ಲಖನೌ: ತೈಲ ಬೆಲೆ ಏರಿಕೆ ಬಗೆಗಿನ ಟೀಕೆಗಳನ್ನು ತಳ್ಳಿಹಾಕಿರುವ ಉತ್ತರ ಪ್ರದೇಶ ಸಚಿವ ಉಪೇಂದ್ರ ತಿವಾರಿ, ದೇಶದ ಶೇ95 ರಷ್ಟು ಮಂದಿ ಪೆಟ್ರೋಲ್ ಬಳಸುವುದಿಲ್ಲ ಎಂದು ಹೇಳಿದ್ದಾರೆ.
ಜಲೌನ್ನಲ್ಲಿಮಾಧ್ಯಮದವರೊಂದಿಗೆ ಮಾತನಾಡಿರುವ ಅವರು,ಸದ್ಯ ದೇಶದ ಜನರ ತಲಾದಾಯವನ್ನು 2014ರಲ್ಲಿದ್ದ ತಲಾದಾಯಕ್ಕೆ ಹೋಲಿಸಿದರೆ ವಾಸ್ತವದಲ್ಲಿ ಇಂಧನ ದರ ಅಷ್ಟೇನೂ ಏರಿಕೆಯಾಗಿಲ್ಲ ಎಂಬುದು ತಿಳಿಯುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ʼಇಂದು, ನಾಲ್ಕು ಚಕ್ರದ ವಾಹನಗಳನ್ನು ಮತ್ತು ಪೆಟ್ರೋಲ್ಬಳಸುವ ಕೆಲವೇ ಜನರು ಇದ್ದಾರೆ. ಸದ್ಯ ಶೇ 95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲʼ ಎಂದಿದ್ದಾರೆ.
ದೇಶ ಬಹು ಭಾಗಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿರುವ ಹೊತ್ತಿನಲ್ಲಿ ತಿವಾರಿ ಈ ಹೇಳಿಕೆ ನೀಡಿದ್ದಾರೆ. ಕೇಂದ್ರದ ವಿರುದ್ಧ ಆರೋಪ ಮಾಡಲು ಪ್ರತಿಪಕ್ಷಗಳಿಗೆ ಬೇರೆ ಯಾವುದೇ ವಿಚಾರಗಳಿಲ್ಲ ಎಂದೂ ಹೇಳಿದ್ದಾರೆ.
ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಆಡಳಿತವನ್ನು ಉಲ್ಲೇಖಿಸಿ,ʼ2014ರ ಹಿಂದಿನ ಅಂಕಿ-ಅಂಶಗಳನ್ನು ನೀವು ನೋಡಬಹುದು. ಮೋದಿ ಮತ್ತು ಯೋಗಿ ಸರ್ಕಾರಗಳು ರಚನೆಯಾದ ನಂತರ ತಲಾದಾಯ ಎಷ್ಟಿದೆ? ಎಂದು ಪ್ರಶ್ನಿಸಿದ್ದಾರೆ.
ಇಂದು ತಲಾದಾಯ ದ್ವಿಗುಣಗೊಂಡಿದೆ. ಅದೇರೀತಿ, ಉಚಿತ ಶಿಕ್ಷಣ ಮತ್ತು ಕೋವಿಡ್ ಲಸಿಕೆ ನೀಡಲಾಗಿದೆ ಎನ್ನುವಮೂಲಕ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.