ನವದೆಹಲಿ: ಅಮೆಜಾನ್ ಸಂಸ್ಥೆಯು ಜಂಟಿ ಸಂಸದೀಯ ಸಮಿತಿ ಎದುರು ಹಾಜರಾಗಲು ನಿರಾಕರಿಸಿದೆ.
‘ದತ್ತಾಂಶ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಸಮಿತಿ ಎದುರು ಹಾಜರಾಗುವಂತೆ ಅಮೆಜಾನ್ ಸಂಸ್ಥೆಗೆ ಸೂಚಿಸಲಾಗಿತ್ತು. ಇದೇ 28ರಂದು ಆ ಸಂಸ್ಥೆಯ ಪ್ರತಿನಿಧಿಗಳು ಸಮಿತಿಯ ಎದುರು ಹಾಜರಾಗಬೇಕು. ಇಲ್ಲವಾದರೆ ನಿಯಮ ಉಲ್ಲಂಘಿಸಿದಂತಾಗುತ್ತದೆ’ ಎಂದು ಸಮಿತಿಯ ಮುಖ್ಯಸ್ಥೆ ಮತ್ತು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಶುಕ್ರವಾರ ತಿಳಿಸಿದ್ದಾರೆ.
‘ಅಮೆಜಾನ್ ಸಂಸ್ಥೆಯು ಸಮಿತಿಯ ಎದುರು ಹಾಜರಾಗದೆ ಹೋದರೆ ಆ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸುತ್ತೇವೆ. ಸಮಿತಿಯ ಸದಸ್ಯರೆಲ್ಲರೂ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
ಫೇಸ್ಬುಕ್ ಇಂಡಿಯಾ ಸಂಸ್ಥೆಯ ಪಾಲಿಸಿ ವಿಭಾಗದ ಮುಖ್ಯಸ್ಥೆ ಅಂಖಿ ದಾಸ್ ಅವರು ದತ್ತಾಂಶ ಭದ್ರತೆಯ ವಿಚಾರವಾಗಿ ಶುಕ್ರವಾರ ಸಮಿತಿಯ ಎದುರು ಹಾಜರಾದರು.
‘ಫೇಸ್ಬುಕ್ ಇಂಡಿಯಾದ ಪ್ರತಿನಿಧಿಗಳು ಸಮಿತಿಯ ಸದಸ್ಯರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಿದರು’ ಎಂದು ಮೂಲಗಳು ತಿಳಿಸಿವೆ.
‘ಫೇಸ್ಬುಕ್ ಸಂಸ್ಥೆಯು ತನ್ನ ಜಾಹೀರಾತುದಾರರ ಲಾಭಕ್ಕಾಗಿ ಬಳಕೆದಾರರ ದತ್ತಾಂಶವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಮಿತಿಯ ಸದಸ್ಯರೊಬ್ಬರು ಸಲಹೆ ನೀಡಿದರು’ ಎಂದೂ ಹೇಳಲಾಗಿದೆ.
ಸಮಿತಿಯು, ಟ್ವಿಟರ್, ಗೂಗಲ್ ಹಾಗೂ ಪೇಟಿಎಂ ಸಂಸ್ಥೆಗಳ ಅಧಿಕಾರಿಗಳಿಗೂ ಸಮನ್ಸ್ ನೀಡಿದೆ.