ಪಟ್ನಾ: ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರ ಬಿರುಸುಗೊಂಡಿರುವ ಮಧ್ಯೆಯೇ, ಜೆಡಿ(ಯು) ನಾಯಕ ಉಪೇಂದ್ರ ಕುಶ್ವಾಹ ಮಾಡಿರುವ ಟ್ವೀಟೊಂದು ಅವರ ಪಕ್ಷವು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿರುವ ಸ್ಪಷ್ಟ ಸುಳಿವು ನೀಡಿದೆ.
ಹೊಸ ಒಕ್ಕೂಟದ ನಾಯಕತ್ವ ವಹಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಅಭಿನಂದನೆಗಳು ಎಂದು ಕುಶ್ವಾಹ ಟ್ವೀಟ್ ಮಾಡಿದ್ದಾರೆ.
‘ಹೊಸ ರೂಪದಲ್ಲಿ ಹೊಸ ಒಕ್ಕೂಟದ ನಾಯಕತ್ವದ ಹೊಣೆಗಾರಿಕೆ ವಹಿಸಿಕೊಳ್ಳುತ್ತಿರುವುದಕ್ಕಾಗಿ ನಿತೀಶ್ ಕುಮಾರ್ ಅವರಿಗೆ ಅಭಿನಂದನೆಗಳು. ನಿತೀಶ್ ಅವರೇ, ಹೀಗೆಯೇ ಮುಂದುವರಿಯಿರಿ. ದೇಶ ನಿಮಗಾಗಿ ಕಾಯುತ್ತಿದೆ’ ಎಂದು ಕುಶ್ವಾಹ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಮಧ್ಯೆ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಜತೆ ನಿತೀಶ್ ಕುಮಾರ್ ಅವರು ರಾಜಭವನಕ್ಕೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.
ಇದಕ್ಕೂ ಮುನ್ನ, ‘ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾದರೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಬಹುಶಃ ಒಂದೆರಡು ದಿನಗಳಲ್ಲಿ ಈ ವಿದ್ಯಮಾನ ನಡೆಯಲಿದೆ’ ಎಂದು ಜೆಡಿ(ಯು) ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದ್ದವು.
नये स्वरूप में नये गठबंधन के नेतृत्व की जवाबदेही के लिए श्री नीतीश कुमार जी को बधाई। नीतीश जी आगे बढ़िए। देश आपका इंतजार कर कर रहा है।