ಗುವಾಹಟಿ: ಅಸ್ಸಾಂ ಮತ್ತು ವಿಜೋರಾಂ ರಾಜ್ಯಗಳ ನಡುವೆ ಶಾಂತಿ ನೆಲೆಸುತ್ತದೆ ಎಂದಾದರೆ ನಾನು ಮಿಜೋರಾಂ ಪೊಲೀಸರಿಂದ ಬಂಧನಕ್ಕೊಳಗಾಗಲು ಸಿದ್ಧ ಎಂದು ಅಸ್ಸಾಂ ಮುಖ್ಯಮಂತ್ರಿಹಿಮಂತ ಬಿಸ್ವ ಶರ್ಮಾ ಭಾನುವಾರ ಹೇಳಿದ್ದಾರೆ.
ಸುಮಾರು 165 ಕಿ.ಮೀ ಗಡಿ ಹಂಚಿಕೊಂಡಿರುವ ಅಸ್ಸಾಂ ಮತ್ತು ಮಿಜೋರಾಂ ನಡುವೆ ಜುಲೈ 26ರಂದು ಸಂಘರ್ಷ ನಡೆದಿದ್ದು, 6 ಮಂದಿ ಪೊಲೀಸರು, ಒಬ್ಬ ನಾಗರಿಕ ಮೃತಪಟ್ಟಿದ್ದರು. ಈ ವಿಚಾರ ಎರಡೂ ರಾಜ್ಯಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಎರಡೂ ಕಡೆಯ ಪೊಲೀಸರು ಪರಸ್ಪರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾತುಕತೆ ಮಾತ್ರ ವಿವಾದವನ್ನು ಬಗೆಹರಿಸಲು ನೆರವಾಗುತ್ತದೆ ಎಂದು ಪ್ರತಿಪಾದಿಸಿರುವ ಅಸ್ಸಾಂ ಮುಖ್ಯಮಂತ್ರಿ, ಒಂದುವೇಳೆ ಮಿಜೋರಾಂ ಪೊಲೀಸರಿಂದ ಸಮನ್ಸ್ ಬಂದರೆ, ಅದರಿಂದ ತಪ್ಪಿಸಿಕೊಳ್ಳಲು ಜಾಮೀನು ಪಡೆಯುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಹಿಂಪಡೆಯಲು ಮಿಜೋರಾಂ ಸರ್ಕಾರ ಸಿದ್ಧವಾಗಿದೆ ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿ ಲಾಲ್ನುನ್ಮಾವಿಯಾ ಚುವಾಂಗೊ ಭಾನುವಾರ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ಶರ್ಮಾ ಈ ರೀತಿಯ ಹೇಳಿಕೆ ನೀಡಿದ್ದಾರೆ.
‘ನನಗೆ ಸಮನ್ಸ್ ನೀಡಿದರೆ, ಸಿಲ್ಚಾರ್ನಿಂದ ವೈರೆಂಗ್ಟೆ (ಅಸ್ಸಾಂ ಅಧಿಕಾರಿಗಳನ್ನು ಕರೆಸಿಕೊಂಡ ಸ್ಥಳ)ಕ್ಕೆ` ಪಾದಯಾತ್ರೆ ಮೂಲಕ ಹೋಗಿ ತನಿಖೆಗೆ ಒಳಪಡುತ್ತೇನೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲು ಅವರು ನನ್ನನ್ನು ಬಂಧಿಸಿದರೆ, ನಾನು ಅದಕ್ಕೆ ಸಿದ್ಧ. ನಾನು ಗುವಾಹಟಿ ಹೈಕೋರ್ಟ್ನಿಂದ ಜಾಮೀನು ಪಡೆಯಲು ಬಯಸುವುದಿಲ್ಲ,’ ಎಂದು ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.