ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದಲ್ಲಿದೆ ಆರೋಗ್ಯದ ಗುಟ್ಟು

Last Updated 22 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

‘ವೈದ್ಯರು ಇದ್ದೂ ರೋಗಿ ಬದುಕಿಕೊಂಡೇಬಿಟ್ಟ’ ಎನ್ನುವವ್ಯಂಗ್ಯದ ಮಾತಿದೆ.

ಇಬ್ಬರು ವೈದ್ಯರು ಕೆಲವು ದಿನ ಊರು ಬಿಟ್ಟು ಹೋದವರು ಪ್ರಯಾಣ ಮುಗಿಸಿ ತಿರುಗಿ ಊರಿಗೆ ಬರುವಾಗ ಅಲ್ಲಿ ಶವಸಂಸ್ಕಾರವಾಗುತ್ತಿದ್ದುದನ್ನು ಕಂಡು ಅವರು ಹೀಗೆ ಮಾತನಾಡಿಕೊಳ್ಳುವುದನ್ನು ಸಂಸ್ಕೃತ ಸುಭಾಷಿತವೊಂದು ಹೀಗೆ ಹೇಳಿದೆ: ಇಬ್ಬರೂ ಊರಲ್ಲಿಲ್ಲದಿದ್ದಾಗ ಇವನು ಸತ್ತದ್ದಾದರೂ ಹೇಗೆ?

ಇವಾನ್ ಇಲಿಯಿಚ್ ತನ್ನ ‘ಲಿಮಿಟ್ಸ್ ಟು ಮೆಡಿಸನ್’ ಎನ್ನುವ ಪುಸ್ತಕದಲ್ಲಿ ಆರೋಗ್ಯವನ್ನು ವೈದ್ಯಕೀಯ ಉದ್ಯಮದಿಂದ ವಿಮುಕ್ತಗೊಳಿಸಬೇಕೆಂದು ಪ್ರತಿಪಾದಿಸುತ್ತಾನೆ.

ಭಾರತ ಸ್ವಾತಂತ್ರ್ಯಗೊಂಡ ನಂತರ ಆರೋಗ್ಯನೀತಿಗಾಗಿ ಭೋರ್ ಕಮಿಟಿಯನ್ನು ನೇಮಿಸಿತ್ತು. ಇಲ್ಲಿನ ಜಾನಪದ ಪರಂಪರೆ, ಆಯುರ್ವೇದ, ಯೋಗ ಮತ್ತು ಹತ್ತು ಹಲವು ಸ್ಥಳೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಆರೋಗ್ಯ ಆಯಾಮಗಳನ್ನು ಬದಿಗೊತ್ತಿ ಆರೋಗ್ಯವನ್ನು ಸಂಪೂರ್ಣವಾಗಿ ಪಾಶ್ಚಾತ್ಯ ಆರೋಗ್ಯ ವ್ಯವಸ್ಥೆಗೆ ವೈದ್ಯಕೀಕರಣಗೊಳಿಸಿದ್ದು ಅನೇಕ ಅಪಾಯಗಳನ್ನು ತಂದೊಡ್ಡಿತು ಎನ್ನುವುದು ಹಲವರ ಅಭಿಪ್ರಾಯ.

ಇಂದು ಮನುಷ್ಯರ ಕಾಯಿಲೆಗಳ ಸಂಖ್ಯೆಯನ್ನು ಸುಮಾರು ಹತ್ತು ಸಾವಿರವೆಂದು ಗುರುತಿಸಲಾಗಿದೆ. ಅಪರೂಪದ ಮತ್ತು ತಬ್ಬಲಿ ಕಾಯಿಲೆಗಳು ಎನ್ನುವ ಪಟ್ಟಿಯನ್ನೂ ಇಟ್ಟುಕೊಂಡರೆ ಸುಮಾರು 30 ಸಾವಿರ ಕಾಯಿಲೆಗಳು ಇರಬಹುದೆಂದು ಜರ್ಮನಿಯ ಆರೋಗ್ಯ ಸಂಸ್ಥೆಗಳು ಹೇಳುತ್ತವೆ. ಆಧುನಿಕ ವೈದ್ಯಕೀಯ ಪದ್ಧತಿಯ ಪ್ರಕಾರ ಲಸಿಕೆಗಳಿಂದ ತಡೆಗಟ್ಟಬಹುದಾದ ಕಾಯಿಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಕೇವಲ 27 ಎಂದು ಪರಿಗಣಿಸಿದೆ. ಕೋವಿಡ್-19ನ್ನು ಗೆದ್ದರೆ 28 ಆಗಬಹುದು. ಇನ್ನುಳಿದ ಸಾವಿರಾರು ಕಾಯಿಲೆಗಳನ್ನು ಹೆಚ್ಚಾಗಿ ಜೀವನಶೈಲಿಯ ಕಾಯಿಲೆಗಳೆಂದೇ ಪರಿಗಣಿಸಲಾಗಿದೆ. ಅವುಗಳಲ್ಲಿ ಮಧುಮೇಹ, ರಕ್ತದೊತ್ತಡ, ಹೃದ್ರೋಗ, ಸ್ಥೂಲಕಾಯ ಇಂದಿನ ನಾಗರಿಕ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳು. ಇವುಗಳನ್ನು ತಡೆಗಟ್ಟುವ ಲಸಿಕೆಗಳಿಲ್ಲ. ಔಷಧಿಗಳಿಂದ ನಿರ್ವಹಣೆ ಮಾಡಲಾಗುತ್ತಿದೆ. 40 ವರ್ಷಕ್ಕೆ ಮಧುಮೇಹ ಬಂದರೆ ಸುಮಾರು 10 ಲಕ್ಷಗಳಷ್ಟು ಔಷಧಿಯ ಖರ್ಚು ಬೀಳಬಹುದೆಂದು ಅಂದಾಜು.

ಉತ್ತಮ ಆಹಾರದಿಂದ ಸಾವಿರಾರು ಕಾಯಿಲೆಗಳನ್ನು ತಡೆಗಟ್ಟಬಹುದಲ್ಲದೆ, ಲಕ್ಷಾಂತರ ಕೋಟಿ ರೂಪಾಯಿ ಆರ್ಥಿಕ ಹೊರೆಯನ್ನೂ ಇಳಿಸಬಹುದು. ಇಂದಿನ ದಿನಗಳಲ್ಲಿ ಆಹಾರವನ್ನು ಅತ್ಯಂತ ಹೆಚ್ಚು ಸಂಸ್ಕರಿಸಿ ಹಲ್ಲಿಗೆ, ಹೊಟ್ಟೆಗೆ, ಕರುಳಿಗೆ ಕೆಲಸವಿಲ್ಲದಂತೆ ಮಾಡಿ, ದೇಹವನ್ನು ಕಾಯಿಲೆಗಳ ಆಗರವನ್ನಾಗಿ ಮಾಡಿಕೊಂಡಿದ್ದೇವೆ ಎನ್ನುತ್ತಾನೆ ಡೇವಿಡ್ ಕೆಸ್ಲರ್ ತನ್ನ ‘ಫಾಸ್ಟ್ ಕಾರ್ಬ್ಸ್, ಸ್ಲೋ ಕಾರ್ಬ್ಸ್’ ಎನ್ನುವ ಪುಸ್ತಕದಲ್ಲಿ. ಆದರೂ ಸಹ ವೈದ್ಯಕೀಯ ವ್ಯವಸ್ಥೆ OPIUM ರೀತಿಯಲ್ಲಿ HOPIUM ಬಳಸಿ ತನ್ನ ಸ್ಥಾನವನ್ನು ಭದ್ರಮಾಡಿಕೊಂಡಿದೆ.

ಸ್ಟಾನ್ಫರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ‘ಜಾಆಸ್’ ಎನ್ನುವ ಪುಸ್ತಕದಲ್ಲಿ ಕಳೆದ ಮೂರು ಪೀಳಿಗೆಯಿಂದ ಹಲ್ಲಿಗೆ ಕೆಲಸವಿಲ್ಲದೆ ದವಡೆಗಳು ಸರಿಯಾಗಿ ಕೂಡದೇ ಮೂತಿ ಮುಂದಕ್ಕೆ ಬಂದು ವಿನ್ಯಾಸವೇ ಬದಲಾಗಿರುವ ಚಿತ್ರಣವನ್ನು ಹೊರಹಾಕಿದೆ. ಇದನ್ನು ‘ಮಾಲ್ ಅಕ್ಲ್ಯೂಷನ್’ ಎನ್ನುತ್ತಾರೆ. ಇದಕ್ಕೆ ಯಾವ ವೈದ್ಯಕೀಯ ತಂತ್ರ-ಯಂತ್ರಗಳೂ ಸಹ ಕೆಲಸಕ್ಕೆ ಬರುವುದಿಲ್ಲ. ಹಲ್ಲಿಗೆ ಸರಿಯಾಗಿ ಕೆಲಸಕೊಡುವುದೊಂದೇ ಪರಿಹಾರ.

ಇಂದು ಆಹಾರದಲ್ಲಿ ನಾರಿನ ಕೊರತೆಯಿಂದ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತಿರುವುದನ್ನು ವಿಜ್ಞಾನ ಹೆಚ್ಚು ಹೆಚ್ಚು ಹೊರಹಾಕುತ್ತಿದೆ. ಅಲ್ಝೆಮರ್ಸ್ ಎನ್ನುವ ಮರೆವಿನ ಕಾಯಿಲೆ, ಪಾರ್ಕಿನ್ಸನ್ಸ್, ಒಸಡಿನ ಸೋಂಕಿನಿಂದ ಆರ್ಥರೈಟಿಸ್ ಕೂಡ ಉಂಟಾಗುತ್ತದೆ ಎಂದು ಕಂಡುಕೊಳ್ಳಲಾಗುತ್ತಿದೆ. ನೆಪೋಲಿಯನ್ ಸೈನ್ಯ ಹೊಟ್ಟೆಯ ಮೇಲೆ ಸಾಗುತ್ತದೆ ಎಂದು ಆಹಾರದ ಪ್ರಾಮುಖ್ಯವನ್ನು ಅರಿತುಕೊಂಡು ರೂಪಕವಾಗಿ ಹೇಳಿದ್ದಾರೆ. ಇಂದು ಪರಿಪೂರ್ಣ ಆರೋಗ್ಯ ಹೊಟ್ಟೆಯ ಮೇಲೆ ನಿಂತಿದೆ ಅಥವಾ ಅನೇಕ ರೋಗರುಜಿನಗಳ ಹುಟ್ಟು ಹೊಟ್ಟೆಯೇ ಆಗಿದೆ ಎನ್ನಬಹುದು!

ಇತ್ತೀಚೆಗೆ ‘ನ್ಯೂ ಸೈಂಟಿಸ್ಟ್’ ನಿಯತಕಾಲಿಕ ಶೇಕಡಾ 99ರಷ್ಟು ಆಹಾರದ ವಿಷಯ ಇನ್ನೂ ನಮಗೆ ನಿಗೂಢ ಎನ್ನುವ ಮುಖಪುಟಲೇಖನವನ್ನು ಪ್ರಕಟಿಸಿತ್ತು. ನಾವು ಆಹಾರದ ವೈವಿಧ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ವೈವಿಧ್ಯ ಎಂದರೆ ತಿಳಿದಿರುವ ಮತ್ತು ತಿಳಿಯಬೇಕಾಗಿರುವ ಅಂಶಗಳ ಸಂಹಿತೆ.

ಥಾಮಸ್ ಆಲ್ವಾ ಎಡಿಸನ್ ಹೀಗೆಂದಿದ್ದ:The future doctor should focus on wellness not illness – ಭವಿಷ್ಯದ ವೈದ್ಯನು ಗಮನ ಹರಿಸಬೇಕಾದ್ದು ಕಾಯಿಲೆಯ ಬಗ್ಗೆ ಅಲ್ಲ, ಕ್ಷೇಮಕುಶಲದ ಬಗ್ಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT