ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ ಮತ್ತು ಹಿಂಸಾಚಾರಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಉಚಿತ ಪರವಾನಗಿ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಜಲ್ಪೈಗುರಿಯಲ್ಲಿ ಚುನಾವಣಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ ಮತ್ತು ಹಿಂಸಾಚಾರಕ್ಕೆ ಟಿಎಂಸಿ ಉಚಿತ ಪರವಾನಗಿ ನೀಡುತ್ತಿದೆ. ಇಂತಹ ಪ್ರಕರಣಗಳ ಬಗ್ಗೆ ಕೇಂದ್ರ ಸಂಸ್ಥೆಗಳು ತನಿಖೆ ಮಾಡಲು ಬಂದರೆ ರಾಜ್ಯದಲ್ಲಿ ಅವರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಮೋದಿ ಆರೋಪ ಮಾಡಿದರು.
ಮೇದಿನಿಪುರದಲ್ಲಿ 2022ರಲ್ಲಿ ಸ್ಫೋಟ ನಡೆದಿತ್ತು. ಶನಿವಾರ ಈ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಇಬ್ಬರನ್ನು ಬಂಧಿಸಲು ಯತ್ನಿಸಿದಾಗ ಅವರ ಮೇಲೆ ಜನರು ದಾಳಿ ಮಾಡಿದ್ದರು. ಈ ಘಟನೆ ನಡೆದ ಒಂದು ದಿನದ ಬಳಿಕ ವಿಷಯ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು.
ಟಿಎಂಸಿ ಸರ್ಕಾರ ಬಂಗಾಳದಲ್ಲಿ ಲೂಟಿ ಮತ್ತು ಭಯೋತ್ಪಾದನೆಗೆ ಮುಕ್ತ ಅವಕಾಶ ನೀಡಲು ಮುಂದಾಗಿದೆ. ಸುಲಿಗೆಕೋರರು, ಭಷ್ಟರನ್ನು ಟಿಎಂಸಿ ಸರ್ಕಾರ ರಕ್ಷಣೆ ಮಾಡುತ್ತಿದೆ. ಇಂತಹವರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡಲು ಬಂದಾಗ ಅವರ ಮೇಲೆ ಪ್ರತಿದಾಳಿ ಮಾಡುವ ಕೆಲಸವನ್ನು ಟಿಎಂಸಿ ಸರ್ಕಾರ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಸಂದೇಶ್ಖಾಲಿಯ ಲೈಂಗಿಕ ಕಿರುಕುಳ ವಿಷಯ ಪ್ರಸ್ತಾಪ ಮಾಡಿದ ಮೋದಿ, ಇಲ್ಲಿನ ಅಪರಾಧಿಗಳು ತಮ್ಮ ಮುಂದಿನ ಜೀವನವನ್ನು ಜೈಲಿನಲ್ಲಿ ಕಳೆಯಲಿದ್ದಾರೆ ಎಂದು ಜನರಿಗೆ ಭರವಸೆ ನೀಡಿದರು.