ಹುತಾತ್ಮ ಯೋಧನ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ಘೋಷಿಸಿದ ಆಂಧ್ರ ಸಿಎಂ

ಅಮರಾವತಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಆಂಧ್ರ ಪ್ರದೇಶದ ಯೋಧನ ಕುಟುಂಬಕ್ಕೆ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ₹ 50 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಆಂಧ್ರದ ಗುಂಟೂರು ಜಿಲ್ಲೆಯ ಯೋಧ ಸೆಪಾಯ್ ಮರುಪ್ರೊಲು ಜಸ್ವಂತ್ ರೆಡ್ಡಿ ಹುತಾತ್ಮರಾದವರು. ಅವರಿಗೆ ಗೌರವ ಸಲ್ಲಿಸಿದ ಜಗನ್, ಜಸ್ವಂತ್ ರೆಡ್ಡಿ ಅವರ 'ಪ್ರಾಣ ತ್ಯಾಗವು' ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ. ಹಾಗೆಯೇ, ಯೋಧನ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಡಪ ಜಿಲ್ಲಾ ಪ್ರವಾಸದಲ್ಲಿದ್ದಾಗ ಜಗನ್ ಅವರಿಗೆ ಯೋಧ ಜಸ್ವಂತ್ ರೆಡ್ಡಿ ಹುತಾತ್ಮರಾದ ಸಂಗತಿ ತಿಳಿಸಲಾಯಿತು.
ಜಮ್ಮು ಕಾಶ್ಮೀರದ ರಾಜೋರಿ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನದ ಉಗ್ರರ ಒಳನುಸುಳುವಿಕೆಯನ್ನು ಹಿಮ್ಮೆಟ್ಟಿಸಲು ದಾಳಿ ನಡೆಸಲಾಯಿತು. ಸೇನೆಯ ದಾಳಿವೇಳೆ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಅದೇವೇಳೆ ಗಾಯಗೊಂಡಿದ್ದ ರೆಡ್ಡಿ ಹಾಗೂ ಮತ್ತೊಬ್ಬ ಯೋಧ ಶ್ರೀಜಿತ್ ಎಂ. ಎಂಬುವವರು ಹುತಾತ್ಮರಾಗಿದ್ದಾರೆ ಎಂದು ಸೇನೆಯ ವಕ್ತಾರ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.