ಲಖಿಸರಾಯ್: ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಟ್ರಕ್ ಮತ್ತು ಎಸ್ಯುವಿ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಐವರು ಬಾಲಿವುಡ್ ನಟ, ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ದೂರದ ಸಂಬಂಧಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.
ಡಿಕ್ಕಿಯ ರಭಸಕ್ಕೆ ಎಸ್ಯುವಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಟ್ರಕ್ ಚಾಲಕ ಮತ್ತು ಸಹಾಯಕ ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.
ಮೃತರು ಹರಿಯಾಣದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್ ಅವರ ಸಹೋದರಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಂತರ ಪಾಟ್ನಾದಿಂದ ಜಮುಯಿಗೆ ಹಿಂತಿರುಗುತ್ತಿದ್ದರು. ಒ.ಪಿ ಸಿಂಗ್ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸೋದರಿಯ ಪತಿ.
ಅಪಘಾತದಲ್ಲಿ ಮೃತಪಟ್ಟವರನ್ನು ಲಾಲ್ಜೀತ್ ಸಿಂಗ್, ನೇಮಾನಿ ಸಿಂಗ್, ಅಮಿತ್ ಶಂಕರ್ ಅಲಿಯಾಸ್ ರಾಮ್ ಚಂದ್ರ ಸಿಂಗ್, ಸುನಿತಾ ದೇವಿ, ಅನಿತಾ ದೇವಿ ಮತ್ತು ಚಾಲಕ ಚೇತನ್ ಕುಮಾರ್ ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ಇಬ್ಬರನ್ನು ವಾಲ್ಮೀಕಿ ಸಿಂಗ್ ಮತ್ತು ಪ್ರಸಾದ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಹಲ್ಸಿ ವೃತ್ತ ಪೊಲೀಸ್ ಅಧಿಕಾರಿ ವಿವೇಕ್ ಕುಮಾರ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಆರಂಭದಲ್ಲಿ ಸಿಕಂದರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ನಂತರ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಅಪಘಾತದ ತೀವ್ರತೆಗೆ ಎಸ್ಯುವಿ ನಜ್ಜುಗುಜ್ಜಾಗಿತ್ತು. ಕಾರಿನಿಂದ ದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಡೆಬೇಕಾಯಿತು. ಗಾಯಾಳುಗಳನ್ನು ಈಗಾಗಲೇ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ’ ಎಂದು ವಿವೇಕ್ ಕುಮಾರ್ ತಿಳಿಸಿದರು.