ನವದೆಹಲಿ: ಜಾತಿಗಣತಿ ಮಾಡುವುದಾಗಿ ಘೋಷಿಸಿರುವುದಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಭಾನುವಾರ ಅಭಿನಂದಿಸಿದ್ದಾರೆ. ಇದು ನ್ಯಾಯಕ್ಕಾಗಿ ರೇವಂತ್ ರೆಡ್ಡಿ ಇಟ್ಟಿರುವ ಮೊದಲ ಹೆಜ್ಜೆ ಎಂದು ಶ್ಲಾಘಿಸಿದ್ದಾರೆ.
ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವವನ್ನು ಖಾತರಿಪಡಿಸಿಕೊಳ್ಳುವ ಏಕೈಕ ಮಾರ್ಗ ಜಾತಿಗಣತಿ ಮಾಡುವುದಾಗಿದೆ. ಜಾತಿಗಣತಿ ನ್ಯಾಯದ ಕಡೆ ಇಡುವ ಮೊದಲ ಹೆಜ್ಜೆಯಾಗಿದೆ. ಯಾವುದೇ ಸಮಾಜದಲ್ಲಿನ ಸಾಮಾಜಿಕ, ಆರ್ಥಿಕ ಆರೋಗ್ಯವನ್ನು ಅರಿಯದೆ ಸೂಕ್ತ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲಾಗದು. ದೇಶದ ಅಭಿವೃದ್ಧಿಯ ದೃಷ್ಟಿಯಿಂದಲೂ ಎಲ್ಲ ವರ್ಗಗಳ ಪಾಲ್ಗೊಳ್ಳುವಿಕೆಯು ಮುಖ್ಯವಾಗಿದ್ದು, ಜಾತಿಗಣತಿಯಿಂದ ಇದು ಸಾಧ್ಯವಾಗಲಿದೆ ಎಂದು ಅವರು ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ತೆಲಂಗಾಣದಲ್ಲಿ ಜಾತಿಗಣತಿ ಮಾಡುವುದಾಗಿ ರೇವಂತ್ ರೆಡ್ಡಿ ಶನಿವಾರ ಘೋಷಿಸಿದ್ದರು.