ಪಟ್ನಾ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಪಕ್ಷವು ಮೈತ್ರಿ ಮಾಡಿಕೊಳ್ಳಲು ಸಿದ್ಧವಿದೆ ಎಂಬ ಸುಳಿವನ್ನು ಆರ್ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಬುಧವಾರ ನೀಡಿದರು.
ಬಿಹಾರದ ತಾರಾಪುರ ಹಾಗೂ ಕುಶೇಶ್ವರ ಆಸ್ತಾನ ವಿಧಾನಸಭಾ ಕ್ಷೇತ್ರಗಳಿಗೆ ಇದೇ 30 ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದೆ. ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳ ಮೈತ್ರಿ ಅಗತ್ಯ. ಕೂಡಲೇ ಇಂಥ ಪಕ್ಷಗಳ ಸಭೆ ಕರೆಯುವಂತೆ ಅವರಿಗೆ ಮನವಿ ಮಾಡಿದೆ’ ಎಂದು ಲಾಲುಪ್ರಸಾದ್ ಹೇಳಿದರು.
‘ನೀವು ರಾಷ್ಟ್ರವ್ಯಾಪಿ ಬೆಂಬಲ ಹೊಂದಿರುವ ಪಕ್ಷವೊಂದರ ನಾಯಕಿಯಾಗಿದ್ದೀರಿ. ಬಿಜೆಪಿ ವಿರೋಧಿಸುವ ಸಮಾನ ಮನಸ್ಕ ಪಕ್ಷಗಳ ಸಭೆಯನ್ನು ನೀವೇ ಆಯೋಜಿಸಬೇಕು ಎಂಬುದಾಗಿ ಸೋನಿಯಾ ಗಾಂಧಿಯವರಿಗೆ ನಾನು ಹೇಳಿದೆ’ ಎಂದೂ ತಿಳಿಸಿದರು.
ಇತ್ತೀಚಿಗೆ ಕಾಂಗ್ರೆಸ್ ಹಾಗೂ ಆರ್ಜೆಡಿ ನಡುವಿನ ಸಂಬಂಧ ಉತ್ತಮವಾಗಿಲ್ಲ. ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸುವುದಾಗಿ ಆರ್ಜೆಡಿ ಘೋಷಿಸಿದ ನಂತರ ಉಭಯ ಪಕ್ಷಗಳ ಸಂಬಂಧ ಮತ್ತಷ್ಟೂ ಹಳಸಿದೆ. ಇಂಥ ಸಂದರ್ಭದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.