ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆ ಕಾಯಿಲೆಯಲ್ಲ, ಮನಸ್ಥಿತಿ ಮಾತ್ರ: ಸ್ಪಷ್ಟವಾದ ದಿನಚರಿಯೇ ಮದ್ದು...

Last Updated 18 ಜನವರಿ 2020, 6:25 IST
ಅಕ್ಷರ ಗಾತ್ರ

ಎರಡು ವರ್ಷಗಳಿಂದ ಖಿನ್ನತೆಗಾಗಿ ಮಾತ್ರೆ ಸೇವಿಸುತ್ತಿದ್ದೇನೆ. ತಂದೆಯ ಜೊತೆ ಹೊಂದಾಣಿಕೆಯಿಲ್ಲ. ಅತಿಯಾದ ಚಿಂತೆ, ಭಯ ನನ್ನನ್ನು ಕಾಡುತ್ತಿದೆ. ಇತರ ಕಾಯಿಲೆಗಳು ಬರುತ್ತಿವೆ. ಕುಗ್ಗಿಹೋಗಿದ್ದೇನೆ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
ಹೆಸರು, ಊರು ಇಲ್ಲ

ಖಿನ್ನತೆ ಕಾಯಿಲೆಯಲ್ಲ, ಮನಸ್ಥಿತಿ ಮಾತ್ರ. ಆದರೆ ಬಹಳ ವರ್ಷಗಳ ಕಾಲ ಇದೇ ಮನಸ್ಥಿತಿಯಲ್ಲಿದ್ದು ದಿನಚರಿಯನ್ನು ಮಾಡದೆ ಹಸಿವು, ನಿದ್ದೆಯನ್ನು ಕಳೆದುಕೊಂಡು ಆತ್ಮಹತ್ಯೆಯ ಒತ್ತಡಗಳುಂಟಾದಾಗ ಮಾತ್ರ ತಾತ್ಕಾಲಿಕವಾಗಿ ಮಾತ್ರೆಗಳ ಅಗತ್ಯವಿರಬಹುದು. ಮಾತ್ರೆಗಳು ಜೀವನದ ಪರಿಸ್ಥಿತಿಯನ್ನು ಸುಧಾರಿಸುವುದಿಲ್ಲ. ಹಾಗಾಗಿ ನಿಮ್ಮ ಮನಸ್ಥಿತಿಯ ಬದಲಾವಣೆಗೆ ಅವು ಸಹಾಯ ಮಾಡುವುದಿಲ್ಲ. ತೀವ್ರವಾದ ಅಡ್ಡಪರಿಣಾಮಗಳು ಇರುವುದರಿಂದ ಮಾತ್ರೆಗಳನ್ನು ಆದಷ್ಟು ಬೇಗ ಕಡಿಮೆ ಮಾಡುತ್ತಾ ಬರಬೇಕು.

ನಿಮ್ಮ ಸದ್ಯದ ಬದುಕು ನಿಮಗೆ ಸಮಾಧಾನಕರವೇ? ಆಗಿಲ್ಲದಿದ್ದರೆ ಹೇಗೆ ಬದುಕಬೇಕೆಂದಿದ್ದೀರಿ? ಒಂದು ಸ್ಪಷ್ಟವಾದ ದಿನಚರಿಯನ್ನು ಹಾಕಿಕೊಳ್ಳಿ. ಸಣ್ಣಸಣ್ಣ ಅಂಶಗಳಿಂದ ಬದಲಾವಣೆಯನ್ನು ಪ್ರಾರಂಭಿಸಿ. ಆರಂಭದ ಸೋಲುಗಳು ಸಹಜ. ಹೀಗೆ ನಿಧಾನವಾಗಿ ಪ್ರಯತ್ನಿಸಿದಲ್ಲಿ 5-6 ತಿಂಗಳಲ್ಲಿ ನಿಮ್ಮ ಬಗೆಗೇ ಹೆಮ್ಮೆಪಟ್ಟುಕೊಳ್ಳುವಷ್ಟು ಬದಲಾವಣೆಗಳನ್ನು ತರಬಹದು. ನೆನಪಿಡಿ, ಮನೆಯವರ, ಸ್ನೇಹಿತರ ಸಹಕಾರ ಮತ್ತು ಬೆಂಬಲವನ್ನು ನೀರೀಕ್ಷಿಸುವುದು ಸಹಜ. ಆದರೆ ನಿಮ್ಮ ಸೋಲುಗಳಿಗೆ ಅವರು ಜವಾಬ್ದಾರರು ಎಂದುಕೊಂಡಾಗ ಹತಾಶೆ ದೂರವಾಗುವುದು ಕಷ್ಟ. ನಿಮ್ಮೊಳಗೆ ಹುದುಗಿರುವ ಸಂಪೂರ್ಣ ವ್ಯಕ್ತಿಯನ್ನು ಹೊರತರುವುದು ನಿಮ್ಮದೇ ಜವಾಬ್ದಾರಿ. ಅಗತ್ಯವಿದ್ದರೆ ಮನೋಚಿಕಿತ್ಸೆ ಪಡೆಯಿರಿ.

ನಾನು 9 ವರ್ಷದಿಂದ ಖಿನ್ನತೆಯಲ್ಲಿದ್ದೇನೆ. ಮೊದಲು ಮನೆಯಲ್ಲಿ ಕಡೆಗಣಿಸುತ್ತಿದ್ದರು. ಈಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆರ್ಥಿಕ ತೊಂದರೆಗಳಿಲ್ಲ. ನನಗೆ ಮುಕ್ತವಾಗಿ ಬೆರೆಯಲು ಆಗುತ್ತಿಲ್ಲ. ನನ್ನ ಭಾವನೆಗಳು, ನಡವಳಿಕೆ ಸಹಜವಾಗಿಲ್ಲವಾದ್ದರಿಂದ ನನಗಿಷ್ಟವಾಗಲ್ಲ. ಮಕ್ಕಳಿಗೂ ನನ್ನನ್ನು ಹೋಲಿಸಿಕೊಳ್ಳುತ್ತೇನೆ. ಭಯ, ಕೋಪ ಮುಂತಾದ ಸಹಜ ಭಾವನೆಗಳಿಲ್ಲ. ಸಾಕಷ್ಟು ಭಾರಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದೇನೆ. ಮಾತ್ರೆಗಳು ಸಹಾಯ ಮಾಡುತ್ತಿಲ್ಲ. ಯಾರಿಗೂ ಹೇಳಿಕೊಳ್ಳಲಾಗುತ್ತಿಲ್ಲ. ನಾನು ಶಾಕ್‌ ಟ್ರೀಟ್‍ಮೆಂಟ್ ತೆಗೆದುಕೊಳ್ಳಲೇ? ಭಾವನೆಗಳು ನನ್ನ ಹಿಡಿತಕ್ಕೆ ಬಂದು ನಾನು ಮೊದಲಿನಂತೆ ಸಂತೋಷವಾಗಿರಲು ಏನು ಚಿಕಿತ್ಸೆ ಇದೆ?

ಹೆಸರು, ಊರು ಇಲ್ಲ

ನಿಮ್ಮ ಪತ್ರದಲ್ಲಿ ‘ಸಹಜ’ (ನಾರ್ಮಲ್) ಎನ್ನುವ ಶಬ್ದವನ್ನು ಮತ್ತೆಮತ್ತೆ ಬಳಸಿದ್ದೀರಲ್ಲವೇ? ನನ್ನ ಮನಸ್ಥಿತಿ ಅಸಹಜ ಅಂದರೆ ನಾನು ಮನೋರೋಗಿ ಎಂದು ನೀವೇ ತೀರ್ಮಾನಿಸಿಕೊಂಡಿದ್ದೀರಲ್ಲವೇ? ಸುತ್ತಲಿನವರು ಮತ್ತು ವೈದ್ಯರೂ ಕೂಡ ಇದನ್ನು ದೃಢಪಡಿಸುತ್ತಿದ್ದಾರೆ. ನಿಮ್ಮನ್ನು ಮನೋರೋಗಿ ಎನ್ನುವುದಾದರೆ ಈ ಪ್ರಪಂಚದಲ್ಲಿ ಎಲ್ಲರೂ (ನನ್ನನ್ನು ಸೇರಿಸಿ) ಮನೋರೋಗಿಗಳೇ. ನಾವೆಲ್ಲಾ ನಿಮ್ಮದೇ ತರಹದ ಭಾವನಾತ್ಮಕ ಏರಿಳಿತ ಹೋರಾಟಗಳನ್ನಿಟ್ಟುಕೊಡಿದ್ದೇವೆ. ಆದರೆ ಜೀವನಕ್ಕೆ ಉದ್ದೇಶಗಳನ್ನಿಟ್ಟುಕೊಂಡು ಪ್ರಯತ್ನಪಡುತ್ತಾ ಸೋಲುತ್ತಾ ಗೆಲ್ಲುತ್ತಾ ದುಖ ಬೇಸರಗಳ ನಡುವೆಯೇ ಸಂತೋಷವನ್ನು ಹುಡುಕಿಕೊಳ್ಳುತ್ತಿರುತ್ತೇವೆ. ಸಹಜ ಎನ್ನುವುದು ಬೇರೇನೋ ಬೇರೆಲ್ಲೋ ಇದೆ ಅಂತ ಹುಡುಕಿ ನೀವು ಹತಾಶರಾಗಿದ್ದೀರಿ.

ನಿಮ್ಮ ಮೆದುಳಿಗೆ ಯಾವ ಮಾತ್ರೆಗಳು ಅಥವಾ ಚಿಕಿತ್ಸೆ ಬೇಕಾಗಿಲ್ಲ. ಬೇಕಾಗಿರುವುದು ನಿಮ್ಮ ನೋವನ್ನು ಆಲಿಸುವ, ಅರ್ಥಮಾಡಿಕೊಳ್ಳುವ ಜೊತೆಗಿರುವ ಸಹೃದಯ ಮನಸ್ಸು ಮಾತ್ರ. ತಜ್ಞ ಮನೊಚಿಕಿತ್ಸಕರಿಂದ ಸಹಾಯ ಪಡೆದರೆ ಆರು ತಿಂಗಳಲ್ಲಿ ನಿಮಗೆ ನೀವು ಅರ್ಥವಾಗುತ್ತೀರಿ. ಮೊದಲು ನಿಮಗೆ ಆಸಕ್ತಿದಾಯಕವಾಗಿರುವ ದಿನಚರಿಯನ್ನು ಹುಡುಕಿಕೊಳ್ಳಿ. ಹಂತಹಂತವಾಗಿ ಬೆಳೆಯುವ ಯೋಜನೆ ಹಾಕಿಕೊಳ್ಳಿ. ನಿಮ್ಮ ಬಗೆಗೆ ಹೆಮ್ಮೆಪಡಲು ಸಾಧ್ಯವಾದಾಗ ಖಿನ್ನತೆ ಮಾಯವಾಗಿರುತ್ತದೆ.

ಕುಟುಂಬದಲ್ಲಿ ಬಹಳ ದುಖವನ್ನು ಅನುಭವಿಸುತ್ತಿದ್ದೇನೆ. ನೀವು ನನ್ನ ಸಮಸ್ಯೆಗಳನ್ನು ಪರಿಹರಿಸುತ್ತೀರಾ?

ಪ್ರೇಮಲತಾ, ಊರಿನ ಹೆಸರಿಲ್ಲ

ಪತ್ತದಲ್ಲಿ ವೈಯುಕ್ತಿಕ ಅಥವಾ ನಿಮ್ಮ ಕಷ್ಟಗಳ ವಿವರಗಳಿಲ್ಲ. ಕೌಟುಂಬಿಕ ಸಮಸ್ಯೆಗಳಿಂದಾಗಿ ನಿಮಗಾಗುತ್ತಿರುವ ನೋವು, ಕಷ್ಟಗಳ ಬಗೆಗೆ ಹೇಳುತ್ತಿದ್ದೀರಿ ಎನ್ನಿಸುತ್ತದೆ. ಮನೋಚಿಕಿತ್ಸಕರು ಸಮಸ್ಯೆಯ ಪರಿಹಾರಕ್ಕೆ ಸಹಾಯ ಮಾಡಬಲ್ಲರಾದರೂ ಸಂಪೂರ್ಣ ಪ್ರಯತ್ನವನ್ನು ಮಾತ್ರ ನೀವೇ ಮಾಡಬೇಕಾಗುತ್ತದೆ. ಸಹಾಯಕ್ಕಾಗಿ ತಜ್ಞ ಮನೋಚಿಕಿತ್ಸಕರನ್ನು ಸಂಪರ್ಕಿಸಿ.

ಅವಿವಾಹಿತನಾದ ನಾನು ಕೆಲಸ ಮಾಡುವಲ್ಲಿ ವಿವಾಹಿತೆಯನ್ನು ಇಷ್ಟಪಡುತ್ತಿದ್ದೆ. ಇದನ್ನು ತಿಳಿದ ಅವಳ ಗಂಡ ಕೆಲಸ ಬಿಡಿಸಿದ್ದಾನೆ. ಅವಳು ಸಿಗುವುದಿಲ್ಲ ಎಂದು ಗೊತ್ತಿದ್ದರೂ ಅವಳೊಡನೆ ಕಳೆದ ಕ್ಷಣಗಳು ನೆನಪಾಗಿ ಮರೆಯಲಾಗುತ್ತಿಲ್ಲ. ಮರೆಯುವುದು ಹೇಗೆ ಅಂತ ತಿಳಿಸಿ.

ಹೆಸರು, ಊರು ಬೇಡ

ಯೌವನದ ಗಂಡು– ಹೆಣ್ಣಿನ ಆಕರ್ಷಣೆಯೇ ಹೀಗೆ. ಇದು ಪ್ರಕೃತಿ ಸಹಜವಾದದ್ದು. ನೀವು ಈ ಆಕರ್ಷಣೆಯನ್ನೇ ಪ್ರೀತಿ ಅಂತ ಭ್ರಮಿಸಿದ್ದೀರಿ. ಇದೇಕೆ ಗೊತ್ತೇ? ಜೀವನಪರ್ಯಂತ ಬಾಳಲು ನನಗೆ ಎಂತಹ ಸಂಗಾತಿ ಬೇಕು ಎನ್ನುವ ಸ್ಪಷ್ಟತೆ ನಿಮಗಿನ್ನೂ ಸಿಕ್ಕಿಲ್ಲ. ಹಾಗಾಗಿ ಯಾವುದೇ ಹೆಣ್ಣಿನ ಮೃದುಮಾತು, ಸ್ಪರ್ಶ ನಿಮ್ಮನ್ನು ಕುರುಡಾಗಿಸುತ್ತದೆ. ಹಗಲುಗನಸುಗಳನ್ನು ಆನಂದಿಸುತ್ತಲೇ ನಿಮ್ಮ ಕಲ್ಪನೆಗಳನ್ನು ವಾಸ್ತವಕ್ಕೆ ನಿಧಾನವಾಗಿ ತಂದು ನಿಮ್ಮ ಆಸಕ್ತಿ, ಆದ್ಯತೆಗಳನ್ನು ಗುರುತಿಸಿ. ಸಮಯ ಕಳೆದಂತೆ ಹಗಲುಗನಸು ಮತ್ತು ನಿಜಜೀವನದ ನಡುವಿನ ತೆಳುವಾದ ಗೆರೆ ಮನದಟ್ಟಾಗುತ್ತದೆ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT