ಅಹಮದಬಾದ್: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಶನಿವಾರ ಜೈಲಿನಿಂದ ಹೊರ ಬಂದರು.
ಜೂನ್ 26 ರಂದು ಅವರನ್ನು ಬಂಧಿಸಿದಾಗಿನಿಂದ ಇಲ್ಲಿನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಅವರನ್ನು ಜಾಮೀನು ಪ್ರಕ್ರಿಯೆಯಗಾಗಿ ಸೆಷನ್ಸ್ ನ್ಯಾಯಾಧೀಶ ವಿ.ಎ.ರಾಣಾ ಎದುರು ಹಾಜರುಪಡಿಸಲಾಯಿತು.
‘ಸೆಷನ್ಸ್ ನ್ಯಾಯಾಲಯವು ಎರಡು ಷರತ್ತುಗಳನ್ನು ವಿಧಿಸಿದೆ. ₹ 25 ಸಾವಿರಗಳ ವೈಯಕ್ತಿಕ ಬಾಂಡ್ಒದಗಿಸಬೇಕು ಮತ್ತು ಕೋರ್ಟ್ ಪೂರ್ವಾನುಮತಿ ಇಲ್ಲದೆ ಭಾರತ ತೊರೆಯದಂತೆ ಸೂಚಿಸಿದೆ’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪಟೇಲ್ ಹೇಳಿದರು.