ದೆಹಲಿಯಲ್ಲಿ ನಡೆದ ಜಿ–20 ಶೃಂಗಸಭೆಯಲ್ಲಿ ವಿಶ್ವದ ಅನೇಕ ನಾಯಕರು ಭಾಗಿಯಾಗಿದ್ದು, ಒಟ್ಟಾಗಿ ರಾಜ್ಘಾಟ್ಗೆ ಭೇಟಿ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಕ್ಷಣವನ್ನು ಯಾರು ಮರೆಯಲು ಸಾಧ್ಯವಿಲ್ಲ. ಇದು ಗಾಂಧೀಜಿಯವರ ಚಿಂತನೆಗಳು ಪ್ರಪಂಚದಾದ್ಯಂತ ಇಂದಿಗೂ ಎಷ್ಟು ಪ್ರಸ್ತುತವಾಗಿವೆ ಎಂಬುದಕ್ಕೆ ದೊಡ್ಡ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ನಲ್ಲಿ ತಿಳಿಸಿದರು.
ಚಂದ್ರಯಾನ–3ರ ಯಶಸ್ಸಿನ ನಂತರ ಜಿ–20 ಮಹಾ ಕಾರ್ಯಕ್ರಮ ನಡೆದಿರುವುದು ಪ್ರತಿಯೊಬ್ಬ ಭಾರತೀಯನ ಸಂತೋಷವನ್ನು ದ್ವಿಗುಣಗೊಳಿಸಿದೆ. ಈ ಶೃಂಗಸಭೆಯಲ್ಲಿ, ಆಫ್ರಿಕನ್ ಒಕ್ಕೂಟವನ್ನು ಜಿ–20ಯ ಪೂರ್ಣ ಸದಸ್ಯರನ್ನಾಗಿ ಮಾಡುವ ಮೂಲಕ ಭಾರತವು ತನ್ನ ನಾಯಕತ್ವವನ್ನು ಸಾಬೀತುಪಡಿಸಿದೆ ಎಂದು ಮೋದಿ ಅವರು ಸಂತೋಷ ವ್ಯಕ್ತಪಡಿಸಿದರು.
‘ಆಜಾದಿ ಕಾ ಅಮೃತ ಕಾಲ’ ದೇಶದ ಪ್ರತಿಯೊಬ್ಬ ನಾಗರಿಕನಿಗೂ ‘ಕರ್ತವ್ಯ ಕಾಲ’ ಎಂದು ಮೋದಿ ಹೇಳಿದರು.
‘ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸೋತ್ ನದಿಯನ್ನು ಪುನರುಜ್ಜೀವನಗೊಳಿಸಲು 70 ಹಳ್ಳಿಗಳು ಒಗ್ಗೂಡಿವೆ. ಅಲ್ಲದೆ, ಜನರು ನದಿ ದಡದಲ್ಲಿ 10,000 ಬಿದಿರಿನ ಸಸಿಗಳನ್ನು ನೆಟ್ಟಿದ್ದಾರೆ’ ಇದು ಸಾರ್ವಜನಿಕ ಭಾಗವಹಿಸುವಿಕೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು.
‘ನಮ್ಮ ದೇಶದಲ್ಲಿ ಶಿಕ್ಷಣವನ್ನು ಸೇವೆಯಾಗಿ ನೋಡಲಾಗುತ್ತದೆ. ನೈನಿತಾಲ್ ಜಿಲ್ಲೆಯ ಯುವಕರು ಮಕ್ಕಳಿಗಾಗಿ ವಿಶಿಷ್ಟವಾದ ‘ಘೋಡಾ ಗ್ರಂಥಾಲಯವನ್ನು’ ಪ್ರಾರಂಭಿಸಿದ್ದಾರೆ. ಇದರಿಂದ ದೂರದ ಪ್ರದೇಶಗಳಲ್ಲಿಯೂ ಪುಸ್ತಕಗಳು ಮಕ್ಕಳನ್ನು ತಲುಪುತ್ತಿವೆ ಮತ್ತು ಈ ಸೇವೆಯು ಸಂಪೂರ್ಣ ಉಚಿತವಾಗಿದೆ’ ಎಂದು ಮೋದಿ ಹೇಳಿದರು. ಹೈದರಾಬಾದ್ನ 11 ವರ್ಷದ ಆಕರ್ಷನಾ ಅವರು ಮಕ್ಕಳಿಗಾಗಿ ಏಳು ಗ್ರಂಥಾಲಯಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಕೊಡುಗೆ ನೀಡುತ್ತಿರುವ ರೀತಿ ಸ್ಪೂರ್ತಿದಾಯಕವಾಗಿದೆ ಎಂದು ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.