ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲೇ ಸನ್ಮಾನಕ್ಕೆ ಮೆಟ್ಟಿಲು

Published 29 ಜುಲೈ 2023, 0:20 IST
Last Updated 29 ಜುಲೈ 2023, 0:20 IST
ಅಕ್ಷರ ಗಾತ್ರ

ಸೂಕ್ಷ್ಮ ಮನಸ್ಸು, ಅಂಜಿಕೆ ಮತ್ತು ಹಠದ ಸ್ವಭಾವದ ಮಕ್ಕಳು ಸಣ್ಣ ಸಣ್ಣ ವಿಚಾರಗಳಿಗಾಗಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಇಂಥವರಿಗೆ ಸಮಾಜವನ್ನು ಎದುರಿಸುವ ಪಾಠ ಕಲಿಸಬೇಕಿದೆ. ಜೀವನದ ಹಾದಿಯಲ್ಲಿ ಎದುರಾಗುವ ಅವಮಾನ, ಸೋಲು ಅಂತಿಮವಲ್ಲ. ಅವೆಲ್ಲ ಬದುಕು ಕೊಡುವ ದೊಡ್ಡ ಕಾಣ್ಕೆಗಳು ಎಂಬುದನ್ನು ಪದೇ ಪದೇ ಮನವರಿಕೆ ಮಾಡಬೇಕಿದೆ.

ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಎನ್ನುವ ಆರೋಪ ಎದುರಿಸಿದ ವಿದ್ಯಾರ್ಥಿಯೊಬ್ಬ ಕಾಲೇಜಿನ ಕಟ್ಟಡದಿಂದ ಬಿದ್ದು ಜೀವ ಕಳೆದುಕೊಂಡ. ಕೆಲಸ ಹಾಗೂ ವಿದ್ಯಾಭ್ಯಾಸದ ಒತ್ತಡ ನಿಭಾಯಿಸಲಾಗದೆ ವೈದ್ಯ ವಿದ್ಯಾರ್ಥಿನಿಯೊಬ್ಬಳು ಒತ್ತಾಯಪೂರ್ವಕವಾಗಿ ಉಸಿರು ನಿಲ್ಲಿಸಿದಳು. ಅಂಕಗಳು ಕಡಿಮೆ ಬಂದಿರುವುದಕ್ಕೆ, ಬೈದರು ಅಥವಾ ಕೇಳಿದ್ದು ಸಿಗಲಿಲ್ಲ ಎಂಬ ಕಾರಣಕ್ಕೆ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ವರದಿಗಳು ಆಗುತ್ತಲೇ ಇವೆ.

ಆತ್ಮಹತ್ಯೆ ಎಂಬುದು ಮನುಷ್ಯನ ಬಹುದೊಡ್ಡ ದುರ್ಬಲಗಳಿಗೆಯಲ್ಲಿ ಸಂಭವಿಸುವಂಥದ್ದು. ಒಂದು  ಆತ್ಮಹತ್ಯೆಯ ಹಿಂದೆ ಹಲವಾರು ಕಾರಣಗಳಿದ್ದರೂ ಅದರತ್ತ ಸೆಳೆತ ಶುರುವಾಗುವುದು ಮಾತ್ರ ಮನಸ್ಸು ಸೂಕ್ಷ್ಮವಾಗಿದ್ದಾಗ.  

ನೋಡಲು ಬಹಳ ದೃಢಮನಸ್ಸಿನವರಂತೆ, ಎಲ್ಲವನ್ನೂ ಎದುರಿಸುವವರಂತೆ ಕಾಣುವ ಮಕ್ಕಳು ಕೆಲವೊಮ್ಮೆ  ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಬಹುಸೂಕ್ಷ್ಮ ಮನಸ್ಸಿನ ಮಕ್ಕಳಲ್ಲಿ ಈ ಪ್ರವೃತ್ತಿ ತುಸು ಹೆಚ್ಚೇ ಇರುತ್ತದೆ.

ಆತ್ಮಹತ್ಯೆಗೆ ಕಾರಣಗಳು ಹಲವು. ಮನಸ್ಸು ಒಂದು ಓಘದಲ್ಲಿದ್ದು, ಅದು ಬದುಕಿನ ಎಲ್ಲ ಒತ್ತಡ, ಆತಂಕ, ದುಗುಡಗಳನ್ನು ಅರಗಿಸಿಕೊಂಡು ಅರಳುವುದಕ್ಕೆ ಬಿಡದಿರುವುದರಲ್ಲಿಯೇ ಸಮಸ್ಯೆ ಇದೆ ಎಂದು ಕಾಣುತ್ತದೆ. ಮನಸ್ಸು ವ್ಯಗ್ರಗೊಂಡು, ತಾ ಹೇಳಿದ್ದೇ ಆಗಬೇಕು ಎಂದು ಇಚ್ಛಿಸಿ, ಅದು ಈಡೇರದಿದ್ದಾಗ ಪ್ರಾಣ ಕಳೆದುಕೊಂಡ ಮಕ್ಕಳೂ ಇದ್ದಾರೆ. ಹಾಗಾಗಿ ಆತ್ಮಹತ್ಯೆಯನ್ನು ವಿಶ್ಲೇಷಿಸುವಾಗ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಸಾಮಾಜಿಕ ಒತ್ತಡ

ಅಂಕ, ಪರೀಕ್ಷೆ, ಉತ್ತಮ ಸಂಬಳ, ಒಳ್ಳೆಯ ಹುದ್ದೆ, ವೃತ್ತಿ ಹಾಗೂ ಮದುವೆಯ ಯಶಸ್ಸು, ಮಕ್ಕಳ ಓದು ಹೀಗೆ ಇವೆಲ್ಲವೂ ಯಶಸ್ಸಿನ ಮಾನದಂಡಗಳಾಗುತ್ತಿದ್ದಂತೆ ಸಾಮಾಜಿಕ ಒತ್ತಡವೂ ಹೆಚ್ಚಿದೆ. ಅದರಲ್ಲಿಯೂ ಶಾಲೆ ಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸ್ಪರ್ಧಾ ಜಗತ್ತಿನಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ದೊಡ್ಡ ಹೋರಾಟ ನಡೆಸುತ್ತಿರುತ್ತಾರೆ. ಇವೆಲ್ಲವನ್ನು ಗಮನಿಸಿ, ಆಯಾ ಕಾಲಕ್ಕೆ ಮನಸ್ಸಿಗೆ ಸಾಂತ್ವನ ಹೇಳುವವರು ಇಲ್ಲದೇ ಹೋದರೆ ಮನಸ್ಸು ಮತ್ತಷ್ಟು ಕುಗ್ಗುತ್ತದೆ. 

ಮಿದುಳಿನ ಸಮಗ್ರ ಬೆಳವಣಿಗೆಗೆ ಅಗತ್ಯವಾಗಿರುವ ದೈಹಿಕ ಆಟಗಳಿಗಾಗಿ ಮಕ್ಕಳಿಗೆ ಸಮಯ ಮತ್ತು ಅವಕಾಶಗಳಿಲ್ಲ. ಭಾವನಾತ್ಮಕ ಏರುಪೇರುಗಳನ್ನು ನಿಭಾಯಿಸಲು ಅನಿವಾರ್ಯವಾದ ಮನುಷ್ಯ ಸಂಪರ್ಕಕ್ಕಿಂತ ಮೊಬೈಲ್‌ ಕಂಪ್ಯೂಟರ್‌ಗಳೊಡನೆ ಮಕ್ಕಳ ಒಡನಾಟ ಹೆಚ್ಚಾಗಿದೆ. ಎಲ್ಲರನ್ನೂ ಮೆಚ್ಚಿಸುವ ಉದ್ದೇಶ ಮಾತ್ರ ಹೊಂದಿರುವ ಸಾಮಾಜಿಕ ಮಾಧ್ಯಮಗಳ ಬಳಕೆ ಮನುಷ್ಯ ಸಂಪರ್ಕದ ಭಾವನಾತ್ಮಕ ಹಸಿವನ್ನು ನೀಗಿಸುತ್ತಿಲ್ಲ. ಇವೆಲ್ಲವುಗಳಿಂದಾಗಿ ಮಕ್ಕಳ ಮಿದುಳಿನ ಸಮತೋಲನ ಬೆಳವಣಿಗೆ ಆಗುತ್ತಿಲ್ಲ ಎನ್ನುವುದು ನರವಿಜ್ಞಾನಿಗಳ ಅಭಿಪ್ರಾಯ.  

ಮಕ್ಕಳ ಪ್ರಾಥಮಿಕ ಅಗತ್ಯಗಳೇನು?

ಮಗು ಜನಿಸುವಾಗ ಮಿದುಳಿನ ಬೆಳವಣಿಗೆ ಪ್ರಾಥಮಿಕ ಹಂತದಲ್ಲಿದ್ದು ಇದರ ಸಂಪೂರ್ಣ ಬೆಳವಣಿಗೆ ಯಾಗುವುದು ಸುಮಾರು 25ನೆಯ ವಯಸ್ಸಿಗೆ ಎನ್ನುವುದು ವೈಜ್ಞಾನಿಕವಾಗಿ ಸಿದ್ಧವಾಗಿರುವ ಸತ್ಯ.

ಕೇವಲ ಮಿದುಳಿನ ಅಂಗಾಂಗಗಳ ಬೆಳವಣಿಗೆಯಾದರೆ ಮಿದುಳು ಸಮರ್ಥವಾಗಿ ಕಾರ್ಯನಿರ್ವಹಿಸುವುದಿಲ್ಲ. ಮಿದುಳಿನ ಸಮರ್ಥವಾದ ಬಳಕೆಗೆ ನ್ಯೂರಾನ್‌ಗಳ (ಮಿದುಳಿನ ಜೀವಕೋಶಗಳು) ಸಂಪರ್ಕಜಾಲ ಸೃಷ್ಟಿಯಾಗುವ ಅಗತ್ಯವಿದೆ. ಇಂತಹ ಎಲ್ಲಾ ಸಂಪರ್ಕಜಾಲಗಳ ಸರಿಯಾದ ಬೆಳವಣಿಗೆ ಬಾಲ್ಯದ 8 ರಿಂದ 10 ವರ್ಷಗಳಲ್ಲಿ ಕೌಟುಂಬಿಕ ಪರಿಸರದಲ್ಲಿ ದೊರೆಯುವ ಅನುಭಗಳ ಮೇಲೆ ಆಗುತ್ತದೆ. ಕೌಟುಂಬಿಕ ಪರಿಸರದಲ್ಲಿ ದೊರೆಯುವ ಅನುಭವದ ಆಧಾರದ ಮೇಲೆ ಮಕ್ಕಳು ಜಗತ್ತನ್ನು ನೋಡುವ ದೃಷ್ಟಿಕೋನ, ಸಂಬಂಧಗಳನ್ನು ರೂಪಿಸಿಕೊಳ್ಳುವ ಕೌಶಲ, ಒತ್ತಡವನ್ನು ನಿಭಾಯಿಸುವ ಕ್ಷಮತೆ ಯನ್ನು ಪಡೆದುಕೊಳ್ಳುತ್ತಾರೆ. ‌

ಬಾಲ್ಯದಲ್ಲಿ ಸಂಪರ್ಕಜಾಲಗಳ ಬೆಳವಣಿಗೆಗೆ ಅಗತ್ಯವಿರುವ ವಾತಾವರಣ ದೊರಕದಿದ್ದರೆ ಅದರ ದುಷ್ಪರಿಣಾಮಗಳು ಜೀವನಪರ್ಯಂತ ಉಳಿಯುವ ಸಾಧ್ಯತೆಗಳಿರುತ್ತವೆ. ಆತ್ಮಹತ್ಯೆಗೆ ಶರಣಾಗುವ ಮಕ್ಕಳಲ್ಲಿ ಒತ್ತಡವನ್ನು ನಿಭಾಯಿಸುವ, ಸೋಲನ್ನು ಸಹಿಸಿಕೊಂಡು ಮುನ್ನಡೆಯುವ ಕ್ಷಮತೆಯ ಕೊರತೆಯಿರುತ್ತದೆ.

ಪೋಷಕರು ಮಾತ್ರ ದೋಷಿಗಳಲ್ಲ

ಮಕ್ಕಳ ಬೆಳವಣಿಗೆಗೆ ಸೂಕ್ತ ಕೌಟುಂಬಿಕ ಪರಿಸರ ದೊರಕದಿರುವುದಕ್ಕೆ ಪೋಷಕರು ಮಾತ್ರ ದೋಷಿಗಳಲ್ಲ. ಕಳೆದ 50-60 ವರ್ಷಗಳಲ್ಲಿ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಗಳ ವೇಗವನ್ನು ನಿಭಾಯಿಸಲು ಅವರೂ ಕಷ್ಟಪಡುತ್ತಿದ್ದಾರೆ.

ದುಡಿಯುವ, ಕುಟುಂಬವನ್ನು ನಿಭಾಯಿಸುವ ಒತ್ತಡಗಳಲ್ಲಿ ಇರುವ ಪೋಷಕರಿಗೆ ಮಕ್ಕಳಿಗೆ ಅಗತ್ಯವಾದ ಸಮಯ, ಮಾನಸಿಕ ಬೆಂಬಲ ಕೊಡಲಾಗುತ್ತಿಲ್ಲ. ಅವರಿಗೆ ಸೂಕ್ತ ಮಾರ್ಗದರ್ಶನವೂ ದೊರಕುತ್ತಿಲ್ಲ. ಶೈಕ್ಷಣಿಕ ವ್ಯವಸ್ಥೆ ಅಂಕಗಳು, ರ‍್ಯಾಂಕ್‌ಗಳು, ಉನ್ನತ ಉದ್ಯೋಗಗಳು ಮುಂತಾದ ಉದ್ದೇಶಗಳಿಗಾಗಿ ಮಾತ್ರ ಮೀಸಲಾಗಿದೆ. ಇವೆಲ್ಲದರ ಪರಿಣಾಮವಾಗಿ ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ. ಆದರೆ, ಇದೆಲ್ಲದಕ್ಕೂ ನಮ್ಮೊಳಗೆ ಪರಿಹಾರವಿದೆ, ಅದನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ.

ಪೋಷಕರ ಜವಾಬ್ದಾರಿ ಏನು?

1  ಎಲ್ಲಾ ವಯಸ್ಸಿನ ಮಕ್ಕಳ ಜೊತೆ ಆತ್ಮೀಯ ಬಾಂಧವ್ಯವನ್ನು ಇಟ್ಟುಕೊಳ್ಳುವುದು ಪೋಷಕರ ಮೊದಲ ಗುರಿಯಾಗಬೇಕು. ‘ನಿನ್ನ ಅಂಕಗಳು ಕಡಿಮೆಯಾಗುವುದು ನಮ್ಮಿಬ್ಬರ ಪ್ರೀತಿಗೆ ಅಡ್ಡಿಯಾಗುವುದಿಲ್ಲ’ ಎನ್ನುವ ಸಂದೇಶ ಮಕ್ಕಳಿಗೆ ತಲುಪಬೇಕು.

2 ತಮ್ಮ ಭಾವನಾತ್ಮಕ ಏರಿಳಿತಗಳನ್ನು ನಿಭಾಯಿಸಲಾಗದ ಪೋಷಕರು ಮಕ್ಕಳಿಗೆ ಕೆಟ್ಟ ಮಾದರಿಯನ್ನು ಒದಗಿಸುತ್ತಾರೆ. ಹಾಗಾಗಿ ಪೋಷಕರು ತಮ್ಮ ಆತಂಕ ಒತ್ತಡಗಳನ್ನು ನಿಭಾಯಿಸಲು ಕಲಿಯಬೇಕು. ಅಗತ್ಯವಿದ್ದರೆ ತಜ್ಞರ ಸಹಾಯ ಪಡೆಯಬೇಕು.

3 ಮಕ್ಕಳ ಸೋಲುಗಳನ್ನು ದೊಡ್ಡ ಅಪರಾಧವೆಂಬಂತೆ ಬಿಂಬಿಸಬಾರದು. ಅವರ ಸೋಲುಗಳಿಗೆ ಸಿಟ್ಟು ಉಪದೇಶ, ಹೋಲಿಕೆ ಮುಂತಾದವುಗಳಿಂದ ಪ್ರತಿಕ್ರಿಯೆ ತೋರಿಸುವುದು ಪೋಷಕರೇ ಆತಂಕಕ್ಕೆ ಒಳಗಾಗಿರುವ ಸೂಚನೆಗಳು. ‘ಪ್ರಯತ್ನವನ್ನು ಮುಂದುವರೆಸು, ನಿನ್ನ ಬೆಂಬಲಕ್ಕೆ ನಾವಿದ್ದೇವೆ’ ಎನ್ನುವ ಭರವಸೆ ಮಾತ್ರ ಅತ್ಯಗತ್ಯ.

4 ಶಾಲಾ ಪರಿಸರ, ಪರೀಕ್ಷೆಗಳು ಸ್ಪರ್ಧಾತ್ಮಕ ವಾತಾವರಣ ಮುಂತಾದವು ಮಕ್ಕಳ ಮೇಲೆ ಎಂತಹ ಪ್ರಭಾವ ಬೀರುತ್ತಿವೆ ಎನ್ನುವುದು ಪೋಷಕರಿಗೆ ತಿಳಿದಿರಬೇಕು. ಮಕ್ಕಳ ಮಾತು ವರ್ತನೆ, ಆಹಾರದ ಅಭ್ಯಾಸಗಳು, ನಿದ್ದೆ, ಸ್ನೇಹಿತರ ಒಡನಾಟ, ಮೊಬೈಲ್‌ ಬಳಕೆ ಇವೆಲ್ಲವುಗಳಲ್ಲಿ ಮಕ್ಕಳ ಮಾನಸಿಕ ಸ್ಥಿತಿಯ ಸೂಚನೆಯಿರುತ್ತದೆ. ಇವೆಲ್ಲವುಗಳು ಸಹಜವಾಗಿಲ್ಲ ಎನ್ನಿಸಿದಾಗ ತಜ್ಞರ ಸಹಾಯ ಪಡೆಯಬೇಕು.

5 ಎಲ್ಲಕ್ಕಿಂತ ಪ್ರಮುಖವಾಗಿ ಪೋಷಕರು ತಮ್ಮದೇ ಮೊಬೈಲ್‌ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯ ಕುರಿತು ಎಚ್ಚರವಹಿಸಬೇಕು. ಪೋಷಕರು ಒದಗಿಸುವ ಕೆಟ್ಟ ಮಾದರಿಗಳು ಅವರು ಕೊಡುವ ಸೌಲಭ್ಯಗಳು, ಶಿಸ್ತಿನ ತರಬೇತಿ, ಬುದ್ಧಿವಾದಗಳಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ.

ಇದಕ್ಕೆಲ್ಲ ಪರಿಹಾರ ಏನು ?

ಅಂಜುಬುರುಕತನ ಇರುವ, ಬಹುಬೇಗ ಅವಮಾನಕ್ಕೆ ಒಳಗಾಗುವ ಸೂಕ್ಷ್ಮ ಮಕ್ಕಳು ಆತ್ಮಹತ್ಯೆಯಂತಹ ಕೃತ್ಯದತ್ತ ಯೋಚಿಸುತ್ತಾರೆ. ಒತ್ತಡ ತಡೆಯುವ ಶಕ್ತಿಯಿಲ್ಲದ ಹಾಗೂ ಹಠ ಪವೃತ್ತಿಯಿರುವ, ಹೇಗಾದರೂ ಪೋಷಕರ ಗಮನ ಸೆಳೆಯಬೇಕೆಂದು ಹಪಾಹಪಿಸುವ ಮಕ್ಕಳು ಇಂಥ ‘ನಕಾರಾತ್ಮಕ‘ ಚಿಂತನೆ ಮಾಡುತ್ತಾರೆ. ಹಾಗಾದರೆ ಇಂಥ ಸಮಸ್ಯೆಗಳಿಗೆ ಪರಿಹಾರವೇನು? ಇಲ್ಲಿವೆ ಒಂದಿಷ್ಟು ಪರಿಹಾರ, ಗಮನಿಸಿ. 

*ಸೂಕ್ಷ್ಮ ಮನಸ್ಸು, ಅಂಜಿಕೆ ಮತ್ತು ಹಠದ ಪ್ರವೃತ್ತಿಯಿರುವ ಮಕ್ಕಳನ್ನು ನಿಭಾಯಿಸಿ, ಅವರ ಆಲೋಚನೆಯನ್ನು ಸರಿಪಡಿಸಬೇಕು. ಇದರಲ್ಲಿ ಪೋಷಕರಷ್ಟೇ ಶಾಲೆ ಹಾಗೂ ಕಾಲೇಜು ಪ್ರಾಧ್ಯಾಪಕರು ಹಾಗೂ ಸ್ನೇಹಿತರ ಪಾತ್ರ ಬಹುದೊಡ್ಡದಿದೆ. ತರಗತಿ, ಸಿಲಬಸ್ ಮುಗಿಸುವ ಧಾವಂತದ ನಡುವೆಯೂ ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಯ ಮೀಸಲಿಡಿ. ಸ್ನೇಹಿತರ ವಲಯದಲ್ಲಿ ಇಂಥ ಮನಸ್ಥಿತಿಯವರು ಇದ್ದರೆ, ಅವರನ್ನು ಆ ಸಮಸ್ಯೆಯ ಸುಳಿಯಿಂದ ಹೊರಗೆ ತರುವುದು ಹೇಗೆ ಎಂದು ಚಿಂತಿಸಿ.

*ಆತ್ಮಹತ್ಯೆ ಆ ಕ್ಷಣಕ್ಕೆ ತೆಗೆದುಕೊಂಡ ನಿರ್ಧಾರವಾಗಿದ್ದರೂ ಈ ಮೊದಲು ‘ಸತ್ತು ಹೋಗಿಬಿಡಬೇಕು’ ಎಂದೊ, ‘ಸಾಯಬೇಕು’ ಎಂದೊ ಯಾರ ಬಳಿಯಾದರೂ ಮಕ್ಕಳು ಹೇಳಿಕೊಂಡಿರುತ್ತಾರೆ. ಪದೇ ಪದೇ ಸಾಯುತ್ತೇನೆ ಎಂದು ಹೆದರಿಸುವ ಮಕ್ಕಳಿರುತ್ತಾರೆ. ಇವೆಲ್ಲ ಸುಳ್ಳು ನೆಪ ಎಂದು ನಿರ್ಲಕ್ಷ್ಯ ಮಾಡಬೇಡಿ. 

*ಮನೆಯಲ್ಲಿ ಯಾವುದೇ ಬಗೆಯ ಸ್ವಾತಂತ್ರ್ಯವಿಲ್ಲದ, ನಾಲ್ಕಾರು ಜನರೊಂದಿಗೆ ಬೆರೆಯದ ಅಂಜುಬುರುಕತನ ಇರುವ ಮಕ್ಕಳಲ್ಲಿ ಮೊದಲಿಗೆ ವಿಶ್ವಾಸ ತುಂಬಿ. ಸ್ವಪ್ರೀತಿಯನ್ನು ಬೆಳೆಸಿಕೊಳ್ಳುವಲ್ಲಿ ನೆರವಾಗಿ. ಮಕ್ಕಳು ಎಂಥ ಹಠಮಾರಿಗಳೇ ಆಗಿರಲಿ; ಅಂಜುಬುರುಕರೇ ಆಗಿರಲಿ. ಅವರ ಮೃದು ಮನಸ್ಸಿಗೆ ಬೇಕಿರುವುದು ಪ್ರೀತಿಯೆಂಬ ದಿವ್ಯೌಷಧ. ಎಂಥ ಪರಿಸ್ಥಿತಿಯಲ್ಲಿಯೂ ಈ ಔಷಧ ಕಡಿಮೆಯಾಗದಂತೆ ನೋಡಿಕೊಳ್ಳಿ.

*ಊಟ ಮಾಡದಿದ್ದರೆ ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುವುದಿಲ್ಲ. ಓದದಿದ್ದರೆ ಈ ಸಲ ಪಿಕ್ನಿಕ್ ಕ್ಯಾನ್ಸಲ್‌’ – ಇಂಥ ಬ್ಲ್ಯಾಕ್ ಮೇಲ್ ತಂತ್ರವನ್ನು ಬಿಟ್ಟು ಬಿಡಿ. ಮಕ್ಕಳು ದೊಡ್ಡವರಾದ ಮೇಲೆ ಇದೇ ಬ್ಲ್ಯಾಕ್‌ ಮೇಲ್ ತಂತ್ರವನ್ನು ಪ್ರಯೋಗಿಸುವ ಸಾಧ್ಯತೆ ಇರುತ್ತದೆ. 

*ಅಪ್ಪ ಅಮ್ಮಂದಿರು ಗತಕಾಲದ ಹಳಹಳಿಕೆ ಮಾಡುವಾಗ ಚೆನ್ನಾಗಿರುವುದನ್ನು ಮಾತ್ರ ಹೇಳಿರುತ್ತಾರೆ. ‘ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ’ ಎನ್ನುತ್ತಿರುತ್ತಾರೆ. ಅದರ ಜತೆಗೆ ‘ಎಷ್ಟೆಲ್ಲ ಅವಮಾನ ಅನುಭವಿಸಿದೆ, ಎಷ್ಟೆಲ್ಲ ನೋವು ಅನುಭವಿಸಿದೆ’. ಏನೆಲ್ಲ ತಪ್ಪು ಮಾಡಿದೆ’ ಅವೆಲ್ಲವೂ ಹೇಗೆ ಪಾಠವಾಯಿತು ಮತ್ತು ಬದುಕು ಕಟ್ಟಿಕೊಳ್ಳಲು ನೆರವಾಯಿತು ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿ. ತಪ್ಪಾಗುವುದು ಸಹಜ. ಎಡವುತ್ತಲೇ ಕಲಿಯುವುದೇ ಬದುಕು. ಅವಮಾನ, ಸೋಲು ಅಂತಿಮವಲ್ಲ ಅವೆಲ್ಲ ಬದುಕು ನೀಡುವ ದೊಡ್ಡ ಕಾಣ್ಕೆಗಳು ಎಂಬುದನ್ನು ತಿಳಿಸಿ.

(ಲೇಖಕರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT