ನವದೆಹಲಿ: ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಮೊದಲು ಆಮ್ ಆದ್ಮಿ ಪಕ್ಷವು (ಎಎಪಿ) ಭಾರತದ 75ನೇ ವರ್ಷದ ಸಾತಂತ್ರ್ಯೋತ್ಸವ ಪ್ರಯುಕ್ತ ಅಯೋಧ್ಯೆ, ಲಖನೌ ಮತ್ತು ನೋಯಿಡಾದಲ್ಲಿ ‘ತಿರಂಗಾ ಯಾತ್ರೆಗಳನ್ನು’ ಕೈಗೊಳ್ಳಲಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಯಾತ್ರೆ ತೆರಳಲಿದೆ. ನೋಯಿಡಾದಲ್ಲಿ ಸೆ.1ರಂದು ಯಾತ್ರೆ ನಡೆಯಲಿದೆ ಎಂದು ಪಕ್ಷದ ನಾಯಕ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಈ ಯಾತ್ರೆಗಳಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭಾಗವಹಿಸುವರು. ಭ್ರಷ್ಟಾಚಾರ ಮತ್ತು ಜಾತೀಯತೆಯಿಂದ ಕೂಡಿದ ರಾಜಕೀಯದ ವಿರುದ್ಧ ಜನರನ್ನು ಒಗ್ಗೂಡಿಸುವುದು ಯಾತ್ರೆಯ ಉದ್ದೇಶ ಎಂದು ವಿವರಿಸಿದ್ದಾರೆ.
ಎಎಪಿಯು ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ.