ನವದೆಹಲಿ (ಪಿಟಿಐ): ‘ಗುಜರಾತ್ ರಾಜ್ಯಕ್ಕೆ ಕೆಟ್ಟ ಹೆಸರು ತರಲು, ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ಎರಡು ದಶಕಗಳ ಕಾಲ ದೊಡ್ಡ ಪ್ರಮಾಣದಲ್ಲಿ ಸಂಚು ನಡೆಸಿದ್ದಾರೆ’ ಎಂದು ಗುಜರಾತ್ ಸರ್ಕಾರ ತಿಳಿಸಿದೆ.
2002ರ ಗಲಭೆಗೆ ಸಂಬಂಧಿಸಿ ಝಾಕಿಯಾ ಜಾಫ್ರಿ ಅವರ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ಗೆ, ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
‘ಝಾಕಿಯಾ ಅವರ ಬಗ್ಗೆ ಹೇಳುವಂತದ್ದೇನೂ ಇಲ್ಲ.ಅವರು ಆಪ್ತರನ್ನು ಕಳೆದುಕೊಂಡಿದ್ದಾರೆ. ಆದರೆ, ಒಬ್ಬ ವಿಧವೆಯ ಸಂಕಷ್ಟಗಳನ್ನು ಆಧರಿಸಿ ಶೋಷಣೆ ಮಾಡುವುದಕ್ಕೂ ಒಂದು ಮಿತಿ ಇದೆ’ ಎಂದು ಮೆಹ್ತಾ ವಾದಿಸಿದರು.
ಅಹಮದಾಬಾದ್ನ ಗುಲ್ಬರ್ಗ್ ಸೊಸೈಟಿಯಲ್ಲಿ ಫೆ.28, 2002ರಲ್ಲಿ ಹತ್ಯೆಯಾಗಿದ್ದ ಕಾಂಗ್ರೆಸ್ ನಾಯಕ ಎಶಾನ್ ಜಾಫ್ರಿ ಅವರ ಪತ್ನಿ ಝಾಕಿಯಾ. ಗಲಭೆ ಪ್ರಕರಣದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸೇರಿದಂತೆ 64 ಜನರನ್ನು ಆರೋಪಮುಕ್ತಗೊಳಿಸಿದ್ದ ಎಸ್ಐಟಿ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾಸೆಟಲ್ವಾಡ್ ಎರಡನೇ ಅರ್ಜಿದಾರರಾಗಿದ್ದರು. ವಿಚಾರಣೆಯಲ್ಲಿ ಎಸ್ಐಟಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ‘ಪ್ರಕರಣ ಇನ್ನೂ ಬಿಸಿಯಾಗಿರುವಂತೆ ನೋಡಿಕೊಳ್ಳುವ ಅವರ ಉದ್ದೇಶ, ಕಾರಣ, ಪ್ರೇರಣೆ ಏನು? ಇದರ ಹಿಂದೆ ದೊಡ್ಡ ಸಂಚಿದೆ’ ಎಂದು ಹೇಳಿದರು.