುದರಿಂದ ಸೋಂಕಿನಿಂದ ಬೇಗ ಹೊರಬರಬಹುದು.

* ಸಾದ್ಯವಾದರೆ ದಿನಕ್ಕೆ 5– 10 ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮ ಕೈಗೊಳ್ಳಿ, ನಿಧಾನವಾದ ಉಸಿರಾಟ ಹಾಗೂ ಅದರಿಂದ ಮಾಂಸಖಂಡಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಗಮನ ಕೊಡಿ.

* ಇತ್ತೀಚಿಗೆ ಗುಣಮುಖರಾದ ವ್ಯಕ್ತಿಗಳ ಸಂದರ್ಶನಗಳು ಟಿವಿ, ಪತ್ರಿಕೆಯಂತಹ ಮಾಧ್ಯಮಗಳಲ್ಲಿ ಬರುತ್ತವೆ. ಅವುಗಳನ್ನು ಗಮನಿಸಿ. ಮನಸ್ಸಿಗೆ ಸಮಾಧಾನವಾಗುತ್ತದೆ.

* ಫೋನ್ ಮೂಲಕ ನಿಮ್ಮ ಸ್ನೇಹಿತರು, ಕುಟುಂಬದ ಸದಸ್ಯರ ಬಳಿ ಮಾತನಾಡಿ. ಅವರಿಗೂ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ.

* ಆತಂಕ/ ದುಗುಡ/ ನಿದ್ರಾಹೀನತೆ ಮೊದಲಾದ ಸಮಸ್ಯೆಗಳಿಗೆ ನಿಮ್ಮ ವೈದ್ಯರು/ ದಾದಿಯರ ಬಳಿ ಹೇಳಿಕೊಂಡು ಸಹಾಯ ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT