ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರಕೋಶದಲ್ಲಿ ಕಲ್ಲುಗಳು

Published 6 ನವೆಂಬರ್ 2023, 23:35 IST
Last Updated 6 ನವೆಂಬರ್ 2023, 23:35 IST
ಅಕ್ಷರ ಗಾತ್ರ

ಮಹಿಳೆಯರಿಗಿಂತ ಪುರುಷರನ್ನು ತುಸು ಹೆಚ್ಚು ಕಾಡುವ ಮೂತ್ರವ್ಯೂಹದ ಈ ಸಮಸ್ಯೆ ಎಷ್ಟೋ ಬಾರಿ ತುರ್ತುಚಿಕಿತ್ಸೆಯನ್ನು ಬೇಡುತ್ತದೆ. ಈ ನೋವು ಬಹಳವೇ ತೀವ್ರವಾಗಿದ್ದು, ಹೊಟ್ಟೆಯಲ್ಲಿ ಹಿಂಡಿದಂತೆಯೂ, ಕೆಳಭಾಗದವರೆಗೆ ಹರಿದಾಡಿದಂತೆಯೂ ಭಾಸವಾಗಬಹುದು. ಕೆಲವೊಮ್ಮೆ ವಾಂತಿ, ರಕ್ತಮಿಶ್ರಿತ ಮೂತ್ರವಿಸರ್ಜನೆಯೂ ಆಗಬಹುದು. ತತ್‌ಕ್ಷಣದ ಶಮನಕ್ಕೆ ನೋವು ನಿವಾರಕ ಚುಚ್ಚುಮದ್ದುಗಳೇ ಸೂಕ್ತ.

ಕಲ್ಲುಗಳು ಮೂತ್ರವ್ಯೂಹದ ಯಾವುದೇ ಭಾಗದಲ್ಲಿ ಅಂದರೆ, ಮೂತ್ರಪಿಂಡ, ಮೂತ್ರನಾಳ ಅಥವಾ ಮೂತ್ರಕೋಶದಲ್ಲಿ ಕಾಣಿಸಿಕೊಳ್ಳಬಹುದು. ರಕ್ತದ ದ್ರವಾಂಶದಲ್ಲಿ ಸಹಜವಾಗಿಯೇ ಅನೇಕ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ರಕ್ತವು ಶೋಧನಾಕ್ರಿಯೆಗೆಂದು ಮೂತ್ರಪಿಂಡದ ಮೂಲಕ ಪರಿಚಲಿಸಿದಾಗ ಮುಖ್ಯವಾದ ಮತ್ತು ಶರೀರಕ್ಕೆ ಅಗತ್ಯವಾದ ರಾಸಾಯನಿಕಗಳು ಅಲ್ಲಿನ ಸಂಗ್ರಹನಾಳಗಳ ಜೀವಕೋಶಗಳ ಮೂಲಕ ಹೀರಲ್ಪಟ್ಟು ಪುನಃ ರಕ್ತವನ್ನು ಸೇರುತ್ತವೆ. ವಿವಿಧ ಕಾರಣಗಳಿಗಾಗಿ ರಕ್ತದಲ್ಲಿ ಕೆಲವು ರಾಸಾಯನಿಕಗಳು ಹೆಚ್ಚಾದಾಗ ಅಥವಾ ಅವುಗಳನ್ನು ಕರಗಿದ ರೂಪದಲ್ಲಿರಿಸಲು ದ್ರವಾಂಶದ ಕೊರತೆಯಾದಾಗ ಅವು ಹರಳುಗಟ್ಟಬಹುದು. ಹೀಗೆ ಮೂತ್ರವ್ಯೂಹದಲ್ಲಿ ಹರಳುಗಟ್ಟುವ ರಾಸಾಯನಿಕಗಳಲ್ಲಿ ಕ್ಯಾಲ್ಸಿಯಂ, ಯುರಿಕ್ ಆ್ಯಸಿಡ್, ಆಕ್ಸಾಲಿಕ್ ಆ್ಯಸಿಡ್, ಸಿಸ್ಟಿನ್ ಮುಖ್ಯವಾದುವು.

ಹರಳುಗಟ್ಟುವುದೇಕೆ?:

  • ಶೇ  70ರಷ್ಟು ವ್ಯಕ್ತಿಗಳಲ್ಲಿ ಹರಳುಗಳು ಕ್ಯಾಲ್ಸಿಯಂನಿಂದ ಕೂಡಿದ್ದರೂ ಬಹುತೇಕರಲ್ಲಿ ರಕ್ತದ ಕ್ಯಾಲ್ಸಿಯಂ ಸಾಮಾನ್ಯ ಮಟ್ಟದಲ್ಲಿಯೇ ಇರುತ್ತದೆ. ಆದರೆ, ಪ್ಯಾರಾಥೈರಾಯ್ಡ್ ಗ್ರಂಥಿಯ ಸ್ರವಿಸುವಿಕೆ ಹೆಚ್ಚಾದಾಗ ಮತ್ತು ದೀರ್ಘಕಾಲದವರೆಗೆ ಹಾಸಿಗೆ ಹಿಡಿದ ವ್ಯಕ್ತಿಗಳಲ್ಲಿ ಮೂಳೆಗಳಿಂದ ಕ್ಯಾಲ್ಸಿಯಂ ಅಂಶವು ರಕ್ತಪರಿಚಲನೆಗೆ ಸೇರಿ, ಹೆಚ್ಚಾದ ಕ್ಯಾಲ್ಸಿಯಂ ಮೂತ್ರವ್ಯೂಹದಲ್ಲಿ ಹರಳುಗಳಾಗಬಹುದು.

  • ಆನುವಂಶೀಯತೆಯ ಕಾರಣದಿಂದ ಪ್ರೊಟೀನ್ ಘಟಕಗಳಾದ ಕೆಲವು ಅಮೈನೋ ಆ್ಯಸಿಡ್‍ಗಳ ಹೀರಿಕೊಳ್ಳುವಿಕೆಯಲ್ಲಿ ಮತ್ತು ಸಾಗಣಿಕೆಯಲ್ಲಿ ದೋಷವಿದ್ದಾಗ ಸಿಸ್ಟಿನ್ ಅಂಶವು ಹರಳುಗಟ್ಟಬಹುದು.

  • ಶೇ 5-10ರಷ್ಟು ವ್ಯಕ್ತಿಗಳಲ್ಲಿ ಕಲ್ಲುಗಳು ಯುರಿಕ್ ಆ್ಯಸಿಡ್‍ನಿಂದ ಕೂಡಿರುತ್ತವೆ. ಈ ವ್ಯಕ್ತಿಗಳಲ್ಲಿ ಇಲ್ಲವೇ ಹೆಚ್ಚು ಯುರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತಿರುತ್ತದೆ ಅಥವಾ ಮೂತ್ರವು ಹೆಚ್ಚು ಆಮ್ಲೀಯತೆಯಿಂದ ಕೂಡಿರುತ್ತದೆ. ಆಹಾರದಲ್ಲಿನ ಪ್ರೊಟೀನ್ ಮತ್ತು ಪ್ಯುರಿನ್ ಅಂಶಗಳು ಚಯಾಪಚಯಾ ಕ್ರಿಯೆಗೆ ಒಳಗಾದಾಗ ಯುರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಕಿಮೋಥೆರಪಿಗೆ ಒಳಗಾದ ಕ್ಯಾನ್ಸರ್ ರೋಗಿಗಳಲ್ಲಿ ಜೀವಕೋಶಗಳು ಹೆಚ್ಚಿನ ಸಂಖ್ಯೆಯಲ್ಲಿ ಮರಣಿಸಿದಾಗಲೂ ಯುರಿಕ್ ಆ್ಯಸಿಡ್ ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ರಕ್ತದ ಯುರಿಕ್ ಆ್ಯಸಿಡ್ ಸಹಜ ಮಟ್ಟದಲ್ಲಿದ್ದರೂ ಜೀರ್ಣಾಂಗವ್ಯೂಹದಲ್ಲಿ ವಿವಿಧ ಕಾರಣಗಳಿಗಾಗಿ (ಶಸ್ತ್ರಚಿಕಿತ್ಸೆ, ಮೊದಲಾದುವು) ನೀರು ಮತ್ತು ಇತರ ದ್ರವಾಂಶಗಳ ಹೀರಿಕೊಳ್ಳುವಿಕೆಯಲ್ಲಿ ಇಳಿಮುಖವಾದಾಗ ಮೂತ್ರದ ಪ್ರಮಾಣ ಕಡಿಮೆಯಾಗಿ ಯುರಿಕ್ ಆ್ಯಸಿಡ್ ಹರಳುಗಟ್ಟಬಹುದು.

  • ಆಕ್ಸಲೇಟ್ ಅಂಶದ ಚಯಾಪಚಯಗಳಲ್ಲಿ ಭಾಗವಹಿಸುವ ಕೆಲವು ನಿರ್ದಿಷ್ಟ ಕಿಣ್ವಗಳ ಕೊರತೆ ಜನ್ಮಜಾತವಾಗಿಯೇ ಇದ್ದಾಗ ಈ ಅಂಶವು ರಕ್ತದಲ್ಲಿ ಹೆಚ್ಚಾಗಿ ಮೂತ್ರವ್ಯೂಹದಲ್ಲಿ ಹರಳುಗಟ್ಟಬಹುದು.

  • ಆಹಾರದಲ್ಲಿ ಕೆಲವು ಪದಾರ್ಥಗಳ ಅತಿಯಾದ ಬಳಕೆ (ಚಹಾ, ಪಾಲಕ್ ಸೊಪ್ಪು, ಕೋಕಾ, ಚಾಕೊಲೇಟ್, ಕಾಳುಮೆಣಸು ಮೊದಲಾದುವು), ನಿರ್ದಿಷ್ಟ ಬ್ಯಾಕ್ಟಿರಿಯಾಗಳು ಮೂತ್ರವ್ಯೂಹದಲ್ಲಿ ಸೋಂಕು ಉಂಟುಮಾಡಿದಾಗ, ಮೂತ್ರನಾಳಗಳಲ್ಲಿ ವಿವಿಧ ಕಾರಣಗಳಿಗಾಗಿ ತಡೆಯುಂಟಾದಾಗ, ಮೂತ್ರದ ಹರಿವು ಸರಾಗವಾಗಿ ಆಗದಿದ್ದಾಗ ಹಾಗೂ ಕೆಲವು ಔಷಧಗಳ ಅತಿಯಾದ ಬಳಕೆ ಮೂತ್ರವ್ಯೂಹದಲ್ಲಿ ಹರಳುಗಟ್ಟುವಿಕೆ ಕಾರಣವಾಗಬಹುದು.


ತಪಾಸಣೆಗಳು

ಹೊಟ್ಟೆಯ ಭಾಗದ ಎಕ್ಸ್-ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮತ್ತು ಸಿಟಿ ಸ್ಕ್ಯಾನಿಂಗ್ ಪರೀಕ್ಷೆಗಳು ಈ ಹರಳುಗಳ ಇರುವಿಕೆಯನ್ನು ದೃಢಪಡಿಸುವುದರ ಜೊತೆಯಲ್ಲಿಯೇ ಅದರ ನಿಖರವಾದ ಸ್ಥಾನ, ಗಾತ್ರ, ಸಂಖ್ಯೆ ಮತ್ತು ವ್ಯೂಹದಲ್ಲಿನ ಇತರ ನ್ಯೂನತೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತವೆ. ಈ ವಿವರಗಳು ಚಿಕಿತ್ಸೆಯನ್ನು ನಿರ್ಧರಿಸಲು ನೆರವಾಗುತ್ತವೆ.

ಚಿಕಿತ್ಸೆಗಳೇನು?

ಈ ಸಮಸ್ಯೆಗೆ ಬಹು ಸುಧಾರಿತ ಚಿಕಿತ್ಸಾ ವಿಧಾನಗಳು ಲಭ್ಯವಿದ್ದು ಹಿಂದಿನಂತೆ ತೆರೆದ ಹೊಟ್ಟೆಯ ಶಸ್ತ್ರಚಿಕಿತ್ಸೆಯ ಬಳಕೆ ಬಹತೇಕ ಇಲ್ಲವೆಂದೇ ಹೇಳಬಹುದು. ಕೆಲವು ಮುಖ್ಯ ಚಿಕಿತ್ಸಾ ವಿಧಾನಗಳೆಂದರೆ..

  • ನೋವು ನಿವಾರಕ ಚುಚ್ಚುಮದ್ದುಗಳು, ಆ್ಯಂಟಿಬಯೋಟಿಕ್‍ಗಳು, ಅತಿ ಸಣ್ಣ ಕಲ್ಲುಗಳು ಮೂತ್ರದೊಂದಿಗೆ ವಿಸರ್ಜನೆಯಾಗಲು ನಿರ್ದಿಷ್ಟ ಔಷಧಗಳ ಬಳಕೆ.

  • ಎಕ್ಸ್ಟ್ರಾ ಕಾರ್ಪೋರಿಯಲ್ ಶಾಕ್ ವೇವ್ ಲಿತೊಟ್ರಿಪ್ಸಿ: ಈ ವಿಧಾನದಲ್ಲಿ ಸಮಸ್ಯೆಯಿಂದ ಬಳಲುವ ವ್ಯಕ್ತಿಯನ್ನು ಕೆಲವು ನಿರ್ದಿಷ್ಟ ತಪಾಸಣೆಗಳಿಗೆ ಒಳಪಡಿಸಿ ಕಲ್ಲಿನ ನಿಖರವಾದ ಸ್ಥಾನವನ್ನು ಗುರುತಿಸಿಕೊಳ್ಳುತ್ತಾರೆ. 1.5 ಸೆಂಟಿಮೀಟರ್‍ಗಳಷ್ಟು ವ್ಯಾಸವಿರುವ ಕಲ್ಲುಗಳನ್ನು ಈ ಚಿಕಿತ್ಸೆಯಿಂದ ತೆಗೆಯಬಹುದು. ಎಲೆಕ್ಟ್ರೋಮ್ಯಾಗ್ನೆಟ್ ಅಥವಾ ಪೈಜೋಎಲೆಕ್ಟ್ರಿಕ್ ಮೂಲದಿಂದ ವಿಶೇಷ ಅಲೆಗಳನ್ನು ಚರ್ಮದ ಮೂಲಕ ಕಲ್ಲಿನತ್ತ ಹರಿಹಾಯಿಸಿ ಅದನ್ನು ತುಂಡರಿಸುತ್ತಾರೆ. ಹಾಗೆ ತುಂಡಾದ ಸಣ್ಣ ಸಣ್ಣ ತುಣುಕುಗಳು ಮೂತ್ರನಾಳದ ಮೂಲಕ ಮೂತ್ರದೊಂದಿಗೆ ವಿಸರ್ಜಿಸಲ್ಪಡುತ್ತವೆ.

  • ಯುರಿಟರೋಸ್ಕೋಪಿಕ್ ಲಿತೊಟ್ರಿಪ್ಸಿ: ಈ ವಿಧಾನದಲ್ಲಿ ಮೂತ್ರನಾಳದ ಮೂಲಕ ಕೊಳವೆಯಂತಹ ಉಪಕರಣವನ್ನು ತೂರಿಸಿ ಲೇಸರ್ ಶಕ್ತಿಯನ್ನು ಬಳಸಿ ಕಲ್ಲನ್ನು ತುಂಡರಿಸಲಾಗುತ್ತದೆ.

  • ಸೋಂಕು ಕಂಡು ಬಂದಾಗ ಮೂತ್ರನಾಳದ ಮೂಲಕ ಕೊಳವೆಯನ್ನು ತೂರಿಸಿ, ನಾಳದಂತಹ ( ಸ್ಟೆಂಟ್) ವಸ್ತುವನ್ನು ಕೆಲಕಾಲ ಅಲ್ಲಿರಿಸಿ, ಸೋಂಕು ಕಡಿಮೆಯಾದ ಮೇಲೆ ಅದನ್ನು ತೆಗೆಯುತ್ತಾರೆ. ಇದು ಸೋಂಕು ಹರಡದಂತೆ ನೆರವಾಗುತ್ತದೆ.

  • ಪರ್ ಕ್ಯುಟೇನಿಯಸ್ ನೆಫ್ರೋಲಿತೋಟೊಮಿ: ಮೂತ್ರಪಿಂಡದ ಮುಂಭಾಗದಲ್ಲಿ ಅಥವಾ ಮೂತ್ರನಾಳದ ಮೇಲಿನ ಭಾಗದಲ್ಲಿ ಕಲ್ಲುಗಳಿದ್ದಾಗ ಈ ವಿಧಾನ ಸೂಕ್ತ. ಈ ವಿಧಾನದಲ್ಲಿ ಹೊಟ್ಟೆಯ ಭಾಗದಿಂದ ಕಲ್ಲನ್ನು ಸಮೀಪಿಸುತ್ತಾರೆ.

ನೆನಪಿಡಿ:

ಯಾವ ರೋಗಿಗೆ ಯಾವ ವಿಧಾನದ ಚಿಕಿತ್ಸೆ ಎನ್ನುವುದು ಕಲ್ಲಿನ ಗಾತ್ರ, ಅದರ ಸ್ಥಾನ, ಮೂತ್ರನಾಳದಲ್ಲಿನ ಇತರ ತಡೆಗಳು, ಅಲ್ಲಿ ಇರಬಹುದಾದ ಸೋಂಕು, ವ್ಯಕ್ತಿಯ ನೋವಿನ ತೀವ್ರತೆ ಮತ್ತಿತರ ಅಂಶಗಳನ್ನು ಅವಲಂಬಿಸಿರುತ್ತದೆ. ಅತಿ ಚಿಕ್ಕ, ಅಂದರೆ 5 ಮಿಲಿಮೀಟರ್‌ಗಿಂತಲೂ ಕಡಿಮೆ ವ್ಯಾಸವಿರುವ ಕಲ್ಲುಗಳು ಸಾಮಾನ್ಯವಾಗಿ ತಂತಾನೆ ಮೂತ್ರನಾಳದ ಮೂಲಕ ವಿಸರ್ಜನೆಗೊಳ್ಳುತ್ತವೆಯಾದರೂ, ಎಲ್ಲ ಸಂದರ್ಭಗಳಲ್ಲಿಯೂ ಅದು ಸಾಧ್ಯವಾಗದೆ ಇರಬಹುದು.

ದಿನವೂ ಕಡ್ಡಾಯವಾಗಿ ಮೂರು ಲೀಟರ್ ನೀರು ಮತ್ತಿತರ ದ್ರವಾಂಶದ ಸೇವನೆ, ಚಟುವಟಿಕೆಯ ಜೀವನಶೈಲಿ – ಈ ಸಮಸ್ಯೆ ಬರದಂತೆ ಸ್ವಲ್ಪ ಮಟ್ಟಿಗೆ ನೆರವಾಗುತ್ತದೆ. ವಾತಾವರಣದ ಉಷ್ಣತೆ ಹೆಚ್ಚಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ನೀರನ್ನು ಹೆಚ್ಚು ಕುಡಿಯುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT