ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹವು ಕನಿಷ್ಠ 11 ಜಿಲ್ಲೆಗಳ 1.33 ಲಕ್ಷ ಜನರ ಮೇಲೆ ಪರಿಣಾಮ ಬೀರಿದ್ದು, ವಿಪತ್ತು ನಿರ್ವಹಣಾ ಪಡೆಗಳಿಂದ 162 ಜನರನ್ನು ಸ್ಥಳಾಂತರಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಹಲವಾರು ನದಿಗಳಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಗುವಾಹಟಿಯಲ್ಲಿನ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಬಿಡುಗಡೆ ಮಾಡಿರುವ ಪ್ರವಾಹದ ಬುಲೆಟಿನ್ ಪ್ರಕಾರ, ಪ್ರವಾಹದ ಹೊಡೆತಕ್ಕೆ ಸಿಲುಕಿದ್ದ ಸುಮಾರು 6,217 ಜನರು ಸದ್ಯ ಬೊಂಗೈಗಾಂವ್ ಮತ್ತು ಚಿರಾಂಗ್ ಜಿಲ್ಲೆಯ ನೆರೆ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಬಿಸ್ವನಾಥ್, ಸೋನಿತ್ ಪುರ, ಬೊಂಗೈಗಾಂವ್, ಚಿರಾಂಗ್, ಧೇಮಾಜಿ, ದಿಬ್ರುಗಢ, ಜೋರ್ಹಾತ್, ಲಖಿಂಪುರ, ಮಜುಲಿ, ಶಿವಸಾಗರ ಮತ್ತು ತಿನ್ಸುಕಿಯಾ ಜಿಲ್ಲೆಗಳ ಕನಿಷ್ಠ 243 ಹಳ್ಳಿಗಳು ಪ್ರವಾಹದಿಂದ ಬಾಧಿತವಾಗಿವೆ. ಉತ್ತರ ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ 52 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿವೆ.
ಹೀಗಾಗಿ ರಾಜ್ಯ ಸರ್ಕಾರವು ಬೊಂಗೈಗಾಂವ್, ಚಿರಾಂಗ್, ಧೆಮಾಜಿ ಮತ್ತು ತಿನ್ಸುಕಿಯಾ ಜಿಲ್ಲೆಗಳಲ್ಲಿ 74 ಪರಿಹಾರ ಶಿಬಿರಗಳನ್ನು ತೆರೆದಿದೆ.
ಅರುಣಾಚಲ ಪ್ರದೇಶದ ಬೆಟ್ಟಗಳ ಮೇಲೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಅಸ್ಸಾಂನ ಧೇಮಾಜಿ, ಲಖಿಂಪುರ ಮತ್ತು ಬಿಸ್ವಾನಾಥ್ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಭೂತಾನ್ ಬೆಟ್ಟಗಳ ಮೇಲಿಂದ ಕೆಳಗೆ ಸುರಿಯುವ ನೀರಿನಿಂದಾಗಿ ಪಶ್ಚಿಮ ಅಸ್ಸಾಂನ ಚಿರಾಂಗ್ ಮತ್ತು ಬೊಂಗೈಗಾಂವ್ ಜಿಲ್ಲೆಗಳಲ್ಲಿ ಸಂಕಷ್ಟವನ್ನು ತಂದೊಡ್ಡಿದೆ.
ಪ್ರವಾಹದಿಂದಾಗಿ ಈವರೆಗೂ ಯಾವುದೇ ಸಾವು ವರದಿಯಾಗಿಲ್ಲ. ಆದರೆ ಅಸ್ಸಾಂನಾದ್ಯಂತ ಹಲವಾರು ಗ್ರಾಮಗಳಲ್ಲಿ ಪ್ರವಾಹದಿಂದ ರಸ್ತೆಗಳು, ಮೋರಿಗಳು ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ಅಸ್ಸಾಂನಲ್ಲಿ ಪ್ರತಿ ವರ್ಷ ಮುಂಗಾರಿನ ಸಮಯದಲ್ಲಿ ಪ್ರವಾಹವು ಲಕ್ಷಾಂತರ ಜನರನ್ನು ಬಾಧಿಸುತ್ತದೆ.