ಫತೇಪುರ/ಕೌಶಂಬಿ/ಫಿರೋಜಾಬಾದ್: ಕಳೆದ 24 ಗಂಟೆಗಳಲ್ಲಿ ಉತ್ತರಪ್ರದೇಶದ ಫತೇಪುರ, ಕೌಶಂಬಿ ಮತ್ತು ಫಿರೋಜಾಬಾದ್ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಕನಿಷ್ಠ 12 ಮಂದಿ ಮೃತಪಟ್ಟಿದ್ಧಾರೆ.
‘ಫತೇಪುರದಲ್ಲಿ ಮಹಿಳೆಯರು ಸೇರಿದಂತೆ ಐದು ಮಂದಿ ಮತ್ತು ಫಿರೋಜಾಬಾದ್ನಲ್ಲಿ ಮೂವರು ಮತ್ತು ಕೌಶಂಬಿಯಲ್ಲಿ ನಾಲ್ವರು ಸಿಡಿಲಿನ ಆಘಾತದಿಂದ ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ಫತೇಪುರದ ಮೃತಾಳುಗಳನ್ನು ಸೊನಿಯಾ(54), ಮಥುರಾ(37), ಶಿವಕಾಳಿ(60), ಕೌಶಲ್ಯ ದೇವಿ(50), ದಿನೇಶ್ ಕುಮಾರ್ ಪಾಲ್(35) ಎಂದು ಗುರುತಿಸಲಾಗಿದೆ.
‘ಕಲ್ಯಾಣಪುರ ಪ್ರದೇಶದ ಗುಮದಾಪುರ ಗ್ರಾಮದಲ್ಲಿ ಸಿಡಿಲು ಬಡಿತದಿಂದಾಗಿ ಇಬ್ಬರು ಸಹೋದರರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಕೌಶಂಬಿ ಜಿಲ್ಲೆಯಲ್ಲಿ ಮೂರತ್ ಧ್ವಜ್(50), ರಾಮಚಂದ್ರ(32), ಮಯಾಂಕ್ ಸಿಂಗ್(15) ಅವರು ಮಿಂಚಿಗೆ ಸಂಬಂಧಿಸಿದ ಪ್ರತ್ಯೇಕ ಘಟನೆಗಳಲ್ಲಿ ಮೃತಪಟ್ಟಿದ್ದಾರೆ. ಫಿರೋಜಾಬಾದ್ ಜಿಲ್ಲೆಯ ರೈತರುಗಳಾದ ಹೇಮರಾಜ್(50), ರಾಮಸೇವಕ್(40),ಅಮರ್ ಸಿಂಗ್ ಅವರು ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ.
ಮೃತರ ಕುಟುಂಬಕ್ಕೆ ಪರಿಹಾರ ಧನ ಮತ್ತು ನೆರವು ಒದಗಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.