ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಬರುವವರೆಗೂ ಜಾರಿ ನಿರ್ದೇಶನಾಲಯ (ಇ.ಡಿ) ಕಾಯುತ್ತಿಲ್ಲ. ಇದರ ಬದಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ನಿರಂತರ ಸಮನ್ಸ್ ಜಾರಿ ಮಾಡುತ್ತಿದೆ ಎಂದು ದೆಹಲಿ ಸಚಿವೆ ಅತಿಶಿ ಬುಧವಾರ ಹೇಳಿದ್ದಾರೆ.
ಕಾನೂನಿನ ಪ್ರಕ್ರಿಯೆಯನ್ನು ಇ.ಡಿ ಗೌರವಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ನೀಡಲಾಗಿರುವ ಸರಣಿ ಸಮನ್ಸ್ ಸಂಬಂಧ ವಿವರಣೆ ಕೇಳಿದ ದೆಹಲಿ ಹೈಕೋರ್ಟ್ ಜಾರಿ ನಿರ್ದೇಶನಾಯಲಕ್ಕೆ ಇಂದು (ಬುಧವಾರ) ನೋಟಿಸ್ ಜಾರಿ ಮಾಡಿದೆ.
ಇ.ಡಿ ಸಮನ್ಸ್ ಪ್ರಶ್ನಿಸಿ ಕೇಜ್ರಿವಾಲ್, ಹೈಕೋರ್ಟ್ ಮೆಟ್ಟಿಲೇರಿದ್ದರು.
ಇ.ಡಿ ಸಮನ್ಸ್ಗಳನ್ನು ಕಳುಹಿಸುತ್ತಲೇ ಇದೆ. ಇ.ಡಿ ಸಮನ್ಸ್ಗಳ ನ್ಯಾಯಬದ್ಧತೆಯನ್ನು ನಾವು ಪ್ರಶ್ನಿಸಿದ್ದೇವೆ. ಆದರೆ ಸಮನ್ಸ್ಗೆ ಕೇಜ್ರಿವಾಲ್ ನೀಡಿದ ಉತ್ತರಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹೈಕೋರ್ಟ್ನಲ್ಲಿ ಕೇಜ್ರಿವಾಲ್ ಅವರ ಅರ್ಜಿಯನ್ನು ಇ.ಡಿ ವಿರೋಧಿಸಿದೆ. ಅವರ ಅರ್ಜಿ ವಜಾಗೊಳಿಸುವಂತೆ ಒತ್ತಾಯಿಸಿದೆ. ಇದಕ್ಕೆ ಇ.ಡಿ ಪ್ರತಿಕ್ರಿಯೆಯನ್ನು ಹೈಕೋರ್ಟ್ ಕೇಳಿದೆ ಎಂದು ಅತಿಶಿ ಹೇಳಿದ್ದಾರೆ.
ಇ.ಡಿ ಪ್ರತಿಕ್ರಿಯೆಗೆ ಎರಡು ವಾರಗಳ ಕಾಲಾವಕಾಶ ನೀಡಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ನಿಗದಿಪಡಿಸಿದೆ.