ಲಖನೌ: ಪ್ರತಿಪಕ್ಷಗಳ ಹಿಂಸಾಚಾರದ ಆರೋಪದ ಮಧ್ಯೆ ಬ್ಲಾಕ್ ಪಂಚಾಯತ್ ಅಧ್ಯಕ್ಷರ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಶನಿವಾರ ಭರ್ಜರಿ ಜಯ ಸಾಧಿಸಿದೆ.
ಚುನಾವಣೆಗೆ ಮುನ್ನ ನಡೆದ ಹಿಂಸಾಚಾರದ ಘಟನೆಗಳ ಬಗ್ಗೆ ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ದೂಷಿಸಿವೆ.
ವಿರೋಧ ಪಕ್ಷಗಳ ಬೆಂಬಲವಿರುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಿಲ್ಲ ಎಂಬ ಆರೋಪದೊಂದಿಗೆ ರಾಜ್ಯದ ಹಲವೆಡೆ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದ್ದವು. ಆದರೆ, ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ ಎಂದು ಹೇಳಿರುವ ಆದಿತ್ಯನಾಥ್, ಶೇಕಡಾ 85 ರಷ್ಟು ಸ್ಥಾನಗಳಲ್ಲಿ ಆಡಳಿತ ಪಕ್ಷ ಗೆದ್ದಿದೆ ಎಂದು ಹೇಳಿದ್ದಾರೆ.
ಬ್ಲಾಕ್ ಪಂಚಾಯತ್ ಅಧ್ಯಕ್ಷರ 825 ಸ್ಥಾನಗಳ ಪೈಕಿ 635 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಎಂದು ಸಿಎಂ ಹೇಳಿದ್ದಾರೆ.
ಈ ಮಧ್ಯೆ, ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೊಡ್ಡ ಗೆಲುವು’. ಯೋಗಿ ಆದಿತ್ಯನಾಥ್ ಸರ್ಕಾರದ ನೀತಿಗಳು ಮತ್ತು ಜನಪರ ಯೋಜನೆಗಳಿಂದ ಜನರು ಪಡೆದ ಲಾಭಗಳ ಪ್ರತಿಬಿಂಬವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಪಕ್ಷದ ಎಲ್ಲ ಕಾರ್ಯಕರ್ತರು ಈ ಗೆಲುವಿನ ಅಭಿನಂದನೆಗಳಿಗೆ ಅರ್ಹರು ಎಂದಿದ್ದಾರೆ.
‘ಶಾಂತಿಯುತ ಮತ್ತು ನ್ಯಾಯಯುತ’ ಮತದಾನಕ್ಕಾಗಿ ರಾಜ್ಯ ಚುನಾವಣಾ ಆಯೋಗವನ್ನು ಸಿಎಂ ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿಯವರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದಾಗಿ, ಸಮಾಜದ ಪ್ರತಿಯೊಂದು ವರ್ಗದವರಿಗೂ ತಾರತಮ್ಯವಿಲ್ಲದೆ ಕೆಲಸ ಮಾಡಿದ ಫಲ ಈ ಚುನಾವಣಾ ಫಲಿತಾಂಶ ಎಂದು ಅವರು ಹೇಳಿದರು.
‘ಜನರ ಒಲವು ಬಿಜೆಪಿಯ ಕಡೆಗೆ ಇತ್ತು ಮತ್ತು ಪಕ್ಷದ ಕಾರ್ಯತಂತ್ರವು ಈ ಫಲಿತಾಂಶವನ್ನು ನೀಡಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ’ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.