ಪಟಿಯಾಲ: ಕೃಷಿ ತಿದ್ದುಪಡಿ ಕಾಯ್ದೆಯು ಸರಿಯಾದುದಲ್ಲ ಎಂದು ಅಭಿಪ್ರಾಯಪಟ್ಟಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ನೂತನ ಕಾಯ್ದೆಗಳನ್ನು ವಾಪಸು ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ವಯಸ್ಸಾಗಿರುವ ರೈತರು ಗಡಿ ಭಾಗದಲ್ಲಿ ಧರಣಿ ಕುಳಿತಿದ್ದಾರೆ. ಈ ಧರಣಿ ಅವರಿಗಾಗಿಯಲ್ಲ, ಅವರ ಮಕ್ಕಳು ಮತ್ತು ಭವಿಷ್ಯದ ಪೀಳಿಗೆಗಾಗಿ. ಸಂವಿಧಾನದ 7ನೇ ಪರಿಚ್ಛೇದ ಅನುಸಾರ ಕೃಷಿ ಎಂದಿಗೂ ರಾಜ್ಯದ ವಿಷಯವಾಗಿದ್ದು, ಕೇಂದ್ರ ರೂಪಿಸಿರುವ ಕಾಯ್ದೆ ಸರಿಯಾದುದಲ್ಲ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿದ ಅವರು, ಕೃಷಿಕರ ಬೇಡಿಕೆಯನ್ನು ಈಡೇರಿಸಬೇಕು ಎಂಬುದು ನನ್ನ ಮನವಿ ಎಂದರು. ಶಾಂತಿ ಕಾಪಾಡಿಕೊಳ್ಳಿ, ದೇಶ ನಿಮ್ಮೊಂದಿಗೆ ಇದೆ ಎಂದು ಪ್ರತಿಭಟನನಿರತ ರೈತರಿಗೆ ಮನವಿ ಮಾಡಿದರು.